ಮೈಸೂರು: ದಸರಾ ಸಂಭ್ರಮದ ವೇಳೆ ಹಲವು ಮಹಿಳೆಯರಿಗೆ ಲೈಂಗಿಕ ಕಿರುಕುಳ

ವಿಶ್ವವಿಖ್ಯಾತ ಮೈಸೂರು ದಸರಾ ಸಂಭ್ರಮದ ವೇಳೆ ಹಲವು ಮಹಿಳೆಯರು ಲೈಂಗಿಕ ಕಿರುಕುಳ ಅನುಭವಿಸಿರುವ ಘಟನೆ ಇದೀಗ ಬೆಳಕಿಗೆ ಬಂದಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಸಂಭ್ರಮದ ವೇಳೆ ಹಲವು ಮಹಿಳೆಯರು ಲೈಂಗಿಕ ಕಿರುಕುಳ ಅನುಭವಿಸಿರುವ ಘಟನೆ ಇದೀಗ ಬೆಳಕಿಗೆ ಬಂದಿದೆ. 
ದಸರಾ ಉತ್ಸವದ ವೇಳೆ ತಾವು ಅನುಭವಿಸಿದ ಲೈಂಗಿಕ ಕಿರುಕುಳದ ಕುರಿತು ಹಲವು ಮಹಿಳೆಯರು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. 
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸಚಿನ ಜಿ.ಟಿ.ದೇವೇಗೌಡ ಅವರು, ತನಿಖೆಗೆ ಆದೇಶಿಸಿದ್ದಾರೆ. ಆದರೆ, ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪೊಲೀಸರು ಈ ಸಂಬಂಧ ಯಾವುದೇ ರೀತಿಯ ದೂರುಗಳು ದಾಖಲಾಗಿಲ್ಲ ಎಂದು ಹೇಳಿಕೊಂಡಿದ್ದಾರೆ. 
ದಸರಾ ಹಬ್ಬ ಹಿನ್ನಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿತ್ತು. ಈ ವೇಳೆ ಸ್ಥಳೀಯರು ಹಾಗೂ ಪ್ರವಾಸಿಗರು ಸಾಕ್ಷಿಯಾಗಿದ್ದರು. ಕಾರ್ಯಕ್ರಮದ ವೇಳೆ ಸ್ಥಳದಲ್ಲಿ ಸಾಕಷ್ಟು ಜನರು ನೆರೆದಿದ್ದರಿಂದ ಇದನ್ನೇ ಲಾಭವಾಗಿ ಬಳಸಿಕೊಂಡಿರವ ಕಾಮಾಂಧರು ಮಹಿಳೆಯರನ್ನು ನೋಡಿ ಕೆಟ್ಟಕೆಟ್ಟದಾಗಿ ಮಾತನಾಡಿ, ಲೈಂಗಿಕ ಕಿರುಕುಳ ನೀಡಿದ್ದಾರೆ. 
ಘಟನೆ ಬಳಿಕ ಸಾಕಷ್ಟು ಮಹಿಳೆಯರು ತಮಗಾದ ಕೆಟ್ಟ ಅನುಭವಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. 
ದಸರಾ ಸಂಭ್ರಮದ ವೇಳೆ ಸ್ಥಳದಲ್ಲಿದ್ದ ಅಂಗಡಿಗೆ ಹೋಗಿದ್ದ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ನನ್ನನ್ನು ಕೆಟ್ಟಾದಾಗಿ ಮುಟ್ಟಿದ. ಬಳಿಕ ಸ್ಥಳದಲ್ಲಿ ಹೆಚ್ಚು ಜನ ನೆರೆದಿದ್ದರಿಂದ ತಲೆಮರೆಸಿಕೊಂಡ. ಈ ಘಟನೆ ಸಾಕಷ್ಟು ಆಘಾತವನ್ನುಂಟು ಮಾಡಿದೆ. ಆತನ ವರ್ತನೆ ಕಂಡ ಕೂಡಲೇ ನನಗೇನು ಮಾಡಬೇಕೆಂದು ತಿಳಿಯಲಿಲ್ಲ. ಆತನಿಗಾಗಿ ನನ್ನ ಸ್ನೇಹಿತರು ಸಾಕಷ್ಟು ಹುಡುಕಾಟ ನಡೆಸಿದರು. ಆದರೆ, ಆತ ಸಿಗಲಿಲ್ಲ ಎಂದು ಯುವತಿಯೊಬ್ಬಳು ಹೇಳಿಕೊಂಡಿದ್ದಾಳೆ. 
ಘಟನೆ ಬಳಿಕ ಮೈಸೂರು ದಸರಾ ಕಾರ್ಯಕ್ರಮಗಳಿಗೆ ಭೇಟಿ ನೀಡುವ ನನ್ನ ಯೋಜನೆಗಳೆಲ್ಲವನ್ನೂ ರದ್ದು ಮಾಡಬೇಕಾಯಿತು ಎಂದು ತಿಳಿಸಿದ್ದಾರೆ. 
ಇದಲ್ಲದೆ, ತಾಯಿ ಹಾಗೂ ಮಗಳಿಬ್ಬರೊಂದಿಗೂ ಯುವಕರ ಗುಂಪೊಂದು ಕೆಟ್ಟದಾಗಿ ನಡೆದುಕೊಂಡಿರುವ ಘಟನೆ ಕೂಡ ನಡೆದಿದೆ. 
ಘಟನೆ ಕುರಿತಂತೆ ಮಹಿಳೆ ಯುವಕರಿದ್ದ ಕಾರಿನ ಸಂಪೂರ್ಣ ಮಾಹಿತಿಯೊಂದಿಗೆ ಪೊಲೀಸರಿಗೆ ದೂರು ನೀಡಿದ್ದಾರೆ. 
ಕಿರಿದಾದ ರಸ್ತೆಯಲ್ಲಿ ವೇದಿಕೆ ನಿರ್ಮಿಸಲಾಗಿತ್ತು. ಕಾರ್ಯಕ್ರಮಕ್ಕೆ ದೊಡ್ಡ ಸಂಖ್ಯೆಯಲ್ಲಿ ಜನರ ಸೇರಿದ್ದನ್ನೇ ಕಿಡಿಗೇಡಿಗಳು ತಮ್ಮ ಲಾಭಕ್ಕೆ ಬಳಸಿಕೊಂಡಿದ್ದಾರೆ. ಮಹಿಳೆಯರಿಗೆ ಕಿರುಕುಳ ನೀಡಿದ್ದಾರೆ. ಮುಂದಿನ ವರ್ಷ ದೊಡ್ಡ ರಸ್ತೆಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ. ಘಟನೆ ಸಂಬಂಧ ತನಿಖೆಗೆ ಆದೇಶಿಸಲಾಗಿದೆ ಎಂದು ಸಚಿವ ಜಿ.ಟಿ.ದೇವೇಗೌಡ ಅವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com