ಧಾರವಾಡ: ಲಾರಿ ಮತ್ತು ಖಾಸಗಿ ಬಸ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಆರು ಮಂದಿ ಸಾವನ್ನಪ್ಪಿ 10 ಕ್ಕೂ ಹೆಚ್ಚು ಜನ ಗಾಯಗೊಂಡಿರುವ ಘಟನೆ ಧಾರವಾಡ ಜಿಲ್ಲೆ ಅಣ್ಣಿಗೇರಿ ತಾಲೂಕಿನ ಕೋಳಿವಾಡ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ.
ಮೃತಪಟ್ಟವರು ಮುಂಬೈ ಮೂಲದವರು ಎನ್ನಲಾಗಿದೆ. ಮೃತರು ಖಾಸಗಿ ಬಸ್ ನಲ್ಲಿ ಮುಂಬಯಿಯಿಂದ ಹಂಪಿಗೆ ಪ್ರಯಾಣಿಸುತ್ತಿದ್ದರು. ವಿಶ್ವನಾಥ್(75) ದಿನಕರ್ ರಮೇಶ್ ಜಯಪಾಲ್ (70), ಸುಮೇಧಾ(65) ಲಾಹು(65) ಸುಚಿತ್ರಾ (65), ದಿನಕರ್(74) ಮೃತ ದುರ್ದೈವಿಗಳು.
ಅಪಘಾತದ ತೀವ್ರತೆಗೆ ಬಸ್ ಸಂಪೂರ್ಣ ನಜ್ಜುಗುಜ್ಜಾಗಿದ್ದು ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸೇರಿಸಲಾಗಿದೆ. ಅಣ್ಣಿಗೇರಿ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗಾಯಾಳುಗಳನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.