ಬೆಂಗಳೂರು: ಚೆನ್ನೈ ನಗರಕ್ಕೆ ಕುಡಿಯುವ ನೀರು ಒದಗಿಸುವ ಕೃಷ್ಣಾ ನದಿ ನೀರಿನಲ್ಲಿ ತನ್ನ ಪಾಲಿನ ನೀರು ಸಿಗುತ್ತಿಲ್ಲ ಎಂಬ ತಮಿಳುನಾಡು ಸರ್ಕಾರದ ಆರೋಪ ಕುರಿತು ಪರಿಶೀಲಿಸಲು ತಾಂತ್ರಿಕ ಸಮಿತಿಯನ್ನು ರಚಿಸಲಾಗುತ್ತಿದೆ. 1983ರಲ್ಲಿ ತಮಿಳುನಾಡು ಮತ್ತು ಆಂಧ್ರ ಪ್ರದೇಶ ಸರ್ಕಾರಗಳ ನಡುವೆ ಆದ ಒಪ್ಪಂದ ಪ್ರಕಾರ 12 ಟಿಎಂಸಿ ಕೃಷ್ಣಾ ನದಿ ನೀರನ್ನು ಚೆನ್ನೈಗೆ ಪೂರೈಕೆ ಮಾಡಬೇಕಾಗಿದೆ.
ಕೃಷ್ಣಾ ಜಲ ನಿಗಮ ಮಂಡಳಿ ಅಧ್ಯಕ್ಷರ ನೇತೃತ್ವದಲ್ಲಿ ಸಮಿತಿಯನ್ನು ರಚಿಸುವ ನಿರ್ಧಾರವನ್ನು ನಿನ್ನೆ ಬೆಂಗಳೂರಿನಲ್ಲಿ ನಡೆದ ದಕ್ಷಿಣ ವಲಯ ಮಂಡಳಿಯ 28ನೇ ಸಭೆಯಲ್ಲಿ ಕೈಗೊಳ್ಳಲಾಯಿತು. ಸಭೆಯಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಕರ್ನಾಟಕ ಮತ್ತು ಪುದುಚೆರಿಗಳ ಮುಖ್ಯಮಂತ್ರಿಗಳು, ತಮಿಳುನಾಡು ಉಪ ಮುಖ್ಯಮಂತ್ರಿ ಹಾಗೂ ಬೇರೆ ಸಂಬಂಧಪಟ್ಟ ರಾಜ್ಯಗಳ ಸಚಿವರುಗಳು ಭಾಗವಹಿಸಿದ್ದರು.
1983ರ ಒಪ್ಪಂದ ಪ್ರಕಾರ, ಚೆನ್ನೈ ನಗರಕ್ಕೆ ಕುಡಿಯುವ ನೀರು ಒದಗಿಸಲು ತಮಿಳುನಾಡಿಗೆ 12 ಟಿಎಂಸಿ ನೀರು ಸಿಗಬೇಕಾಗಿದೆ. ಬೇರೆ ರಾಜ್ಯಗಳು ನಾವು ನೀರು ಬಿಡುಗಡೆ ಮಾಡುತ್ತಿದ್ದೇವೆ ಎಂದು ಹೇಳುತ್ತಿದ್ದರೆ ತಮಿಳು ನಾಡು ಸರ್ಕಾರ ತಮಗೆ ಒಪ್ಪಂದ ಮಾಡಿಕೊಂಡಷ್ಟು ನೀರು ದೊರಕುತ್ತಿಲ್ಲ ಎಂದು ಹೇಳುತ್ತಿದೆ. ಇದಕ್ಕಾಗಿ ಸಮಿತಿಯನ್ನು ರಚಿಸಲಾಗಿದ್ದು, ಈ ಕುರಿತು ಚರ್ಚೆ ಸೌಹಾರ್ದಯುತವಾಗಿ ನಡೆದವು ಎಂದು ಮಂಡಳಿಯ ಕಾರ್ಯದರ್ಶಿ ಆರ್ ಬುಹ್ರಿ ತಿಳಿಸಿದ್ದಾರೆ.
ತಾಂತ್ರಿಕ ಸಮಿತಿಯಲ್ಲಿ ತಮಿಳುನಾಡು, ಕರ್ನಾಟಕ, ಆಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳ ಮುಖ್ಯ ಎಂಜಿನಿಯರ್ ಗಳು ಇರುತ್ತಾರೆ.
ಚಿನ್ನದ ರಥ(ಗೋಲ್ಡನ್ ಚಾರಿಯಟ್) ರೈಲಿನ ದರವನ್ನು ತಗ್ಗಿಸಬೇಕೆಂದು ಕೂಡ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಈ ಮೂಲಕ ದಕ್ಷಿಣ ಭಾರತದ ಬೇರೆ ರಾಜ್ಯಗಳಲ್ಲಿ ಇದರ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಬೇಕೆಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಸಭೆಯಲ್ಲಿ ಪ್ರಸ್ತಾಪಿಸಿದರು. ಮಂಡಳಿ ಸಭೆಯಲ್ಲಿ 27 ವಿಷಯಗಳಲ್ಲಿ 22 ವಿಷಯಗಳನ್ನು ಬಗೆಹರಿಸಲಾಯಿತು.
ರಕ್ತ ಚಂದನ ಕಳ್ಳ ಸಾಗಣೆ ಮಾಡುವವರನ್ನು ಹಿಡಿಯಲು ಸಂಸ್ಥೆಗಳ ನಡುವೆ ಉತ್ತಮ ಸಮನ್ವಯತೆಗೆ ಮಂಡಳಿಯು ಗೃಹ ಸಚಿವಾಲಯದ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲು ಕೂಡ ಮಂಡಳಿ ನಿರ್ಧರಿಸಿತು.
Advertisement