ಬೆಂಗಳೂರು: ಭಯೋತ್ಪಾದನೆ ಹಾಗೂ ನಕ್ಸಲ್ ಸಂಬಂಧಿತ ಚಟುವಟಿಕೆಗಳ ನಿಯಂತ್ರಣಕ್ಕಾಗಿ ದಕ್ಷಿಣ ಪ್ರಾಂತೀಯ ಪೊಲೀಸರ ನಡುವೆ ಉತ್ತಮ ಸಮನ್ವಯತೆ ಇರಬೇಕಾಗುತ್ತದೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.
ದಕ್ಷಿಣ ರಾಜ್ಯಗಳ ಪ್ರಾದೇಶಿಕ ಪೊಲೀಸರ ಸಮನ್ವಯತೆ ಸಮಿತಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯಗಳ ನಡುವೆ ಸಮರ್ಪಕ ಸಮನ್ವಯತೆ ಇಲ್ಲದಿದ್ದರೆ ಭಯೋತ್ಪಾದನಾ ಸಂಬಂಧಿತ ಚಟುವಟಿಕೆಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದರು.
ಸೈಬರ್ ಅಪರಾಧ, ಮಾದಕ ವಸ್ತು, ಮಾನವ ಕಳ್ಳಸಾಗಣೆಗೆ ಎಲ್ಲೆ ಇಲ್ಲ. ಮಾಹಿತಿ ಹಾಗೂ ಗುಪ್ತಚರದ ಮೂಲಕ ಸಮನ್ವಯತೆ ಸಾಧಿಸಿ ಕಾನೂನು ರಕ್ಷಿಸಬೇಕಾಗದ ಅಗತ್ಯತೆ ಹೆಚ್ಚಾಗಿದೆ. ಪೊಲೀಸರ ಕೆಲಸ ಹಾಗೂ ಜೀವನಮಟ್ಟವನ್ನು ಸುಧಾರಿಸಬೇಕಾಗಿದೆ ಎಂದು ಹೇಳಿದರು.
ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಅಂಡಮಾನ್ ಮತ್ತು ನಿಕೋಬರ್, ಲಕ್ಷದ್ವೀಪಗಳ ಐಜಿ ಡಿಜಿಪಿಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಒಂದು ತಿಂಗಳಿಗೆ ಒಂದು ಬಾರಿ ಪ್ರಾದೇಶಿಕ ಪೊಲೀಸ್ ಸಮನ್ವಯ ಸಮಿತಿ ಸಭೆ ಸೇರಲಿದ್ದು, ಅಂತರಾಜ್ಯಕ್ಕೆ ಸಂಬಂಧಿಸಿದಂತೆ ಅಪರಾಧಗಳು, ನಕ್ಸಲ್, ಗಡಿ ವಿವಾದ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸುತ್ತಾರೆ.
Advertisement