ಮತದಾರರ ಈ ಮನಃಸ್ಥಿತಿ ಕುರಿತು ಮಾತನಾಡಿರುವ ರಾಜಕೀಯ ವಿಶ್ಲೇಷಕ ಎನ್ ಕೆ ಮೋಹನ್ ರಾಮ್ ಅವರು, ಮತದಾರರ ಈ ನಡವಳಿಕೆಗೆ ಪ್ರಭಾವಿಗಳು ಮತ್ತು ಶ್ರೀಮಂತರನ್ನು ದೂಷಿಸಬೇಕು ಎಂದು ಹೇಳಿದ್ದಾರೆ. ' ನಿಮ್ಮ ಬಳಿ ಸಾಕಷ್ಟು ಪ್ರಮಾಣದಲ್ಲಿ ದುಡ್ಡಿದ್ದರೆ, ಅಥವಾ ನೀವು ಪ್ರಭಾವಿಗಳಾಗಿದ್ದರೆ ನಿಮ್ಮ ಸಮಸ್ಯೆ ಪರಿಹರಿಸಲು ರಾಜಕಾರಣಿಗಳೇ ನಿಮ್ಮ ಮನೆಗೆ ಬರುತ್ತಾರೆ. ಅದೇ ನೀವು ಬಡವರಾಗಿದ್ದರೆ ಸಮಸ್ಯೆ ನೀಗಿಸಿಕೊಳ್ಳಲು ಸರ್ಕಾರಿ ಕಚೇರಿ, ಸ್ಥಳೀಯ ರಾಜಕಾರಣಿಗಳ ಮನೆಗೆ ಅಲೆದಾಡುತ್ತಿರಬೇಕು. ಉದಾಹರಣೆಗೆ ಹೇಳುತ್ತೇನೆ, ಮಲ್ಲೇಶ್ವರ ದಂತಹ ಪ್ರತಿಷ್ಠಿತ ಪ್ರದೇಶದಲ್ಲಿ ಬಹುತೇಕ ಎಲ್ಲರೂ ಶ್ರೀಮಂತರೆ.. ಇಲ್ಲಿನ ಬಹುತೇಕ ನಿವಾಸಿಗಳು ಶ್ರೀಮಂತರಾಗಿದ್ದು, ಅವರ ಮಕ್ಕಳೆಲ್ಲಾ ವಿದೇಶಗಳಲ್ಲಿ ನೆಲೆಸಿದ್ದಾರೆ. ಅವರೆಲ್ಲರೂ ತಮ್ಮ ತಮ್ಮ ಉದ್ಯಮಗಳು, ಷೇರುಪೇಟೆ, ಡಾಲರ್ ಕುರಿತು ಮಾತನಾಡುತ್ತಾರೆಯೇ ಹೊರತು ಸ್ಥಳೀಯ ಸಮಸ್ಯೆಗಳ ಕುರಿತು ಯಾರೂ ಮಾತನಾಡುವುದಿಲ್ಲ. ಇನ್ನು ಮತದಾನದ ಕುರಿತು ಯಾರು ತಲೆಕೆಡಿಸಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.