ಬೆಂಗಳೂರು: ಅನಾರೋಗ್ಯದಿಂದ ದೈವಾದೀನರಾದ ಉಡುಪಿಯ ಪೇಜಾವರ ಶ್ರೀಗಳ ಪಾರ್ಥೀವ ಶರೀರವನ್ನು ಭಾನುವಾರ ಮಧ್ಯಾಹ್ನ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಅಂತಿಮ ದರ್ಶನಕ್ಕೆ ಇರಿಸಲಾಗುವುದು.
ತಾವೇ ಕಟ್ಟಿ ಬೆಳೆಸಿದ ವಿದ್ಯಾಪೀಠದಲ್ಲಿ ಶೀಕೃಷ್ಣನ ಸನ್ನಿಧಾನದ ಪಕ್ಕದಲ್ಲೇ ಬೃಂದಾವನ ಪ್ರವೇಶ ಮಾಡಲಿದ್ದಾರೆ. ಉಡುಪಿ ಭಾಗದ ಮಧ್ವ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನಗಳು ನೆರವೇರಲಿವೆ. ವಿದ್ಯಾಪೀಠದ ಕಾರ್ಯದರ್ಶಿ ಕೇಶವಾಚಾರ್ಯ ಅವರ ನೇತೃತ್ವದಲ್ಲಿ ಅಂತಿಮ ವಿಧಿವಿಧಾನ ನಡೆಯಲಿವೆ
ಸೂರ್ಯಾಸ್ತದೊಳಗೆ ಪಾರ್ಥೀವ ಶರೀರವನ್ನು ವಿದ್ಯಾಪೀಠಕ್ಕೆ ಸಾಗಿಸಲಾಗುವುದು. ಮೊದಲಿಗೆ ದೇಹಕ್ಕೆ ಸ್ನಾನ ಮಾಡಿಸಲಾಗುತ್ತದೆ. ನಂತರ ಗೋಪಿ ಚಂದನ, ಮುದ್ರಾಧಾರಣೆ ಮಾಡಲಾಗುತ್ತದೆ. ಶರೀರವನ್ನು ಬೆತ್ತದ ಬುಟ್ಟಿಯಲ್ಲಿ ಇರಿಸಿ ವಿದ್ಯಾಪೀಠದ ಸುತ್ತ ಪ್ರದಕ್ಷಿಣೆ ಮಾಡಿಸಲಾಗುತ್ತದೆ.
ವಿದ್ಯಾಪೀಠದ ಪಾಠ ಪ್ರವಚನ ಕಿವಿಗೆ ಕೇಳಿಸುತ್ತಿರಬೇಕೆಂದು ಶ್ರೀಗಳು ಹೇಳುತ್ತಿದ್ದರು. ಹೀಗಾಗಿ ಇಲ್ಲೇ ಬೃಂದಾವನ ನಿರ್ಮಿಸುತ್ತಿದ್ದೇವೆ ಎಂದು ಶ್ರೀಗಳ ಆಪ್ತರು ಹೇಳಿದ್ದಾರೆ. ಬೃಂದಾವನದೊಳಗೆ ಶ್ರೀಗಳನ್ನು ಸ್ವಸ್ತಿಕಾಸನದಲ್ಲಿ ಇರಿಸಿ ಮಣ್ಣು ಹಾಕಲಾಗುತ್ತದೆ. ಬೇರೆ ಪುಣ್ಯ ಕ್ಷೇತ್ರಗಳಿಂದ ತಂದ ಮಣ್ಣನ್ನೂ ಕೂಡಾ ಹಾಕಲಾಗುತ್ತದೆ. ಬೃಂದಾವನದ ಮೇಲೆ ಪಾತ್ರೆ ಇಟ್ಟು ಹಾಗೂ ಅದರಲ್ಲಿ ಸಾಲಿಗ್ರಾಮ ಇರಿಸಲಾಗುತ್ತದೆ. ಈ ಪಾತ್ರೆಯಲ್ಲಿ ರಂಧ್ರ ಇರುತ್ತದೆ. ಪ್ರತಿ ದಿನ ಪೂಜೆ ಮಾಡಿದ ಬಳಿಕ ನೀರನ್ನು ಸಾಲಿಗ್ರಾಮಕ್ಕೆ ಸುರಿಯಲಾಗುತ್ತದೆ. ಆ ನೀರು ಅವರ ದೇಹದ ಮೇಲೆ ಬೀಳುತ್ತದೆ.
ಸದ್ಯಕ್ಕೆ ಇದು ತಾತ್ಕಾಲಿಕ ಬೃಂದಾವನವಾಗಿದ್ದು, ಒಂದೆರಡು ತಿಂಗಳ ನಂತರ ತಿಥಿ ದಿನಾಂಕ ಗೊತ್ತುಮಾಡಿ, ವ್ಯವಸ್ಥಿತವಾಗಿ ರೂಪಿಸಿದ ಕಲ್ಲಿನ ಬೃಂದಾವನ ಪ್ರತಿಷ್ಠಾಪಿಸಲಾಗುವುದು ಎಂದು ಪೇಜಾವರ ಶ್ರೀಗಳ ಶಿಷ್ಯರಾದ ವಿದ್ಯಾಪೀಠದ ಪ್ರಾಧ್ಯಾಪಕ ಕೃಷ್ಣರಾಜ ಕುತ್ಪಾಡಿ ಹೇಳಿದ್ದಾರೆ
Advertisement