ಮಂಗಳೂರು: ಭೀಕರ ಮಳೆ ಹಾಗೂ ಪ್ರವಾಹದಿಂದಾಗಿ ಬರೋಬ್ಬರಿ 2 ತಿಂಗಳಿನಿಂದಲೂ ಸ್ಥಗಿತಗೊಂಡಿದ್ದ ಮಂಗಳೂರು-ಬೆಂಗಳೂರು ರೈಲ್ವೇ ಮಾರ್ಗ ಶೀಘ್ರದಲ್ಲಿಯೇ ಆರಂಭಗೊಳ್ಳಲಿದೆ.
ಸಕಲೇಶಪುರ-ಸುಬ್ರಮಣ್ಯ ರಸ್ತೋ ಘಾಟ್ ವರೆಗೂ ಗೂಡ್ಸ್ ರೈಲನ್ನು ಚಾಲನೆ ಮಾಡುವ ಮೂಲಕ ರೈಲ್ವೇ ಅಧಿಕಾರಿಗಳು ಹಳಿಗಳನ್ನು ಸೋಮವಾರ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ರೈಲುಗಳು ಚಲಿಸಲು ಯಾವುದೇ ರೀತಿಯ ಸಮಸ್ಯೆಗಳಿಲ್ಲ ಎಂಬುದು ತಿಳಿದುಬಂದಿದೆ.
ಕೊಡಗು ಜಿಲ್ಲೆಯಲ್ಲಿ ಸುರಿದ ಭಾರಿ ಮಳೆ ಬೆಂಗಳೂರು-ಮಂಗಳೂರು ರೈಲ್ವೇ ಮಾರ್ಗಗಳ ಮೇಲೆ ಗಂಭೀರ ಪರಿಣಾಮ ಬೀರಿತ್ತು. ಹಲವೆಡೆ ಗುಡ್ಡಗಳು ಹಳಿಗಳ ಮೇಲೆ ಕುಸಿದು ಬಿದ್ದ ಪರಿಣಾಮ ರೈಲ್ವೇ ಸಂಚಾರಗಳು ಸ್ಥಗಿತಗೊಂಡಿತ್ತು.
ಹಳಿಗಳನ್ನು ಸರಿಪಡಿಸಲು ರೈಲ್ವೇ ಸಿಬ್ಬಂದಿಗಳು ಸಾಕಷ್ಟು ಹರಸಾಹಸ ಪಡುವಂತಾಗಿತ್ತು. ಮಳೆ ಹಿನ್ನಲೆಯಲ್ಲಿ ಸಿಬ್ಬಂದಿಗಳು ಸಿಗದೆ ಅಧಿಕಾರಿಗಳೇ ಹಳಿಗಳನ್ನು ಸರಿಪಿಸಲು ಮುಂದಾಗಿತ್ತು. ಬಳಿಕ 60 ಜನರನ್ನು ನಿಯೋಜಿಸಿ ಹಳಿಗಳನ್ನು ಸರಿಪಡಿಸುವ ಕಾರ್ಯಗಳನ್ನು ಆರಂಭಿಸಿದ್ದರು. ಹಗಲು-ರಾತ್ರಿ ಕಾರ್ಯನಿರ್ವಹಿಸಿದ್ದರು.
ಹಳಿಗಳನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸಿದ ಬಳಿಕ ಬೆಂಗಳೂರು-ಮಂಗಳೂರು ವಿಭಾಗದ ಸಾರ್ವಜನಿಕ ರೈಲುಗಳ ಸಂಚಾರಕ್ಕೆ ಅನುವು ಮಾಡಿಕೊಡುವ ಕುರಿತು ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭೂಕುಸಿತ ಸಂಭವಿಸಿದ ಹಿನ್ನಲೆಯಲ್ಲಿ ರಾತ್ರಿ ವೇಳೆ ಸಂಚಾರ ನಡೆಸುತ್ತಿದ್ದ ಬೆಂಗಳೂರು-ಕಾರವಾರ/ಕಣ್ಣೂರು, ಯಶವಂತಪುರ-ಮಂಗಳೂರು ಜಕ್ಷನ್, ಯಶವಂತಪುರ ಕಾರವಾರ ರೈಲುಗಳು ಆಗಸ್ಟ್ 14 ರಿಂದ ಸ್ಥಗಿತಗೊಂಡಿದ್ದವು.