ಕಾರವಾರ : ಉತ್ತರ ಕನ್ನಡ ಜಿಲ್ಲೆ ಕಾರವಾರ ಬಳಿಯ ಬೈತಾಕೊಲಾ ಗ್ರಾಮದಲ್ಲಿ ಪ್ರತಿದಿನ ಬೆಳಗ್ಗೆ ಹಾಗೂ ಮುಸ್ಸಂಜೆ ನಾಲ್ಕೈದು ವರ್ಷದ ಹೆಣ್ಣು ಚಿರತೆಯೊಂದು ತನ್ನ ಎರಡು ಮರಿಗಳೊಂದಿಗೆ ಬೆಟ್ಟದಲ್ಲಿ ಠಿಕಾಣಿ ಹೊಡುತ್ತಿದ್ದು, ಸುಮಾರು ಹೊತ್ತು ಅಲ್ಲಿಯೇ ವಿರಾಮಿಸುತ್ತಿವೆ.
ಆದರೆ, ಗ್ರಾಮಸ್ಥರಿಗೆ ಯಾವುದೇ ರೀತಿಯ ತೊಂದರೆ ಕೊಡುತ್ತಿಲ್ಲ. ಇವುಗಳಿಂದ ಗ್ರಾಮಸ್ಥರು ಕೂಡಾ ಆತಂಕಗೊಂಡಿಲ್ಲ. ಇದು ಪ್ರತಿನಿತ್ಯ ನೋಡುವ ದೃಶ್ಯವಾಗಿದೆ ಎಂದು ಪ್ರೀತಿಯಿಂದ ಹೇಳುತ್ತಾರೆ.
ರಾಜ್ಯದ ಹಲವು ಕಡೆಗಳಲ್ಲಿ ವನ್ಯಜೀವಿಗಳು ಹಾಗೂ ಮಾನವ ಸಂಘರ್ಷದಿಂದಾಗಿ ಚಿರತೆ ಸಂರಕ್ಷಿತ ಪ್ರದೇಶಗಳಿಂದ ಬೇರೆಡೆಗೆ ರವಾನಿಸುವಂತೆ ಜನರು ಆಗ್ರಹಿಸುತ್ತಿದ್ದಾರೆ. ಆದರೆ. ಬೈತಾಕೊಲಾ ನಿವಾಸಿಗಳು ತಮ್ಮ ಮಧ್ಯೆಯೇ ಚಿರತೆ ಕುಟುಂಬ ಸಂತೋಷದಿಂದ ಬದುಕಲು ಅನುಮತಿಸಿದ್ದಾರೆ.
ತಾಯಿ ಚಿರತೆ ತನ್ನ ಮರಿಗಳಿಗೆ ತೋರಿಸುವ ಕಾಳಜಿ ಕಂಡು ಗ್ರಾಮಸ್ಥರು ಮಮ್ಮಲ ಮರುಗುತ್ತಾರೆ. ಇವುಗಳನ್ನು ಎಲ್ಲಿಗೂ ಬೇರೆಡೆಗೆ ರವಾನಿಸದಂತೆ ಅರಣ್ಯ ಇಲಾಖೆ ಅಧಿಕಾರಿಗಳ ಬಳಿ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ.
ಈ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಸ್ಥಳೀಯ ನಿವಾಸಿ ಶ್ಯಾಮಲಾ, ತನ್ನ ಮರಿಗಳೊಂದಿಗೆ ವಾಸಿಸುತ್ತಿರುವ ಚಿರತೆಯಿಂದ ತಮ್ಮಗೆನೂ ಭಯ ಆಗುತ್ತಿಲ್ಲ. ಬೆಳಗ್ಗೆ ಮತ್ತು ಮುಸ್ಸಂಜೆ ತನ್ನ ಮರಿಗಳೊಂದಿಗೆ ಬರುವ ಚಿರತೆ ಬೆಟ್ಟದಲ್ಲಿ ವಿರಾಮಿಸುತ್ತದೆ. ಇದು ಪ್ರತಿದಿನ ನಡೆಯುತ್ತದೆ ಆದರೆ, ಯಾರಿಗೂ ತೊಂದರೆ ಕೊಡುವುದಿಲ್ಲ ಎಂದು ಹೇಳುತ್ತಾರೆ.
ಕಾರವಾರ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ ಮಾತನಾಡಿ, ಇದು ಪ್ರತಿನಿತ್ಯ ಕಂಡುಬರುವ ನೋಟವಾಗಿದ್ದು, ಇಲ್ಲಿರುವ ಜನರು ಹೆಚ್ಚು ಸಹಿಷ್ಣುರಾಗಿದ್ದಾರೆ . ಚಿರತೆಗಳು ಯಾರಿಗೊ ತೊಂದರೆ ನೀಡುತ್ತಿಲ್ಲ. ಹಾಗಾಗೀ ಅವುಗಳ ಮಧ್ಯಯೇ ವಾಸಿಸುತ್ತಿದ್ದಾರೆ ಎಂದು ಹೇಳುತ್ತಾರೆ.
ಚಿರತೆ ಚಲನವಲನಗಳ ಬಗ್ಗೆ ಕಣ್ಣಿಡಲಾಗಿದೆ. ರಾತ್ರಿ ವೇಳೆಯಲ್ಲಿ ಕ್ಯಾಮರಾ ಮೂಲಕ ಗಮನಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಕಾರವಾರ ಅರಣ್ಯಗಳ ಜಿಲ್ಲೆಯಾಗಿದ್ದು, ಚಿರತೆ ಸೇರಿದಂತೆ ಹಲವು ವನ್ಯಜೀವಿಗಳಿವೆ. ಅವುಗಳೊಂದಿಗೆ ಶಾಂತಿಯುತವಾಗಿ ವಾಸಿಸುವುದನ್ನು ಇಲ್ಲಿನ ಜನರು ಕಲಿತಿದ್ದಾರೆ ಎಂದು ವನ್ಯಜೀವಿ ಪ್ರೇಮಿಗಳು ಹೇಳುತ್ತಾರೆ.
Advertisement