ಬೆಂಗಳೂರು: ಆರು ವರ್ಷದ ಮಗು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಬೆಂಗಳೂರಿನ ದೊಡ್ಡಬೊಮ್ಮಸಂದ್ರದಲ್ಲಿ ನಡೆದಿದೆ.
ನ್ಯೂ ಬಿ.ಇ.ಎಲ್ ರಸ್ತೆಯಲ್ಲಿರುವ ಮನೆಯಲ್ಲಿ ದಂಪತಿ ಜನಾರ್ದನ್ (52), ಸುಮಿತ್ರಾ(48), ಮಗಳು ಸುಧಾರಾಣಿ (29) ಮತ್ತು ಮೊಮ್ಮಗಳು ಸೋನಿಕಾ(6) ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸ್ಥಳದಲ್ಲಿ ಡೆತ್ ನೋಟ್ ಸಹ ಪತ್ತೆಯಾಗಿದೆ.
ಕುಟುಂಬದ ಸದಸ್ಯರು ಮೆಡಿಕಲ್ ಶಾಪ್ ಇಟ್ಟುಕೊಂಡಿದ್ದು, ಹಣಕಾಸಿನ ವ್ಯವಹಾರದಲ್ಲಿ ನಮಗೆ ನಷ್ಟವಾಗಿದ್ದರಿಂದ ಕುಟುಂಬ ಸಮೇತ ನಿದ್ದೆ ಮಾತ್ರೆ ಸೇವಿಸಿದ್ದೇವೆ ಎಂದು ಡೆತ್ನೋಟ್ನಲ್ಲಿ ಬರೆದಿದ್ದಾರೆ.
ಆತ್ಮಹತ್ಯೆಗೆ ನಿಖರ ಕಾರಣ ಇನ್ನು ತಿಳಿದು ಬಂದಿಲ್ಲ. ಆದರೆ ಸದ್ಯಕ್ಕೆ ಹಣಕಾಸಿನ ಸಮಸ್ಯೆಯಿಂದ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಆದರೆ ಅವರು ಹೇಗೆ ಸತ್ತಿದ್ದಾರೆ ಎಂಬುದು ಇನ್ನೂ ತಿಳಿದು ಬಂದಿಲ್ಲ. ವ್ಯಕ್ತಿಯೊಬ್ಬರಿಗೆ ಮನೆ ಕಟ್ಟಲು 25 ಲಕ್ಷ ಕೊಟ್ಟಿದ್ದರು. ಆ ವ್ಯಕ್ತಿ ಅಪಘಾತದಿಂದ ಮೃತಪಟ್ಟಿದ್ದಾರೆ. ಆದರೆ, ಆ ವ್ಯಕ್ತಿ ಯಾರು ಎಂಬುದರ ಬಗ್ಗೆ ಇನ್ನೂ ಮಾಹಿತಿ ಇಲ್ಲ. ಹೆಚ್ಚಿನ ತನಿಖೆ ನಂತರ ಪ್ರಕರಣದ ಕುರಿತು ಮಾಹಿತಿ ಹೊರಬೀಳಲಿದೆ ಎಂದು ಡಿಸಿಪಿ ಕಲಾ ಕೃಷ್ಣಸ್ವಾಮಿ ಅವರು ಹೇಳಿದ್ದಾರೆ.