ಸಾಕಷ್ಟು ಸಮಸ್ಯೆಗಳು ಎದುರಿದ್ದರೂ, ಸರ್ಕಾರಿ ನೌಕರರು ಚುನಾವಣಾ ಕರ್ತವ್ಯಕ್ಕೆ ಹಾಜರು
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯ ಮತದಾನ ದಿನದ ಕರ್ತವ್ಯಕ್ಕಾಗಿ ರಾಜ್ಯದ ಸುಮಾರು 3.5 ಲಕ್ಷ ಸರ್ಕಾರಿ ನೌಕರರು ಆಗಮಿಸಿದ್ದಾರೆ. ರಾಜ್ಯದ ಜನತೆ ಮತದಾನ ಪ್ರಕ್ರಿಯೆಯನ್ನು ಟಿವಿ, ಪೇಪರ್, ಸಾಮಾಜಿಕ ಮಾಧ್ಯಮಗಳಲ್ಲಿ ವೀಕ್ಷಿಸುತ್ತಿದ್ದರೆ ಈ ಸರ್ಕಾರಿ ನೌಕರರು ಇಂದು ಚುನಾವಣೆ ಕರ್ತವ್ಯವೆಂದು ಹೈರಾಣಾಗಿ ಹೋಗಬೇಕಾದ ಪರಿಸ್ಥಿತಿ ಬಂದಿದೆ.
ಮತಗಟ್ಟೆಯ ಅಧಿಕಾರಿಯಾಗಿ ನಿಯೋಜನೆಗೊಂಡಿರುವ ಶಾಂತಲಾ(ಹೆಸರು ಬದಲಿಸಲಾಗಿದೆ) ಎಂಬವರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿ, ಮೇ 7ರಂದು ಗರ್ಭಿಣಿಯೊಬ್ಬರನ್ನು ತರಬೇತಿ ಕರ್ತವ್ಯಕ್ಕೆಂದು ನಿಯೋಜಿಸಲಾಗಿತ್ತು. ಆಕೆಯ ಹಿರಿಯ ಅಧಿಕಾರಿಗಳು ಆಕೆಗೆ ವಿನಾಯಿತಿ ನೀಡಲು ನಿರಾಕರಿಸಿದ್ದರು. ಆಕೆಗೆ ಚುನಾವಣೆ ಮುಗಿದ ನಂತರ ಸಿಸೇರಿಯನ್ ಹೆರಿಗೆ ಮಾಡಿಸಿಕೊಳ್ಳುವಂತೆ ಹೇಳುತ್ತಿದ್ದರು. ನನಗೆ ಅನುಕಂಪ ಕಂಡು ಆಕೆಯ ಜವಾಬ್ದಾರಿಯನ್ನು ನಾನೇ ವಹಿಸಿಕೊಂಡಿದ್ದೇನೆ. ಆಕೆಗೆ ಕೆಲ ದಿನಗಳ ರಜೆಗೆ ಅರ್ಜಿ ಸಲ್ಲಿಸುವಂತೆ ಹೇಳಿದ್ದೇನೆ. ಕಳೆದ ಗುರುವಾರ ಆಕೆ ಗಂಡು ಮಗುವಿಗೆ ಜನ್ಮ ನೀಡಿದಳು ಎನ್ನುತ್ತಾರೆ.
ಇನ್ನೊಬ್ಬ ಮಹಿಳಾ ಅಧಿಕಾರಿಯ ಪತಿಗೆ ಹೊಟ್ಟೆಯ ಕ್ಯಾನ್ಸರ್ ಅಂತಿಮ ಹಂತದಲ್ಲಿತ್ತು. ಆಕೆಗೆ ಬೆಂಗಳೂರಿನಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಪತಿಯ ಅನಾರೋಗ್ಯದ ಅಂತಿಮ ದಿನಗಳಲ್ಲಿ ಅವರ ಜೊತೆಗಿರಬೇಕೆಂದು ಮಹಿಳೆ ಬಯಸುತ್ತಿದ್ದರು. ನನ್ನ ಮನೆಕೆಲಸದವಳನ್ನು ಪತಿಯ ಆರೈಕೆಗೆ ಬಿಟ್ಟು ಬಂದಿದ್ದೇನೆ. ಕೆಮೊಥೆರಪಿ ಮುಗಿದ ನಂತರ ವೈದ್ಯರು ಇನ್ನು ಕೆಲ ದಿನಗಳ ಸಮಯ ನೀಡಿದ್ದಾರೆ. ನಾನು ಎಷ್ಟೇ ಬಾರಿ ನನ್ನ ವೈಯಕ್ತಿಕ ಸಮಸ್ಯೆಗಳನ್ನು ಹೇಳಿಕೊಂಡರೂ ಕೂಡ ನನಗೆ ಎಲೆಕ್ಷನ್ ಡ್ಯೂಟಿ ಹಾಕಿದ್ದಾರೆ ಎಂದು ಕಣ್ಣೀರು ಹಾಕುತ್ತಾ ಹೇಳುತ್ತಾರೆ.
ಜಲ ಮಂಡಳಿಯಲ್ಲಿ ನೌಕರರಾಗಿರುವ ಶಿವಪ್ಪ ಮುಂದಿನ ವಾರ ನನ್ನ ಕೊನೆಯ ಕೆಲಸದ ದಿನಗಳು. ನನ್ನ ವೃತ್ತಿಜೀವನದ ಕೊನೆಯ ಹಂತದಲ್ಲಿ ಈ ಚುನಾವಣಾ ಕರ್ತವ್ಯ ಮಾಡುತ್ತಿದ್ದೇನೆ. ಅವರಿಗೆ ಈ ಬಗ್ಗೆ ಯಾವುದೇ ಬೇಸರವಿಲ್ಲ. ಉತ್ಸಾಹದಿಂದ ಮಾಡುತ್ತಿದ್ದಾರೆ. ಆರೋಗ್ಯ ಇಲಾಖೆಯಲ್ಲಿರುವ ರೂಪಶ್ರೀ ಮತ್ತು ಹೇಮಲತಾರಿಗೆ ಇದು ಮೊದಲ ಎಲೆಕ್ಷನ್ ಡ್ಯೂಟಿಯಾಗಿರುವುದರಿಂದ ಖುಷಿಯಾಗಿದ್ದಾರೆ. ನಮಗೆ ತರಬೇತಿ ಸಹಾಯವಾಯಿತು ಎನ್ನುತ್ತಾರೆ.
ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ಉಜ್ವಲ್ ಕುಮಾರ್ ಘೋಷ್ ಮಾತನಾಡಿ, ಪ್ರತಿ ಜಿಲ್ಲೆಯ ಕೇಸುಗಳು ವಿಭಿನ್ನವಾಗಿರುತ್ತದೆ. ಬೆಂಗಳೂರಿನಲ್ಲಿ ಚುನಾವಣಾ ಕರ್ತವ್ಯದ ಉಸ್ತುವಾರಿಯನ್ನು ಬಿಬಿಎಂಪಿ ಆಯುಕ್ತರು ನೋಡಿಕೊಳ್ಳುತ್ತಾರೆ. ವಿನಾಯ್ತಿಯಾಗಿ ಸಿಬ್ಬಂದಿಯ ಕೌಟುಂಬಿಕ, ವೈಯಕ್ತಿಕ ಆರೋಗ್ಯಗಳಿಗೆ ವಿನಾಯ್ತಿ ನೀಡಲಾಗಿದೆ. ಐಟಿ ಅಧಿಕಾರಿಗಲು ಮತ್ತು ಅಬಕಾರಿ ಇಲಾಖೆ ಸಿಬ್ಬಂದಿ ವಿನಾಯ್ತಿ ವಿಭಾಗದಲ್ಲಿ ಬರುತ್ತಾರೆ ಎಂದರು.