ಬೆಂಗಳೂರು: ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿಯ ಪ್ರಧಾನ್ ಮಂತ್ರಿ ಶ್ರಮ ಯೋಗಿ ಮಾನ್-ಧನ್ ಯೋಜನೆಗೆ ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕಮ ಅನುಷ್ಠಾನ ಸಚಿವ ಡಿ. ವಿ. ಸದಾನಂದಗೌಡ ಇಂದಿಲ್ಲಿ ಚಾಲನೆ ನೀಡಿದರು.
ಈ ಯೋಜನೆಯಡಿ ಯಾವುದೇ ಕೆಲಸ ಇಲ್ಲದ ಕಾರ್ಮಿಕರಿಗೂ 60 ವರ್ಷ ಪೂರ್ಣಗೊಳಿಸಿದ ನಂತರ ಕನಿಷ್ಠ ಪಿಂಚಣಿ ಸೌಲಭ್ಯದ ಖಾತ್ರಿ ಒದಗಿಸಲಾಗುತ್ತಿದೆ. ಇಎಸ್ ಐ ಅಥವಾ ಪಿಎಫ್ ಸೌಲಭ್ಯ ಇಲ್ಲದೆ ಪ್ರತಿ ತಿಂಗಳು 15 ಸಾವಿರಕ್ಕಿಂತಲೂ ಕಡಿಮೆ ಆದಾಯ ಗಳಿಸುತ್ತಿರುವವರು ಇದರ ಪ್ರಯೋಜನ ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಈ ಯೋಜನೆಗಾಗಿ ನೋಂದಾಯಿಸಲು ಬಯಸುವ ಜನರು ವಯಸ್ಸಿಗನುಗುಣವಾಗಿ ಪ್ರತಿ ತಿಂಗಳು 55 ರಿಂದ 200 ರೂ. ಪಾವತಿಸಬೇಕಾಗುತ್ತದೆ. 18 ವರ್ಷದವರು ಪ್ರತಿ ತಿಂಗಳು 55 ರೂ ಹಾಗೂ 40 ವರ್ಷದವರು ಪ್ರತಿ ತಿಂಗಳು 200 ರೂ. ಪಾವತಿಸಬೇಕಾಗುತ್ತದೆ. ಇದಕ್ಕೆ ಸಮನಾದ ಹಣವನ್ನು ಕೇಂದ್ರ ಸರ್ಕಾರ ಯೋಜನೆಯಡಿ ಪ್ರತಿತಿಂಗಳು ನೀಡುತ್ತದೆ ಎಂದು ಹೇಳಿದರು.
ಅಸಂಘಟಿತ ವಲಯದ ಕಾರ್ಮಿಕರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿರುವುದಾಗಿ ಸದಾನಂದಗೌಡ ತಿಳಿಸಿದರು. ಇದೇ ಕಾರ್ಯಕ್ರಮದ ವೇಳೆ 10 ಫಲಾನುಭವಿಗಳಿಗೆ ಯೋಜನೆಯ ಕಾರ್ಡ್ ವಿತರಿಸಲಾಯಿತು.
Advertisement