ಬೆಂಗಳೂರು: ಪುಸ್ತಕ ದಾನಿಗಳೊಂದು ಸಿಹಿ ಸುದ್ದಿ. ರಾಜ್ಯ ಸಾರ್ವಜನಿಕ ಗ್ರಂಥಾಲಯ ಇಲಾಖೆ ವತಿಯಿಂದ ಸಿಲಿಕಾನ್ ಸಿಟಿ ಬೆಂಗಳೂರಿನ ಮಾಲ್ ಗಳಲ್ಲಿ ಪುಸ್ತಕ ದಾನ ಅಭಿಯಾನವನ್ನು ಆಯೋಜಿಸಲಾಗಿದೆ.
ಒಂದು ತಿಂಗಳ ಕಾಲ ನಗರದ ಪ್ರಮುಖ ಶಾಪಿಂಗ್ ಮಾಲ್ ಗಳಲ್ಲಿ ಈ ಅಭಿಯಾನ ನಡೆಯಲಿದ್ದು, ಗರುಡಾ ಮಾಲ್ ನಲ್ಲಿ ಅಂಚೆ ಪೆಟ್ಟಿಗೆ ರೀತಿಯಲ್ಲಿ ಪೆಟ್ಟಿಗೆಯೊಂದನ್ನು ಇಡಲಾಗಿದೆ. ಇದರಲ್ಲಿ ಆಸಕ್ತರು ಪುಸ್ತಕ ದಾನ ಮಾಡಬಹುದಾಗಿದೆ.
ಓದುವ ಹವ್ಯಾಸವನ್ನು ಉತ್ತೇಜಿಸಲು ಹಾಗೂ ಸಾರ್ವಜನಿಕ ಗ್ರಂಥಾಲಯದ ಅಸ್ತಿತ್ವದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಅಭಿಯಾನ ಆರಂಭಿಸಲಾಗಿದೆ ಎಂದು ಇಲಾಖೆಯ ಮೂಲಗಳಿಂದ ತಿಳಿದುಬಂದಿದೆ.
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ರಾಜ್ಯ ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಸತೀಶ್ ಕುಮಾರ್ ಎಸ್ ಹೊಸಮನಿ, ಯಾವುದೇ ಭಾಷೆಯಲ್ಲಿನ ಪುಸ್ತಕಗಳನ್ನು ಎಷ್ಟು ಬೇಕಾದರೂ ದಾನ ಮಾಡಬಹುದು ಎಂದರು.
ನವೆಂಬರ್ 5 ರಿಂದ ಗರುಡಾ ಮಾಲ್ ನಲ್ಲಿ, ನ. 9 ರಿಂದ ಗೋಪಾಲನ್ ಅರ್ಕೇಡಾ ಮಾಲ್, ನ.13 ರಿಂದ ಮಂತ್ರಿ ಸ್ಕ್ವೇರ್ ಮಾಲ್, ನ.15 ರಿಂದ ಪೋರ್ ಮಾಲ್ ನಲ್ಲಿ ಅಭಿಯಾನ ಆರಂಭವಾಗಲಿದೆ.
ಇಲ್ಲಿಯೇ ಸದಸ್ಯತ್ವ ನೋಂದಣಿ ಸಹ ಆರಂಭಿಸಲಾಗುತ್ತಿದ್ದು, 100 ರೂ. ಪಾವತಿಸಿ ಅರ್ಜಿ ಭರ್ತಿ ಮಾಡುವ ಮೂಲಕ ರಾಜ್ಯ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಸದಸ್ಯರಾಗಬಹುದಾಗಿದೆ.
Advertisement