ರಾಜ್ಯದ ಅಭಿವೃದ್ಧಿಗೆ ಹಲವು ಕನಸು ಕಂಡಿದ್ದೇನೆ, ಈ ಸರ್ಕಾರದ ಮೇಲೆ ನಂಬಿಕೆ ಇಡಿ: ಸಿಎಂ ಕುಮಾರಸ್ವಾಮಿ

ನಾನು ಮುಖ್ಯಮಂತ್ರಿಯಾದ ಮೇಲೆ ಸಂತೋಷವಾಗಿ ನೆಮ್ಮದಿಯಿಂದ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಈ ಮೈತ್ರಿ...
ನಾಡದೇವಿ ಚಾಮುಂಡಿಗೆ ಪುಷ್ಪಾರ್ಚನೆ ಮಾಡಿದ ಸಿಎಂ ಕುಮಾರಸ್ವಾಮಿ ಮತ್ತು ಇತರರು
ನಾಡದೇವಿ ಚಾಮುಂಡಿಗೆ ಪುಷ್ಪಾರ್ಚನೆ ಮಾಡಿದ ಸಿಎಂ ಕುಮಾರಸ್ವಾಮಿ ಮತ್ತು ಇತರರು
Updated on

ಮೈಸೂರು: ನಾನು ಮುಖ್ಯಮಂತ್ರಿಯಾದ ಮೇಲೆ ಸಂತೋಷವಾಗಿ ನೆಮ್ಮದಿಯಿಂದ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಈ ಮೈತ್ರಿ ಸರ್ಕಾರ ಯಾವಾಗ ಬಿದ್ದು ಹೋಗುತ್ತದೆಯೋ, ಎಲ್ಲಿ ಭಿನ್ನಮತ ಉಂಟಾಗುತ್ತದೆಯೋ ಎಂದು ಈ ನಾಡಿನ ಒಂದು ವರ್ಗದ ಜನರು ಕಾಯುತ್ತಲೇ ಇದ್ದಾರೆ. ಈ ರಾಜ್ಯದ ಮುಖ್ಯಮಂತ್ರಿಯಾಗಿ ನಾಡಿನ ಅಭಿವೃದ್ಧಿ ಬಗ್ಗೆ ಹಲವು ಕನಸು ಕಂಡಿದ್ದೇನೆ, ಈ ನಿಟ್ಟಿನಲ್ಲಿ ಕೆಲಸ ಮಾಡಲು ಎಲ್ಲರೂ ಸಹಕಾರ ನೀಡಿ ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮನವಿ ಮಾಡಿಕೊಂಡರು.

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಇಂದು ನಾಡದೇವಿ ಚಾಮುಂಡಿಗೆ ಪೂಜೆ, ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಇನ್ಫೋಸಿಸ್ ಪ್ರತಿಷ್ಠಾನ ಅಧ್ಯಕ್ಷೆ ನಾಡಹಬ್ಬ ದಸರಾಗೆ ಚಾಲನೆ ನೀಡಿದರು. ಬಳಿಕ ಉದ್ಘಾಟನಾ ಭಾಷಣ ಮಾಡಿದ ಮಖ್ಯಮಂತ್ರಿ ಕುಮಾರಸ್ವಾಮಿ, ರಾಜ್ಯದ ಜನತೆ ನಮ್ಮ ಮೇಲೆ ವಿಶ್ವಾಸ ಇಡಿ, ನಮ್ಮ ಸರ್ಕಾರವನ್ನ ನಂಬಿ, ರಾಜ್ಯ ಸಂಪದ್ಭರಿತವಾಗಿದೆ‌. ನಾಡಿಗೆ ಹಣದ ಕೊರತೆಯಿಲ್ಲ, ಅದನ್ನು ಸಮರ್ಪಕವಾಗಿ ಉಳಿಸಿ ಬಳಸಬೇಕು ಆಗಿರುವ ಲೋಪ ಸರಿ ಪಡಿಸಿ ನಾಡು ಕಟ್ಟಬೇಕು, ಅದಕ್ಕೆ ನಿಮ್ಮ ಸಹಕಾರ ಬೇಕು ಎಂದು ಕೇಳಿಕೊಂಡರು. ನಾಡು ಬೆಳೆಸುವ ನಿಟ್ಟಿನಲ್ಲಿ ನಾವೆಲ್ಲಾ ಒಟ್ಟಿಗೆ ಕೆಲಸ ಮಾಡೋಣ, ನಾಡಿನ ಜನರಿಗಾಗಿ ಪ್ರಾರ್ಥಿಸಿ ಪೂಜೆ ಸಲ್ಲಿಸಿದ್ದೇನೆ, ನಾಡಿನ ಜನರು ನೆಮ್ಮದಿಯಾಗಿ ಬದುಕಲಿ ಎಲ್ಲೆಡೆ ಶಾಂತಿ ನೆಲಸಲಿ ಎಂದು ಆಶಿಸಿದರು.

ನಾನು ಮೂಲತಃ ರಾಜಕಾರಣಿಯಲ್ಲ, ನಾನು ರಾಜಕಾರಣಿ ಆಗಲು‌‌ ಬರಲಿಲ್ಲ ಈ ಹಿಂದೆ ಆಕಸ್ಮಿಕವಾಗಿ ಮುಖ್ಯಮಂತ್ರಿ ಆಗಿದ್ದೆ, ಈಗಲೂ ಎರಡನೇ ಬಾರಿ ಆಕಸ್ಮಿಕವಾಗಿ ಆಗಿದ್ದೇನೆ.ತಾಯಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಒಂದು ಮಾತನ್ನು ಹೇಳುತ್ತೇನೆ, ರಾಜ್ಯದ ರೈತರು ಸೇರಿದಂತೆ ಸಾಲ ಮಾಡಿರುವ ಯಾರು ಆತ್ಮಹತ್ಯೆ ಮಾಡಿಕೊಳ್ಳಬೇಡಿ, ಇದು ನಿಮ್ಮ‌ ಸರ್ಕಾರ. ಪ್ರತಿಯೊಂದು ಕುಟುಂಬವನ್ನು ಉಳಿಸುವ ಜವಾಬ್ದಾರಿ ನಮ್ಮದು. ಪ್ರತಿಯೊಂದು ಕುಟುಂಬ ನೆಮ್ಮದಿಯಾಗಿ ಬದುಕಲು ಹಲವು ಯೋಜನೆ ತರಲಿದ್ದೇನೆ ಆತ್ಮಹತ್ಯೆ ಮಾಡಿಕೊಂಡು ನಿಮ್ಮ ಕುಟುಂಬವನ್ನು ಅನಾಥ ಮಾಡಬೇಡಿ ಎಂದು ಮನವಿ ಮಾಡಿಕೊಂಡರು.

ಇದ್ದಕ್ಕಿದ್ದಂತೆ ಉಪಚುನಾವಣೆ ಘೋಷಣೆಯಾದ ಕಾರಣ ​ದಸರಾಗೆ ಬರಲಾಗುವುದಿಲ್ಲ ಎಂದುಕೊಂಡಿದ್ದೆ, ಆದರೆ, ತಾಯಿ ಚಾಮುಂಡಿ ಆಶೀರ್ವಾದದಿಂದ ನಾವು ಕಾರ್ಯಕ್ರಮಕ್ಕೆ ಬಂದಿದ್ದೇವೆ. ತಾಯಿ ಸ್ವರೂಪಿ ಸುಧಾಮೂರ್ತಿ ಅವರೊಂದಿಗೆ ಕುಳಿತಿದ್ದೇವೆ. ತಾಯಿ ಹೃದಯವನ್ನು ಹೊಂದಿರುವ ಸುಧಾಮೂರ್ತಿ ಅವರು ಅಗ್ರಪೂಜೆ ಸಲ್ಲಿಸಿದರೆ ನಾಡಿನ ಎಲ್ಲಾ ಸಮಸ್ಯೆಗಳು ಬಗೆಹರಿದು ಚಾಮುಂಡೇಶ್ವರಿ ರಕ್ಷಣೆ ನೀಡುತ್ತಾಳೆ. ಈ ಕಾರಣದಿಂದಲೇ ಅವರಿಂದ ಪೂಜೆ ಮಾಡಿಸಲಾಗಿದೆ. ಸದ್ಯ ಎಲ್ಲರಿಗೂ ಬೇಕಾಗಿರುವುದು ತಾಯಿ ಹೃದಯ, ಕೊಡಗಿನ ಜನರ ಸಮಸ್ಯೆಗೆ ಸ್ಪಂದಿಸಿದ  ಸುಧಾಮೂರ್ತಿಯವರಿಗೆ ಕೃತಜ್ಞತೆ ಹೇಳುತ್ತೇನೆ ಎಂದರು.

ಇದೇ ಸಂದರ್ಭದಲ್ಲಿ ಸಿಎಂ ಕುಮಾರಸ್ವಾಮಿ ಮೈಸೂರು ರಾಜಮನೆತನದ ಕೊಡುಗೆ ಸ್ಮರಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com