ಈ ಶಿಫಾರಸ್ಸಿನ ಅನ್ವಯ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು 2019ರ ಜನವರಿ 2ರಂದು ದೇವಾಲಯದ ಟ್ರಸ್ಟ್ ಸದಸ್ಯರಿಗೆ ನೋಟಿಸ್ ಜಾರಿ ಮಾಡಿ, 'ದೇಗುಲವನ್ನೇಕೆ ಸರ್ಕಾರದ ವಶಕ್ಕೆ ಪಡೆಯಬಾರದು' ಎಂದು ತಿಂಗಳ ಒಳಗಾಗಿ ಲಿಖಿತ ಸಮಜಾಯಿಷಿ ನೀಡುವಂತೆ ಸೂಚಿಸಿದ್ದರು. ದೇವಾಲಯದ ಆಡಳಿತ ಹಾಗೂ ಚರ ಆಸ್ತಿಯನ್ನು ಧಾರ್ಮಿಕ ದತ್ತಿ ಇಲಾಖೆಗೆ ವಹಿಸಲು ಸಂಪೂರ್ಣ ಒಪ್ಪಿಗೆ ಇರುವುದಾಗಿ ಹನೂರು ತಾಲ್ಲೂಕಿನ ವಿಶೇಷ ತಹಶೀಲ್ದಾರ್ ಸಮ್ಮುಖದಲ್ಲಿ ಟ್ರಸ್ಟಿಗಳು ಲಿಖಿತ ರೂಪದಲ್ಲಿ ಒಪ್ಪಿಗೆ ನೀಡಿದ್ದರು. ಇದರ ಆಧಾರದಲ್ಲಿ, ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮಾದಾಯ ದತ್ತಿಗಳ ಕಾಯ್ದೆಯ ಸೆಕ್ಷನ್ 42 ಅನ್ವಯ ದೇವಾಲಯವನ್ನು ಸರ್ಕಾರ ತನ್ನ ವಶಕ್ಕೆ ತೆಗೆದುಕೊಂಡಿದೆ ಎಂದು ತಿಳಿದುಬಂದಿದೆ.