ಬೆಂಗಳೂರು: ರಸ್ತೆ ಕಾಮಗಾರಿ ವೇಳೆ ಬಳಸುವ ಜಲ್ಲಿ ಸಮ ಮಾಡುವ ಯಂತ್ರದಡಿಯಲ್ಲಿ ಸಿಕ್ಕು ಬಾಲಕನೊಬ್ಬ ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರು ಹೆಮ್ಮಿಗೆಪುರ ವಾರ್ಡ್ 198 ರಸ್ತೆ ಕಾಮಗಾರಿ ವೇಳೆ ಬಳಸುವ ಯಂತ್ರಕ್ಕೆ ಸಿಕ್ಕು ಮನು (11) ದಾರುಣ ಸಾವನ್ನಪ್ಪಿದ್ದಾನೆ. ರಸ್ತೆಗೆ ಡಾಂಬರ್ ಹಾಕುವ ಕಾಮಗಾರಿ ನಡೆಯುತ್ತಿದ್ದಾಗ ಸೈಕಲ್ ತುಳಿದುಕೊಂಡು ಬರುತ್ತಿದ್ದ ಬಾಲಕನನ್ನು ಗಮನಿಸದ ಚಾಲಕ ಅವನ ಮೇಲೆಯೇ ಯಂತ್ರವನ್ನು ಚಲಾಯಿಸಿದ್ದಾನೆ.
ಸುಬ್ರಹ್ಮಣ್ಯ ಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಳಕಾಗಿದೆ.
ಇಂಜಿನಿಯರ್ ಅಮಾನತು
ಬಾಲಕನ ಸಾವಿಗೆ ಕಾರಣವಾದ ಕಾಮಗಾರಿ ಹೊಣೆ ಹೊತ್ತಿದ್ದ ಬಿಬಿಎಂಪಿ ಸಹಾಯಕ ಇಂಜಿನಿಯರ್ ದಯಾನಂದ್ ಅವರನ್ನು ಅಮಾನತುಪಡಿಸಲು ಮೇಯರ್ ಸಂಪತ್ರಾಜ್ ಸೂಚಿಸಿದ್ದಾರೆ. ಚಾಲಕನ ಅಜಾಗರೂಕತೆ ಈ ಘಟನೆಗೆ ಕಾರಣವಾಗಿದ್ದು ಮುಂದೆ ಇಂತಹಾ ಘಟನೆ ಮರುಕಳಿಸಿದರೆ ಅಧಿಕಾರಿಗಳನ್ನೇ ನೇರ ಹೊಣೆ ಮಾಡುವುದಾಗಿ ಅವರು ಹೇಳಿದ್ದಾರೆ.
ಮೃತ ಬಾಲಕನ ಕುಟುಂಬಕ್ಕೆ ಐದು ಲಕ್ಷ ರೂ. ಪರಿಹಾರ ನೀಡುವುದಾಗಿ ಮೇಯರ್ ಘೋಷಿಸಿದರು.