ನಗರದಲ್ಲಿರುವ ಅರ್ಧದಷ್ಟು ಜಾಹೀರಾತು ಫಲಕಗಳು ಅಕ್ರಮ: ಹೈಕೋರ್ಟ್'ಗೆ ವರದಿ ಸಲ್ಲಿಸಿದ ಬಿಬಿಎಂಪಿ

ನಗರದಲ್ಲಿರುವ ಅರ್ಧದಷ್ಟು ಜಾಹೀರಾತು ಫಲಕಗಳು ಅಕ್ರಮ ಜಾಹೀರಾತುಗಳಾಗಿದ್ದವು ಎಂದು ಹೈಕೋರ್ಟ್'ಗೆ ಬಿಬಿಎಂಪಿ ಶುಕ್ರವಾರ ವರದಿ ಸಲ್ಲಿಸಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಬೆಂಗಳೂರು: ನಗರದಲ್ಲಿರುವ ಅರ್ಧದಷ್ಟು ಜಾಹೀರಾತು ಫಲಕಗಳು ಅಕ್ರಮ ಜಾಹೀರಾತುಗಳಾಗಿದ್ದವು ಎಂದು ಹೈಕೋರ್ಟ್'ಗೆ ಬಿಬಿಎಂಪಿ ಶುಕ್ರವಾರ ವರದಿ ಸಲ್ಲಿಸಿದೆ. 
ನಗರದಲ್ಲಿ ಅನಧಿಕೃತ ಜಾಹೀರಾತು ಫಲಕಗಳ ಹಾವಳಿಯ ವಿರುದ್ಧ ಸಲ್ಲಿಕೆಯಾಗಿದ್ದ ಮೂರು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಹಾಗೂ ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ಪೀಠ ವಿಚಾರಣೆ ನಡೆಸಿತು. 
ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲರು ವಾದ ಮಂಡಿಸಿ, ಅಕ್ರಮ ಜಾಹೀರಾತುಗಳ ಕುರಿತಂತೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದರು. 
ನಗರ ವ್ಯಾಪ್ತಿಯಲ್ಲಿರುವ 4,718 ಫ್ಲೆಕ್ಸ್, ಹೋರ್ಡಿಂಗ್ಸ್ ಗಳನ್ನು ತೆರವುಗೊಳಿಸುವ ಸಂಬಂಧ ಸಾರ್ವಜನಿಕ ಪ್ರಕಟಣೆ ನೀಡಿ, ಆ.20ರೊಳಗೆ ದಾಖಲೆಗಳ ಸಹಿತ ಆಕ್ಷೇಪಣೆ ಸಲ್ಲಿಸಲು ಸೂಚಿಸಲಾಗಿತ್ತು. ಆ ಪೈಕಿ 1,.1817 ಫ್ಲೆಕ್ಸ್ ಗಳ ಮಾಲೀಕರು ಆಕ್ಷೇಪಣೆಗಳನ್ನು ಸಲ್ಲಿಸಿದ್ದರು. ಅದರಲ್ಲಿ 1,631 ಅರ್ಜಿ ಇತ್ಯರ್ಥಪಡಿಸಲಾಗಿದೆ. ಉಳಿದ ಎರಡು ಸಾವಿರಕ್ಕೂ ಅಧಿಕ ಜಾಹೀರಾತು ಫಲಕಗಳ ಮಾಲೀಕರು ಯಾವುದೇ ದಾಖಲೆ ಹಾಗೂ ಆಕ್ಷೇಪಣೆ ಸಲ್ಲಿಸಿಲ್ಲ ಎಂದು ವಿವರಿಸಿದರು. 
ಅಲ್ಲದೆ, ಜಾಹೀರಾತು ನೀತಿ ಮತ್ತು ಕರಡು ಬೈಲಾ ಸಂಬಂಧ ಆ.29ರಂದು ಕೌನ್ಸಿಲ್ ಸಭೆಯಲ್ಲಿ ನಿರ್ಣಯ ಕೈಗೊಂಡು ಅನುಮೋದನೆಗಾಗಿ ರಾಜ್ಯ ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ ಎಂದು ತಿಳಿಸಿದರು. 
ಇದಕ್ಕೆ ಪೂರಕವಾಗಿ ಸರ್ಕಾರದ ಪರ ವಾದಿಸಿದ ರಾಜ್ಯ ಅಡ್ವೋಕೇಟ್ ಜನರಲ್ ಉದಯ ಹೊಳ್ಳ, ಬಿಬಿಎಂಪಿ ಶಿಫಾರಸು ಮಾಡಿರುವ ಜಾಹೀರಾತು ನೀತಿ ಹಾಗೂ ಕರಡು ಬೈಲಾವು ಸರ್ಕಾರದ ಕೈಸೇರಿದೆ. ಅವುಗಳನ್ನು ಅಂತಿಮಗೊಳಿಸಲು 30 ದಿನಗಳ ಕಾಲಾವಕಾಶದ ಅಗತ್ಯವಿದೆ ಎಂದು ತಿಳಿಸಿದರು. 
ಇದಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯ ನ್ಯಾಯಮೂರ್ತಿಗಳು, 30 ದಿನಗಳೇಕೆ ಬೇಕು ಎಂದು ಪ್ರಶ್ನಿಸಿದರು. 
ಇದಕ್ಕೆ ಉತ್ತರಿಸಿದ ಹೊಳ್ಳ ಅವರು, ಕಾನೂನೂ ಪ್ರಕಾರ ಕರಡು ಬೈಲಾ ಕುರಿತು ಮೊದಲು ಸಾರ್ವಜನಿಕ ಪ್ರಕಟಣೆ ನೀಡಿ ಆಕ್ಷೇಪಣೆ ಆಹ್ವಾನಿಸಬೇಕು. ನಂತರ ಸಾರ್ವಜನಿಕರು ಸಲ್ಲಿಸಿದ ಆಕ್ಷೇಪಣೆ ಪರಿಗಣಿಸಿ, ಅಗತ್ಯವಿದ್ದರೆ ಬೈಲಾ ಬದಲಾವಣೆ ಮಾಡಿ ಅನುಮೋದನೆ ನೀಡಬೇಕಿದೆ. ಈ ಎಲ್ಲಾ ಪ್ರಕ್ರಿಯೆ ಪೂರ್ಣಗೊಳ್ಳಲು 30 ದಿನಗಳ ಅಗತ್ಯವಿದೆ ಎಂದು ಮಾಹಿತಿ ನೀಡಿದರು. 
ಇದೇ ವೇಳೆ ಅನಧಿಕೃತ ಜಾಹೀರಾತು ಅಳವಡಿಕೆಗೆ ಸಂಬಂಧಿಸಿದ 234 ಪ್ರಕರಣಗಳಲ್ಲಿ 228 ಪ್ರಕರಗಳಲ್ಲಿನ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಆ ಪ್ರಕರಣಗಳ ಬಗ್ಗೆ ಅಧೀನ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ಅವುಗಳ ವಿಚಾರಣೆ ಈಗಾಗಲೇ ಪೂರ್ಣಗೊಂಡಿದೆ ಎಂದು ವಿವರಿಸಿದರು. 
ಈ ಹೇಳಿಕೆ ದಾಖಲಿಸಿಕೊಂಡ ನ್ಯಾಯಪೀಠ, ಎಲ್ಲಾ ಆರೋಪಿಗಳ ಹೆಸರು, ದೂರವಾಣಿ ಸಂಖ್ಯೆ, ಗ್ರಾಮಪಂಚಾಯಿತಿಗಳಲ್ಲಿ ಜಾಹೀರಾತು ಅಳವಡಿಸುವುದಕ್ಕೆ ಸಂಬಂಧಿಸಿದ ಬೈಲಾವನ್ನು ಮುಂದಿನ ವಿಚಾರಣೆ ವೇಳೆ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿ ವಿಚಾರಣೆಯನ್ನು ಸೆ.11ಕ್ಕೆ ಮುಂದೂಡಿತು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com