ದಲಿತರಿಗಾಗಿ ಹೋರಾಟ: 50 ವರ್ಷಗಳ ಹಿಂದೆಯೇ ಕ್ರಾಂತಿ ಮೂಡಿಸಿದ್ದ ಪೇಜಾವರ ಶ್ರೀಗಳು!
ಮೈಸೂರು: ಅಯೋಧ್ಯೆ ರಾಮಮಂದಿರ ಹೋರಾಟದಲ್ಲಿ ಮುಂದೆಯಿದ್ದ ಪೇಜಾವರ ಶ್ರೀಗಳು ದಲಿತರಿಗಾಗಿ ಕೊನೆಯವರೆಗೂ ಹೋರಾಟ ನಡೆಸಿದ್ದರು. 50 ವರ್ಷಗಲ ಹಿಂದೆಯೇ ದಲಿತರ ಕೇರಿಯಲ್ಲಿ ಸತ್ಯನಾರಾಯಣ ಪೂಜೆ ನೆರವೇರಿಸಿ ಸಮಾನತೆ ಸಾರಿದ್ದರು.
ಕೊಪ್ಪಳ ಜಿಲ್ಲೆಯಲ್ಲಿ ಅಸ್ಪೃಶ್ಯತೆ ತಾಂಡವವಾಡುತ್ತಿದ್ದು. ಈ ವೇಳೆ ಪೇಜಾರ ಶ್ರೀಗಳು ನಗರಕ್ಕೆ ಆಗಮಿಸಿದ್ದರು. ದಲಿತರ ಕೇರಿಗೆ 1969ರಲ್ಲಿ ಶ್ರೀಗಳು ಭೇಟಿ ನೀಡಿದಾಗ ಎಲ್ಲೆಡೆ ಕೊಳಚೆ ತುಂಬಿತ್ತು. ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳಾಗಿರಲಿಲ್ಲ. ಈ ವೇಳೆ ಸ್ಥಳೀಯ ದಲಿತ ಮುಖಂಡರ ಸೇರಿಸಿ ಸ್ವಚ್ಛತಾ ಕಾರ್ಯ ನಡೆಸಿದ್ದರು. ಸ್ಥಳದಲ್ಲಿ ಟೆಂಟ್ ಹಾಕಿದ್ದ ಶ್ರೀಗಳು, ಸತ್ಯನಾರಾಯಣ ಪೂಜೆ ನೆರವೇರಿಸಿ ಎಲ್ಲರಿಗೂ ಪ್ರಸಾದ ವಿತರಿಸಿದ್ದರು.
ದಲಿತರ ಪರವಾಗಿ ಹೋರಾಟ ನಡೆಸಿದ್ದ ಶ್ರೀಗಳ ವಿರುದ್ದ ಕೆಲ ಟೀಕೆಗಳು ವ್ಯಕ್ತವಾಗಿದ್ದವು. ದಲಿತ ಪರವಾಗಿದ್ದ ಬರಹಗಾರರು ಹಾಗೂ ವಿಚಾರವಾದಿಗಳು ಟೀಕೆಗಳನ್ನು ವ್ಯಕ್ತಪಡಿಸಿದ್ದರು. ಪಂಕ್ತಿ ಭೇದದ ವಿರುದ್ದ ದಲಿತರು ಪ್ರತಿಭಟನೆ ನಡೆಸಿದ್ದರು.
ಕೃಷ್ಣಮಠದಲ್ಲಿ ಊಟ ಬಡಿಸುವುದರಲ್ಲಿ ಮೇಲ್ಜಾತಿ ಹಾಗೂ ಕೆಳೆಜಾತಿ ಎಂಬ ಪಂಕ್ತಿಭೇಧದ ನಡೆಸಲಾಗುತ್ತಿದೆ ಎಂದು ದಲಿತರು ಹೋರಾಟ ನಡೆಸಿದ್ದರು. ಇದನ್ನು ಗಮನಿಸಿದ ಶ್ರೀಗಳು ಬಳಿಕ ದಲಿತರ ಕಾಲೋನಿಗೇ ತೆರಳಿ ಅಲ್ಲಿ ದಲಿತರ ಮನೆಗಳಲ್ಲಿ ಪೂಜೆಗಳನ್ನು ನೆರವೇರಿಸಿದ್ದರು.
2012ರ ಜೂನ್ ತಿಂಗಳಿನಲ್ಲಿ ಜಿಲ್ಲೆಯ ರೋಣ ತಾಲೂಕಿನ ಕರಮುಡಿ ಗ್ರಾಮದಲ್ಲಿ ಅಸ್ಪೃಶ್ಯತೆ ಕಾರಣಕ್ಕಾಗಿ ದಲಿತರ ಮೇಲೆ ಹಲ್ಲೆ ನಡೆದಿತ್ತು. ಆ ಘಟನೆಯಲ್ಲಿ 10ಕ್ಕೂ ಹೆಚ್ಚು ಮಂದಿ ದಲಿತರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.
ಈ ವಿಚಾರ ತಿಳಿದ ಪೇಜಾವರ ಶ್ರೀಗಳು, ಆಸ್ಪತ್ರೆಗೆ ಭೇಟಿ ನೀಡಿ ದಲಿತರ ಆರೋಗ್ಯ ವಿಚಾರಿಸಿದ್ದರು. ನಂತರ ಕರಮುಡಿ ಗ್ರಾಮಕ್ಕೆ ಭೇಟಿ ನೀಡಿದ್ದರು. ದಲಿತರ ಕೇರಿಯಲ್ಲಿ ಅವರ ಸಮಸ್ಯೆಗಳನ್ನು ಆಲಿಸಿದ್ದರು. ಈ ವೇಳೆಯೂ ಕೆಲ ವಿವಾದಗಳು ಸೃಷ್ಟಿಯಾಗಿದ್ದವು. ಶ್ರೀಗಳು ದಲಿತರ ಮನೆಗಳಲ್ಲಿ ಆಹಾರ ಸೇವನೆ ಮಾಡಲಿಲ್ಲ ಎಂಬ ಟೀಕೆಗಳು ವ್ಯಕ್ತವಾಗಿದ್ದವು.
ಈ ವೇಳೆ ಸ್ಪಷ್ಟಪಡಿಸಿದ್ದ ಶ್ರೀಗಳು, ಚತುರ್ಮಾಸ ಆಚರಣೆ ಹಿನ್ನೆಲೆಯಲ್ಲಿ ಯಾರೇ ಆಹಾರ ನೀಡಿದರೂ ಈ ಸಂದರ್ಭದಲ್ಲಿ ನಾನು ಸೇವನೆ ಮಾಡುವುದಿಲ್ಲ. ನಾನೂ ಯಾವಾಗಲೂ ಸಮಾನತೆಗಾಗಿ ಹೋರಾಟ ನಡೆಸಿದ ವ್ಯಕ್ತಿ. ದಲಿತರಿ ಪರವಾಗಿ ಸದಾಕಾಲ ನಿಲ್ಲುತ್ತೇನೆಂದಿದ್ದಿರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ