ಚೆನ್ನರಾಯಪಟ್ಟಣ(ಹಾಸನ): ರಾಜ್ಯದ ಎಲ್ಲಾ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ, ಕಾವೇರಿ, ಕೃಷ್ಣ ಮತ್ತು ಮಹದಾಯಿ ನೀರಿನ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಿ ನೀರನ್ನು ಚಿನ್ನದಂತೆ ಬಳಕೆ ಮಾಡಬೇಕಾಗಿದೆ. ಮುಂದಿನ ಪೀಳಿಗೆಗೆ ನೀರಿನ ಸಂರಕ್ಷಣೆ ಅತ್ಯಗತ್ಯವಾಗಿದೆ. ನಾನಂತೂ ಹೆಚ್ಚು ದಿನ ಬದುಕಿರುವುದಿಲ್ಲ, ಸರ್ಕಾರದ ಯೋಜನೆಗಳನ್ನು ಸದ್ಭಳಕೆ ಮಾಡಿಕೊಳ್ಳಿ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಸಲಹೆ ನೀಡಿದ್ದಾರೆ.
ಹಾಸನದಲ್ಲಿ ನಿನ್ನೆ ಪೊಲೀಸ್ ಠಾಣೆ, ಕಚೇರಿಗಳ ಸಂಕೀರ್ಣ ಉದ್ಘಾಟನೆ ಮತ್ತು ಅರಸೀಕೆರೆ ತಾಲ್ಲೂಕಿನ ಬೀರೂರು ಹ್ಯಾಂಡ್ ಪೋಸ್ಟ್ ಬಳಿ ಸುಮಾರು 200 ಕೋಟಿ ರೂಪಾಯಿ ವೆಚ್ಚದಲ್ಲಿ ನೀರಾವರಿ ಮತ್ತು ಆರೋಗ್ಯ ಇಲಾಖೆಯ ಕಾರ್ಯಕ್ರಮಗಳಿಗೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಪೊಲೀಸ್ ಠಾಣೆಯನ್ನು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಉದ್ಘಾಟಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಹೆಚ್ ಡಿ ರೇವಣ್ಣ ಕೂಡ ಭಾಗವಹಿಸಿದ್ದರು.
ಪುಲ್ವಾಮಾ ಜಿಲ್ಲೆಯಲ್ಲಿ ನಡೆದ ಉಗ್ರರ ದಾಳಿಯನ್ನು ಖಂಡಿಸಿದ ಹೆಚ್ ಡಿ ದೇವೇಗೌಡ ಇದೊಂದು ಹೇಯ ಕೃತ್ಯ, ಗುಪ್ತಚರ ಇಲಾಖೆಯ ವೈಫಲ್ಯ ಇದೆ ಎಂದು ಹೇಳಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಂಡು ಸೂಕ್ತ ನಿರ್ಧಾರ ಕೈಗೊಳ್ಳಬೇಕು. ನಾವೆಲ್ಲ ಪಕ್ಷಾತೀತವಾಗಿ ಸರ್ಕಾರಕ್ಕೆ ಬೆಂಬಲ ನೀಡಬೇಕಾಗಿದೆ ಎಂದರು.
ಕೇರಳದಲ್ಲಿ ಪ್ರಧಾನಿ ಮೋದಿಯವರು ಸರ್ವಪಕ್ಷ ಸಭೆ ಕರೆದಿದ್ದಾರೆ. ಸರ್ವಪಕ್ಷ ಸಭೆಯ ನಿರ್ಧಾರಕ್ಕೆ ನಾವು ಬದ್ಧ. ದೇಶದ ವಿಚಾರದಲ್ಲಿ ರಾಜಕೀಯ ಬೇಡ. ಯಾಕೆ ದಾಳಿ ಆಯ್ತು ಎಂದು ಯೋಚಿಸುತ್ತಾ ಸಮಯ ವ್ಯರ್ಥ ಮಾಡುವುದರಲ್ಲಿ ಅರ್ಥವಿಲ್ಲ, ಮುಂದೆ ಏನು ಮಾಡಬೇಕು ಎಂದು ಯೋಚಿಸಬೇಕು ಎಂದರು.
10 ವರ್ಷ ಯಾವುದೇ ಪ್ರಧಾನಿ ಕಾಶ್ಮೀರಕ್ಕೆ ಹೋಗಿರಲಿಲ್ಲ. 'ನಾನು ಹತ್ತು ತಿಂಗಳ ಅವಧಿಗೆ ಈ ದೇಶದ ಪ್ರಧಾನಿಯಾಗಿದ್ದೆ. ಆಗಲೂ ಇಂತಹದ್ದೆ ಪರಿಸ್ಥಿತಿ ಇತ್ತು. 10 ತಿಂಗಳು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ 5 ಬಾರಿ ಕಾಶ್ಮೀರಕ್ಕೆ ಭೇಟಿ ನೀಡಿದ್ದೆ. ನಿಮ್ಮಿಂದ ಬೆಳೆದ ಸಾಮಾನ್ಯ ರೈತನ ಮಗನಾಗಿ ನಾನು ಕಾಶ್ಮೀರಕ್ಕೆ ಹೋದೆ. ಆ ವೇಳೆ ಒಂದು ಸಣ್ಣ ಘಟನೆಯೂ ನಡೆಯಲಿಲ್ಲ' ಎಂದು ಹೇಳಿದರು.
'ನಾನು ಕಾಶ್ಮೀರಕ್ಕೆ ಭೇಟಿ ನೀಡುತ್ತಿದ್ದ ಸಂದರ್ಭದಲ್ಲಿ ಕೆಲವರು ಅಲ್ಲಿಗೆ ಹೋಗಬೇಡಿ ಎಂದು ಸಲಹೆ ನೀಡಿದರು. ನನಗೆ ಏನಾದರೂ ಪ್ರಾಣಪಾಯವಾದರೆ, ನನ್ನ ಜನರು ಇರುವಲ್ಲಿಗೆ ನನ್ನ ಶವ ತೆಗೆದುಕೊಂಡಿ ಹೋಗಿ ಎಂದು ಹೇಳಿ ಕಾಶ್ಮೀರಕ್ಕೆ ಧೈರ್ಯಮಾಡಿ ಹೋದೆ ಎಂದು ದೇವೇಗೌಡರು ಸ್ಮರಿಸಿಕೊಂಡರು.
Advertisement