ಹಾಸನ: ಕೆಲ ದಿನಗಳ ಹಿಂದೆ ಜಿಲ್ಲಾಂಧಿಕಾರಿಗಳ ವರ್ಗಾವಣೆಗೆ ಸಾಕ್ಷಿಯಾಗಿದ್ದ ಹಾಸನದಲ್ಲಿ ಈಗ ಮತ್ತೆ ಧಿಡೀರ್ ಬೆಳವಣಿಗೆ ನಡೆದಿದೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಅತ್ಯಂತ ಸೂಕ್ಷ್ಮ ಕ್ಷೇತ್ರ ಎಂದು ಹೇಳಲಾಗಿರುವ ಹಾಸನದ ಪೊಲೀಸ್ ವರಿಷ್ಠಾಧಿಕಾರಿಯನ್ನು ವರ್ಗಾವಣೆ ಮಾಡಲಾಗಿದೆ.
ಚುನಾವಣಾ ಆಯೋಗದ ನಿರ್ದೇಶನದ ಅನುಸಾರ ಪೊಲೀಸ್ ವರಿಷ್ಠಾಧಿಕಾರಿ ಡಾ.ಎನ್ ಪ್ರಕಾಶ ಗೌಡ ಅವರನ್ನು ವರ್ಗಾವಣೆ ಮಾಡಲಾಗಿದೆ. ಪ್ರಕಾಶ್ ಗೌಡ ಸ್ಥಾನಕ್ಕೆ ಎಫ್ಎಸ್ಎಲ್ ನಿರ್ದೇಶಕರಾಗಿದ್ದ ಚೇತನ್ ಸಿಂಗ್ ರಾಥೋಡ್ ಆಗಮಿಸಿದ್ದಾರೆ.
ಇದಕ್ಕೆ ಮುನ್ನ ಕಳೆದ ವಾರ ಹಾಸನ ಜಿಲ್ಲಾಧಿಕಾರಿಯಾಗಿದ್ದ ಅಕ್ರಂ ಪಾಷ ಅವರನ್ನ ವರ್ಗಾವಣೆ ಮಾಡಲಾಗಿ ಅವರ ಸ್ಥಾನಕ್ಕೆ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರನ್ನು ನೇಮಕ ಮಾಡಲಾಗಿತ್ತು.ಈಗ ಮತ್ತೆ ಪೋಲೀಸ್ ಇಲಾಖೆಯಲ್ಲಿ ಮುಖ್ಯ ಅಧಿಕಾರಿಯೊಬ್ಬರ ವರ್ಗಾವಣೆ ನಡೆದಿರುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ಇನ್ನೊಂದೆಡೆ ಪೊಲೀಸ್ ವರಿಷ್ಠಾಧಿಕಾರಿಗಳ ವರ್ಗಾವಣೆ ಮಾಡುವಂತೆ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿತ್ತು. ಕಳೆದ ವಿಧಾನಸಭೆ ಚುನಾವಣೆ ವೇಳೆ ನಡೆಇದ್ದ ಪ್ರಕರಣಕ್ಕೆ ಸಂಬಂಧಿಸಿಅಂತೆ ಈ ವರ್ಗಾವಣೆ ನಡೆಯಬೇಕೆಂದು ಹಾಸನ ಬಿಜೆಪಿ ಶಾಸಕ ಪ್ರೀತಂಗೌಡ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದರು ಎನ್ನಲಾಗಿದೆ.