ಬೆಂಗಳೂರು: ಹಾಡ ಹಗಲು ಶಾಲೆಗೆ ನುಗ್ಗಿದ್ದ ದುಷ್ಕರ್ಮಿಗಳು ವಿದ್ಯಾರ್ಥಿಗಳ ಎದುರೇ ಶಾಲಾ ಪ್ರಾಂಶುಪಾಲರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಹತ್ಯೆಗೈದ ಘಟನೆ ಬೆಂಗಳೂರಿನ ಅಗ್ರಹಾರ ದಾಸರಹಳ್ಳಿಯ ಹಾವನೂರು ಪಬ್ಲಿಕ್ ಸ್ಕೂಲ್ ನಲ್ಲಿ ನಡೆದಿದೆ.
ಹತ್ಯೆಯಾದ ಪ್ರಾಂಶುಪಾಲರನ್ನು ರಂಗನಾಥ್ ಎಂದು ಗುರುತಿಸ;ಲಾಗಿದ್ದು ರಜಾ ದಿನವಾದ ಇಂದು ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ಆಯೋಜನೆ ಮಾಡಿದ್ದ ವೇಳೆ ಏಕಾಏಕಿ ತರಗತಿಗೆ ನುಗ್ಗಿದ ಏಳು ದುಷ್ಕರ್ಮಿಗಳು ಪ್ರಾಂಶುಪಾಲ ರಂಗನಾಥ್ ಅವರ ಮೇಲೆ ಚಾಕು ಇನ್ನಿತರೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಹಲ್ಲೆಗೀಡಾದ ರಂಗನಾಥ್ ಸ್ಥಳದಲ್ಲೇ ಕುಸಿದು ಸಾವನ್ನಪ್ಪಿದ್ದಾರೆ.
ವಿದ್ಯಾರ್ಥಿಗಳ ಕಣ್ಣೆದುರೇ ಈ ಘಟನೆ ನಡೆದಿದ್ದು ವಿದ್ಯಾರ್ಥಿಗಳು ಭಯಭೀತರಾಗಿದ್ದರು.
ಸುದ್ದಿ ತಿಳಿದ ಉತ್ತರ ವಿಭಾಗದ ಡಿಸಿಪಿ ಚೇತನ್ ಸಿಂಗ್ ರಾಥೋಡ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಾಗಡಿ ರಸ್ತೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ ಶಾಲೆ ಹಿಂಭಾಗದಲ್ಲಿದ್ದ ಮನೆಯವರಿಗೆ, ಶಾಲೆ ಆಡಳಿತಕ್ಕೂ ಜಾಗದ ವಿಚಾರವಾಗಿ ವಿವಾದವಿತ್ತು. ಇತ್ತೀಚೆಗೆ ಕಂಪೌಂಡ್ ಗೋಡೆಯೊಂದನ್ನು ಕೆದವಲಾಗಿತ್ತು. ಇದೇ ಜಾಗದ ವಿವಾದವೇ ಕೊಲೆಗೆ ಕಾರಣವಿರಬಹುದು ಎಂದು ಪೋಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಆರೋಪಿ ಕಾಲಿಗೆ ಗುಂಡು
ಪ್ರೌಢ ಶಾಲೆ ಪ್ರಾಂಶುಪಾಲ ರಂಗನಾಥ್ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪೋಲೀಸರು ಯಶಸ್ವಿಯಾಗಿದ್ದು ಘಟನೆ ನಡೆದ ಇಪ್ಪತ್ತನಾಲ್ಲ್ಕು ಗಂಟೆಗಳಲ್ಲಿ ಆರೋಪಿ ಬಂಧನವಾಗಿದೆ.
ಮಹಾಲಕ್ಷ್ಮೀ ಲೇಔಟ್ನ ಕಿರ್ಲೋಸ್ಕರ್ ಪೌಂಡ್ರಿ ಸಮೀಪ ಇದ್ದ ಆರೋಪಿ ಬಬ್ಲಿ ಅಲಿಯಾಸ್ ಮುನಿರಾಜು ಎಂಬಾತನ ಬಂಧನವಾಗಿದ್ದು ಬಂಧನದ ವೇಳೆ ಪೋಲೀಸರ ಮೇಲೆ ಹಲೆಗೆ ಯತ್ನಿಸಿದ ಆತನ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆಯಲಾಗಿದೆ.
ಸಧ್ಯ ಆರೋಪಿ ಬಬ್ಲಿ ಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಲಾಗುತ್ತಿದೆ.