ಬೆಂಗಳೂರು: ಸಿನಿಮಾಗಳಲ್ಲಿ ನಟಿಸಲು ಅವಕಾಶ ನೀಡುವುದಾಗಿ ವಂಚಿಸಿದ್ದ ಆರೋಪಿ ಸೆರೆ
ಬೆಂಗಳೂರು: ಜಾಹೀರಾತು ಫೋಟೋ ಶೂಟ್, ಧಾರಾವಾಹಿ ಹಾಗೂ ಸಿನಿಮಾದಲ್ಲಿ ನಟಿಸಲು ಅವಕಾಶ ಕೊಡಿಸುವುದಾಗಿ 9 ಸುಂದರ ಯುವತಿಯರನ್ನು ವಂಚಿಸಿದ ವ್ಯಕ್ತಿಯನ್ನು ನಂದಿನಿಲೇಔಟ್ ಪೊಲೀಸರು ಬಂಧಿಸಿದ್ದಾರೆ
ಕಿರ್ಲೋಸ್ಕರ್ ಲೇಔಟ್ ನ 43 ವರ್ಷದ ನಿಖಿಲ್ಗೌಡ ಅಲಿಯಾಸ್ ವಾದಿರಾಜ್ ಅಲಿಯಾಸ್ ಸಂಜಯ್ ಅಲಿಯಾಸ್ ಸತೀಶ್ ಬಂಧಿತ ಆರೋಪಿ.
ಆಗಸ್ಟ್ 21 ಯುವತಿಯೋರ್ವಳು ತನಗೆ ನಿಖಿಲ್ಗೌಡ ಎಂಬುವನು ಜಾಹೀರಾತು ಫೋಟೋ ಶೂಟ್, ಸಿನಿಮಾ, ಧಾರಾವಾಹಿಗಳಲ್ಲಿ ನಟಿಸಲು ಅವಕಾಶ ಕೊಡಿಸುತ್ತೇನೆಂದು ಹೇಳಿದ್ದ. ನಂತರ ಸ್ವಲ್ಪ ದಿನದ ಬಳಿಕ ಮನೆಯ ಹತ್ತಿರ ಬಂದು ನೀವು ಪೋತೀಸ್ ಸ್ಯಾರೀಸ್ ಮತ್ತು ಧವನಂ ಜ್ಯೂವೆಲ್ಲರಿಯ ಜಾಹೀರಾತು ಫೋಟೋ ಶೂಟ್ ಗೆ ಆಯ್ಕೆಯಾಗಿದ್ದೀರಿ ಎಂದು ಹೇಳಿ, 25 ಸಾವಿರ ರೂ ಹಣ ಪಡೆದುಕೊಂಡು ಹೋಗಿದ್ದ. ನಂತರ ಆತನನ್ನು ಫೋನ್ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದಾಗ ಸ್ವಿಚ್ ಆಫ್ ಆಗಿತ್ತು. ತನ್ನಿಂದ ಹಣ ಪಡೆದುಕೊಂಡು ಯಾವುದೇ ಅವಕಾಶ ಕೊಡಿಸದೇ ಮೋಸ ಮಾಡಿದ್ದಾನೆ ಎಂದು ನಂದಿನಿಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ನಿಖಿಲ್ಗೌಡನನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಆತ ಫೇಸ್ಬುಕ್ನಲ್ಲಿ ಸುಂದರ ಹುಡುಗಿಯರನ್ನು ಬೇರೆ ಬೇರೆ ಹೆಸರುಗಳಿಂದ ಪರಿಚಯಿಸಿಕೊಂಡು ಅವರಿಗೆ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ನಟಿಸಲು ಅವಕಾಶ ಕೊಡಿಸುವುದಾಗಿ ಬೆಂಗಳೂರು, ಮೈಸೂರು, ದಾವಣಗೆರೆ ಜಿಲ್ಲೆಯ ಸುಮಾರು 9 ಹೆಣ್ಣು ಮಕ್ಕಳಿಂದ 4.23 ಲಕ್ಷ ರೂ ಹಣ ಪಡೆದು ವಂಚಿಸಿದ್ದನು. ಅಲ್ಲದೇ, ಮಂಜುನಾಥ್ ಎಂಬುವರಿಗೆ ಬಿಡಿಎ ನಿವೇಶನ ಕೊಡಿಸುವುದಾಗಿ 50 ಸಾವಿರ ರೂ. ಹಣ ಪಡೆದುಕೊಂಡು ವಂಚಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.