ಕುಡಿಯುವ ನೀರಿನ ದರ ಏರಿಕೆ ಮಾಡದಂತೆ ಎಚ್‌.ಕೆ ಪಾಟೀಲ್‌ ಆಗ್ರಹ

ಅನ್ನಭಾಗ್ಯದ ರೀತಿಯಲ್ಲೇ ಕುಡಿಯುವ ನೀರನ್ನು ಕಡಿಮೆ ದರದಲ್ಲಿ ನೀಡಬೇಕೆಂದು ಮಾಜಿ ಸಚಿವ ಎಚ್‌.ಕೆ ಪಾಟೀಲ್‌ ...
ಹೆಚ್ ಕೆ ಪಾಟೀಲ್
ಹೆಚ್ ಕೆ ಪಾಟೀಲ್
ಬೆಂಗಳೂರು: ಅನ್ನಭಾಗ್ಯದ ರೀತಿಯಲ್ಲೇ ಕುಡಿಯುವ ನೀರನ್ನು ಕಡಿಮೆ ದರದಲ್ಲಿ ನೀಡಬೇಕೆಂದು ಮಾಜಿ ಸಚಿವ ಎಚ್‌.ಕೆ ಪಾಟೀಲ್‌ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಈ ಕುರಿತು ರಾಜ್ಯಸರ್ಕಾರಕ್ಕೆ ಪತ್ರ ಬರೆದಿರುವ ಎಚ್‌.ಕೆ ಪಾಟೀಲ್‌, " ರಾಜ್ಯದ ಬಡ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸುವುದು ಸರ್ಕಾರದ ಮುಖ್ಯ ಜವಾಬ್ದಾರಿ. ಅದಕ್ಕಾಗಿಯೇ ಸರ್ಕಾರ ಪ್ರತೀ ಲೀಟರ್ ನೀರಿಗೆ 10 ಪೈಸೆಯಂತೆ ಶುದ್ಧ ಕುಡಿಯುವ ನೀರು ಒದಗಿಸುತ್ತಿದೆ. ಆದರೆ, ಇದೀಗ ನೀರಿನ ದರವನ್ನು ಪ್ರತಿ ಲೀಟರ್ ಗೆ 25 ಪೈಸೆಗೆ ಹೆಚ್ಚಿಸಲು ಮುಂದಾಗಿರುವ ಕ್ರಮ ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. 
ಈ ರೀತಿ ಕುಡಿಯುವ ನೀರಿನ ದರವನ್ನು ಹೆಚ್ಚಿಸುವುದು ಕಾಂಗ್ರಸ್‌ ಪಕ್ಷದ ಸಿದ್ಧಾಂತಕ್ಕೆ ವಿರುದ್ಧವಾದದ್ದು. ಇದನ್ನು ಕೂಡಲೇ ಪರಿಶೀಲಿಸಿ ಕುಡಿಯುವ ನೀರಿದ ದರ ಏರಿಕೆ ಕ್ರಮವನ್ನು ಹಿಂತೆಗೆದುಕೊಳ್ಳಬೇಕೆಂದು ಅವರು ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ಅವರಿಗೆ ಪತ್ರದ ಮೂಲಕ ಆಗ್ರಹಿಸಿದ್ದಾರೆ.
ತಮ್ಮ ಟ್ವಿಟರ್‌ನಲ್ಲೂ ಸರ್ಕಾರಕ್ಕೆ ಸಲ್ಲಿಸಿರುವ ಪತ್ರದ ಪ್ರತಿಯ ಜತೆಗೆ ಪೋಸ್ಟ್‌ ಮಾಡಿದ್ದಾರೆ. ಈ ಹಿಂದೆ ಪಾಟೀಲ್‌ ಅವರು ಜಿಂದಾಲ್ ವಿಚಾರವಾಗಿ ಸರ್ಕಾರದ ವಿರುದ್ಧ ಪತ್ರ ಬರೆದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com