ಬೆಂಗಳೂರು: ಮಾನವ ಕಳ್ಳ ಸಾಗಣೆ ಆರೋಪದ ಮೇಲೆ ಕೇಂದ್ರ ಅಪರಾಧ ವಿಭಾಗದ(ಸಿಸಿಬಿ) ಮಹಿಳಾ ಮತ್ತು ಮಾದಕದ್ರವ್ಯ ತಂಡದ ಪೊಲೀಸರು 38 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಈತ ಬಂಧಿಸಿ ವಶದಲ್ಲಿರಿಸಿಕೊಂಡಿದ್ದ ಸುಮಾರು 15 ಮಂದಿ ಮಹಿಳೆಯರನ್ನು ಬಿಡುಗಡೆಗೊಳಿಸಿದ್ದಾರೆ.
ಉಡುಪಿ ಮೂಲದ ಪ್ರವೀಣ್ ಶೆಟ್ಟಿ ನಾಗರಬಾವಿಯ ಪಾಪರೆಡ್ಡಿಪಾಳ್ಯದಲ್ಲಿ ವಾಸಿಸುತ್ತಿದ್ದು ಬಂಧಿತ ಆರೋಪಿಯಾಗಿದ್ದಾನೆ. ಆರ್ ಆರ್ ನಗರದ ನಾಗದೇವನಹಳ್ಳಿಯಲ್ಲಿ ಕೆಲವು ಮಹಿಳೆಯರನ್ನು ಅಕ್ರಮವಾಗಿ ಬಂಧಿಸಿಟ್ಟಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಇದರ ಆಧಾರದ ಮೇಲೆ ಕಳೆದ ಶನಿವಾರ ಮನೆಯೊಂದರ ಮೇಲೆ ದಾಳಿ ನಡೆಸಿದ ಪೊಲೀಸರು ಬೇರೆ ರಾಜ್ಯಗಳ 15 ಮಹಿಳೆಯರು ಬಂಧಿತರಾಗಿದ್ದನ್ನು ಕಂಡರು. ಅವರನ್ನು ರಕ್ಷಿಸಿದ ನಂತರ ಪ್ರವೀಣ್ ಶೆಟ್ಟಿ ಬಗ್ಗೆ ಸಿಸಿಬಿ ಪೊಲೀಸರಿಗೆ ತಿಳಿಸಿದರು. ಪ್ರವೀಣ್ ಶೆಟ್ಟಿ ಈ ಮಹಿಳೆಯರನ್ನು ಬೆಂಗಳೂರಿಗೆ ಕರೆತಂದಿದ್ದ.
ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಬಾರ್ಟೆಂಡರ್ ಕೆಲಸ ಕೊಡಿಸುವುದಾಗಿ ಪ್ರವೀಣ್ ಶೆಟ್ಟಿ ಕೆಲ ತಿಂಗಳ ಹಿಂದೆ ಈ ಮಹಿಳೆಯರನ್ನು ಕರೆತಂದಿದ್ದ. ಆದರೆ ಅವರಿಗೆ ಕೆಲಸ ಕೊಡಿಸದೆ ಒಂದು ಮನೆಯ ಕೋಣೆಯಲ್ಲಿ ಕೂಡಿ ಹಾಕಿದ್ದ. ಅವರು ನೀಡಿದ ಮಾಹಿತಿ ಮೇರೆಗೆ ಶೆಟ್ಟಿಯನ್ನು ಬಂಧಿಸಿದರು. ರಕ್ಷಿಸಲ್ಪಟ್ಟ ಮಹಿಳೆಯರಲ್ಲಿ ಮೂವರು ದೆಹಲಿ ಮೂಲದವರು ಮತ್ತೆ ಮೂವರು ಪಂಜಾಬ್ ಮೂಲದವರಾಗಿದ್ದಾರೆ. ಇನ್ನು ತಲಾ ನಾಲ್ವರು ಮುಂಬೈ ಮತ್ತು ರಾಜಸ್ತಾನದವರಾಗಿದ್ದಾರೆ. ಮತ್ತೊಬ್ಬಾಕೆ ಉತ್ತರ ಪ್ರದೇಶದವಳು ಎಂದು ಪೊಲೀಸರು ತಿಳಿಸಿದ್ದಾರೆ.
Advertisement