ಬೆಂಗಳೂರು: ಸೆಲ್ಫಿ ಗೀಳಿಗೆ ಕೆರೆಯಲ್ಲಿ ಮುಳುಗು ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿರುವ ದಾರುಣ ಘಟನೆ ತುಮಕೂರಿನಲ್ಲಿ ನಡೆದಿದೆ.
ತುಮಕೂರಿನ ಸಿದ್ದಗಂಗಾ ಪಿಯು ಕಾಲೇಜಿನ ವಿದ್ಯಾರ್ಥಿಗಳಾದ ಪೂರ್ಣಚಂದ್ರ (18), ಮೊಹಮ್ಮದ್ ಮುರ್ತುಜಾ (17), ಮತ್ತು ಶಶಾಂಕ್ ಕೆ.ಎಸ್ (17) ಮೃತಪಟ್ಟವರಾಗಿದ್ದಾರೆ.
ಕಾಲೇಜು ವತಿಯಿಂದ ಅ.10 ರಿಂದ ದೇವರ ಹೊಸಹಳ್ಳಿ ಗ್ರಾಮದಲ್ಲಿ ಎನ್ಎಸ್ಎಸ್ ಶಿಬಿರ ಏರ್ಪಡಿಸಲಾಗಿತ್ತು. ಶಿಬಿರದಲ್ಲಿ 31 ವಿದ್ಯಾರ್ಥಿಗಳು ಹಾಗೂ 20 ವಿದ್ಯಾರ್ಥಿನಿಯರು ಸೇರಿ ಒಟ್ಟು 50 ಮಂದಿ ಭಾಗವಹಿಸಿದ್ದರು.
ಒಂದು ವಾರಗಳ ಕಾಲವಿದ್ದ ಈ ಶಿಬಿರ ಸೋಮವಾರ ಅಂತ್ಯಗೊಳ್ಳಲಿತ್ತು. ಇದರಂತೆ ಬೆಳಿಗ್ಗೆ 9.30ರ ಸುಮಾರಿದೆ ಹಳೇ ನಿಜಗಲ್ ಗ್ರಾಮದ ಕೆರೆ ಬಳಿ ಸ್ವಚ್ಛತೆಗೆ ವಿದ್ಯಾರ್ಥಿಗಳು ಆಗಮಿಸಿದ್ದರು. ಈ ವೇಳೆ ಮೂವರು ವಿದ್ಯಾರ್ಥಿಗಳು ಕೆರೆ ಬಳಿ ಸೆಲ್ಫೀ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಸಂಪೂರ್ಣವಾಗಿ ನೀರಿನಲ್ಲಿ ನೆನೆದಿದ್ದ ಕಲ್ಲೊಂದರ ಮೇಲೆ ಪೂರ್ಣಚಂದ್ರ ನಿಂತುಕೊಂಡಿದ್ದರಿಂದ ಕಾಲು ಜಾರಿ ಬಿದ್ದಿದ್ದಾನೆ. ಈ ವೇಳೆ ಮುರ್ತುಜ ಹಾಗೂ ಶಶಾಂಕ್ ಆತನ ರಕ್ಷಣೆಗೆ ಧಾವಿಸಿದ್ದಾರೆ. ಈ ವೇಳೆ ಮೂವರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಶಿಬಿರದ ನೇತೃತ್ವ ವಹಿಸಿದ್ದ ಚೆನ್ನಕೇಶವ ಅವರು ಇದನ್ನು ಗಮನಿಸಿದ್ದಾರೆ. ಈಜು ಬಾರದಿದ್ದರೂ ಮೂವರನ್ನು ರಕ್ಷಣೆ ಮಾಡುವ ಸಲುವಾಗಿ ಕೆರೆಗೆ ಧುಮುಕಿದ್ದಾರೆ. ಈ ವೇಳೆ ಸ್ಥಳೀಯರು ಆತನನ್ನು ರಕ್ಷಣೆ ಮಾಡಿದ್ದಾರೆ.
ಘಟನೆ ಬಳಿಕ ಸ್ತಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಎರಡೂವರೆ ಗಂಟೆಗಳ ಕಾಲ ಸುದೀರ್ಘ ಕಾರ್ಯಾಚರಣೆ ನಡೆಸಿ ಮೂವರ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಬಳಿಕ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಘಟನೆ ಕುರಿತಂತೆ ಕಾಲೇಜಿನ ಪ್ರಾಂಶುಪಾಲ ದತ್ತ ಪ್ರಕಾಶ್ ಅವರು ಪ್ರತಿಕ್ರಿಯೆ ನೀಡಿದ್ದು, ಘಟನೆ ಕುರಿತು ಬೆಳಿಗ್ಗೆ 10.30ರ ಸುಮಾರಿಗೆ ಮಾಹಿತಿ ತಿಳಿದುಬಂದಿತ್ತು. ಕೂಡಲೇ ಸಿಬ್ಬಂದಿಗಳೊಂದಿಗೆ ಘಟನಾ ಸ್ಥಳಕ್ಕೆ ಧಾವಿಸಲಾಗಿತ್ತು. ಶಿಬಿರದ ನೇತೃತ್ವವಹಿಸಿದ್ದವರು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರು. ಆದರೂ, ಘಟನೆ ಸಂಭವಿಸಿರುವುದು ದುರಾದೃಷ್ಟಕರ ಎಂದು ಹೇಳಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ದಾಬಸ್'ಪೇಟೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.