ಈ ಮಾದರಿ ಠಾಣೆ ನಿರ್ಮಾಣಕ್ಕೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಪಟ್ಟಿರುವ ಶ್ರಮ ಕೂಡ ಶ್ಲಾಘನೀಯ. ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಬ್'ಇನ್ಸ್'ಪೆಕ್ಟರ್ ಸಂತೋಷ್ ಮತ್ತು ಸಿಬ್ಬಂದಿಗಳ ಇಚ್ಛಾಶಕ್ತಿ ಹಾಗೂ ಮುತುವರ್ಜಿಯ ಪರಿಣಾ 145 ಹಳ್ಳಿಗಳ ಗ್ರಾಮಸ್ಥರ ಸೇವೆಗಾಗಿ ಈ ಸುಸಜ್ಜಿತ ಠಾಣೆ ನಿರ್ಮಾಣಗೊಂಡಿದೆ.
ನಿದ್ರಾಸ್ಥಿತಿಯಲ್ಲಿದ್ದ ಟೌನ್'ಗೆ ಈ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಾಗೂ ಪರಮೇಶ್ವರ್ ಅವರು ಠಾಣೆಯನ್ನು ಮಂಜೂರು ಮಾಡಿದ್ದರು. ಆದರೆ, ಠಾಣೆ ನಿರ್ಮಾಣಕ್ಕೆ ಸರ್ಕಾರದ ಜಾಗವಿರಲಿಲ್ಲ. ಆದರೂ ಪಿಎಸ್ಐ ಸಂತೋಷ್ ಅವರು ಕಂದಾಯ ಅಧಿಕಾರಿಗಳ ಸಹಾಯದೊಂದಿಗೆ, ಸಮೀಕ್ಷೆ ನಡೆಸಿ 20 ಗುಂಟೆ ಸ್ಥಳವನ್ನು ತೆಗೆದುಕೊಂಡು ಠಾಣೆ ನಿರ್ಮಾಣಕ್ಕೆ ಮುಂದಾಗಿದ್ದರು. ಪೊಲೀಸರ ಈ ಶ್ರಮಕ್ಕೆ ಸಹಾಯ ಮಾಡಿದ್ದ ಸರ್ಕಾರ ಕೂಡ ಠಾಣೆ ನಿರ್ಮಾಣಕ್ಕೆ ರೂ.91 ಲಕ್ಷ ಬಿಡುಗಡೆ ಮಾಡಿತ್ತು. ಇದರ ನಡುವೆಯ ಸಂತೋಷ್ ಅವರು ಸಿಬ್ಬಂದಿಗಳು ಹಾಗೂ ಸ್ಥಳೀಯರ ಸಹಾಯವನ್ನು ಪಡೆದುಕೊಂಡು ಠಾಣೆಯನ್ನು ಮಾದರಿ ಠಾಣೆಯನ್ನಾಗಿ ನಿರ್ಮಾಣ ಮಾಡಿದ್ದಾರೆ.
2007 ಬ್ಯಾಚ್ ಪಿಎಸ್ಐ ಆಗಿರುವ ಸಂತೋಷ್ ಅವರು ಈ ಕುರಿತು ಮಾತನಾಡಿದ್ದು, ಠಾಣೆಗೆ ಒಂದು ಉತ್ತಮವಾದ ಆಕಾರ ನೀಡಲು ಶ್ರಮಪಡಲಾಯಿತು. ಠಾಣೆ ನಿರ್ಮಾಣಕ್ಕೆ ಸ್ಥಳೀಯರಿಂದ ವಸ್ತುಗಳನ್ನು ಪಡೆಯಲಾಗಿತ್ತೇ ಹೊರತು ಹಣವನ್ನು ಪಡೆದಿರಲಿಲ್ಲ. ಇದೀಗ ಠಾಣೆ 145 ಹಳ್ಳಿಗಳ ಅಡಿಯಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಹೇಳಿದ್ದಾರೆ.