ರೈತರ ಸಾಲ ಕೇಸು: ಕರ್ನಾಟಕಕ್ಕೆ ವರ್ಗಾಯಿಸಲು ಆಕ್ಸಿಸ್ ಬ್ಯಾಂಕು ನಿರ್ಧಾರ
ಬೆಳಗಾವಿ: ರಾಜ್ಯ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳ ಜೊತೆ ನಿರಂತರ ಮಾತುಕತೆ ನಡೆಸಿದ ನಂತರ ಆಕ್ಸಿಸ್ ಬ್ಯಾಂಕ್, ಕೋಲ್ಕತ್ತಾ ಮೂಲದ ನ್ಯಾಯಾಲಯದಿಂದ ಕರ್ನಾಟಕದ ರೈತರ ವಿರುದ್ಧ ಇರುವ ಕೇಸುಗಳನ್ನು ಕರ್ನಾಟಕಕ್ಕೆ ವರ್ಗಾಯಿಸಲು ನಿರ್ಧರಿಸಿದೆ.
ಸರ್ಕಾರದ ಜೊತೆ ನಡೆಸಿರುವ ಮಾತುಕತೆ ರಚನಾತ್ಮಕವಾಗಿತ್ತು ಎಂದು ಆಕ್ಸಿಸ್ ಬ್ಯಾಂಕು ಹೇಳಿಕೆಯಲ್ಲಿ ತಿಳಿಸಿದೆ. ರೈತರ ಹಿತಾಸಕ್ತಿ ನಮ್ಮ ಆದ್ಯತೆಯ ವಿಷಯವಾಗಿದ್ದು ಬ್ಯಾಂಕು ರಾಜ್ಯ ಸರ್ಕಾರದ ಜೊತೆ ಸಹಕರಿಸಿ ಕೆಲಸ ಮಾಡಲಿದೆ, ರೈತರ ಸಾಲಮನ್ನಾ ವಿಚಾರದಲ್ಲಿ ಎಲ್ಲರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಹೇಳಿದೆ.
ಕೃಷಿ ಸಾಲವನ್ನು ಸರಿಯಾದ ಸಮಯಕ್ಕೆ ಹಿಂತಿರುಗಿಸದ ಕರ್ನಾಟಕದ ರೈತರ ವಿರುದ್ಧ ಕೋಲ್ಕತ್ತಾ ಮೂಲದ ನ್ಯಾಯಾಲಯ ಬಂಧನ ವಾರಂಟ್ ಹೊರಡಿಸಿತ್ತು. 2009ರಲ್ಲಿ ಸಾಲ ತೆಗೆದುಕೊಂಡು ಹಿಂತಿರುಗಿಸದ ರೈತರ ವಿರುದ್ದ ಕೇಸು ದಾಖಲಿಸಲಾಗಿದೆ ಎಂದು ಬ್ಯಾಂಕು ಹೇಳಿದರೂ ಕೂಡ ರಾಜ್ಯ ಸರ್ಕಾರದ ಸೂಚನೆ ಮೇರೆಗೆ ರೈತರ ವಿರುದ್ಧ ಯಾವುದೇ ಶಿಸ್ತು ಕ್ರಮ ಕೈಗೊಳ್ಳದಿರಲು ನಿರ್ಧರಿಸಿದೆ.
ಬೆಳಗಾವಿಯ 180ಕ್ಕೂ ಅಧಿಕ ರೈತರು ಆಕ್ಸಿಸ್ ಬ್ಯಾಂಕಿನಿಂದ ಸಾಲ ತೆಗೆದುಕೊಂಡು ಅದನ್ನು ಬ್ಯಾಂಕಿಗೆ ಹಿಂತಿರುಗಿಸಿರಲಿಲ್ಲ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ