ನಾನು ಎಲ್ಲಿಯೂ ಓಡಿ ಹೋಗಿಲ್ಲ, ಬೆಂಗಳೂರು ಮಹಾನಗರದಲ್ಲಿಯೇ ಇದ್ದೇನೆ- ಜನಾರ್ದನ ರೆಡ್ಡಿ

ನಾನು ಎಲ್ಲಿಯೂ ಓಡಿ ಹೋಗಿಲ್ಲ. ಬೆಂಗಳೂರು ಮಹಾನಗರದಲ್ಲಿಯೇ ಇದ್ದೇನೆ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಹೇಳಿದ್ದಾರೆ.
ಮಾಜಿ ಸಚಿವ ಜನಾರ್ದನ ರೆಡ್ಡಿ
ಮಾಜಿ ಸಚಿವ ಜನಾರ್ದನ ರೆಡ್ಡಿ

ಬೆಂಗಳೂರು: ಆ್ಯಂಬಿಡೆಂಟ್ ಡೀಲ್ ಪ್ರಕರಣದಲ್ಲಿ  ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪೊಲೀಸರು  ನೋಟಿಸ್ ಜಾರಿಗೊಳಿಸಿದ ಬೆನ್ನಲ್ಲೇ ಅಜ್ಞಾತ  ಸ್ಥಳದಿಂದ ವಿಡಿಯೋ ರವಾನಿಸಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ನಾನು ಎಲ್ಲಿಯೂ ಓಡಿ ಹೋಗಿಲ್ಲ. ಬೆಂಗಳೂರು ಮಹಾನಗರದಲ್ಲಿಯೇ ಇದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಸಿಸಿಬಿ ಪೊಲೀಸರು ಕೆಟ್ಟ ಉದ್ದೇಶದಿಂದ ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ತಲೆ ಮರೆಸಿಕೊಂಡಿದ್ದೇನೆ ಎಂದು ತಪ್ಪು ಮಾಹಿತಿ ನೀಡುತ್ತಿದ್ದಾರೆ. ನಾನೆನ್ನೂ ತಪ್ಪು ಮಾಡಿಲ್ಲ. ತಪ್ಪು ಮಾಡಿಲ್ಲ ಅಂದ ಮೇಲೆ  ಬೆಂಗಳೂರು ಬಿಟ್ಟು ಹೊರಗೆ ಹೋಗುವ ಅಗತ್ಯವಿಲ್ಲ. ವಿಚಾರಣೆಗೆ ಹಾಜರಾಗುವಂತೆ ನಿನ್ನೆಯಷ್ಟೇ ನೋಟಿಸ್ ನೀಡಿದ್ದು, ಭಾನುವಾರ ವಿಚಾರಣೆಗೆ ಹಾಜರಾಗುವುದಾಗಿ ರೆಡ್ಡಿ ತಿಳಿಸಿದ್ದಾರೆ.

ಸಿಸಿಬಿ ಪೊಲೀಸರಿಗೆ ತಿಳಿಸೋಣ ಎಂದು ವಕೀಲ ಚಂದ್ರಶೇಖರ್ ಜೊತೆ ಚರ್ಚಿಸಿದ್ದೆ. ಆದರೆ. ನೋಟಿಸ್ ನೀಡದೆ, ಎಫ್ ಐಆರ್ ನಲ್ಲಿ ಹೆಸರು ಉಲ್ಲೇಖಿಸದೆ ಕಾನೂನು ಪ್ರಕಾರ ನೋಟಿಸ್ ಕೊಟ್ರೆ ವಿಚಾರಣೆಗೆ  ಹಾಜರಾಗಬಹುದೆಂದು ವಕೀಲ ಚಂದ್ರಶೇಖರ್ ತಿಳಿಸಿದರು. ಹೀಗಾಗಿ ವಿಚಾರಣೆಗೆ ಹಾಜರಾಗಿರಲಿಲ್ಲ ಎಂದು ಹೇಳಿದ್ದಾರೆ.

ಬೆಂಗಳೂರಿನ ತಮ್ಮ ಮನೆ ಸುತ್ತ 15-20 ದಿನಗಳಿಂದ ಭಯದ ವಾತವಾರಣ ನಿರ್ಮಾಣವಾಗಿದೆ. ಸಿಸಿಬಿ ಪೊಲೀಸರು ಯಾವುದೇ ದಾಖಲೆಗಳನ್ನು ನೀಡದೆ ಮಾಧ್ಯಮಗಳ ದಿಕ್ಕು ತಪ್ಪಿಸುತ್ತಿದ್ದಾರೆ. ಯಾವುದೇ ಸಣ್ಣ ಆಧಾರವಿಲ್ಲದೆ ವೃಥ ಆರೋಪ ಮಾಡಲಾಗುತ್ತಿದೆ. ಸಿಸಿಬಿ ರಾಜಕೀಯ ಷಢ್ಯಂತ್ರಕ್ಕೆ ಒಳಗಾಗಬಾರದು ಈ ಬಗ್ಗೆ ಪ್ರಾಮಾಣಿಕ ತನಿಖೆ ನಡೆಯುವ ವಿಶ್ವಾಸ ಇರುವುದಾಗಿ ಜನಾರ್ದನ ರೆಡ್ಡಿ ವಿಡಿಯೋದಲ್ಲಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com