ಬೆಂಗಳೂರು: ಅತ್ತಿಬೆಲೆಯಲ್ಲಿನ ನಿರ್ಜನ ಪ್ರದೇಶವೊಂದರಲ್ಲಿ 35 ವರ್ಷದ ಯುವಕನೋರ್ವನ ಅಪರಿಚತ ಶವ ಕಳೆದ ರಾತ್ರಿ ಪತ್ತೆಯಾಗಿದೆ. ಆತ ಕೆಲಸಕ್ಕಾಗಿ ತಮಿಳುನಾಡಿನಿಂದ ಬೆಂಗಳೂರಿಗೆ ಬಂದಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಮೃತಪಟ್ಟ ಯುವಕ ಈ ಹಿಂದೆ ಚಾಲಕನಾಗಿ ಕೆಲಸ ಮಾಡುತ್ತಿದ್ದ ಬಗ್ಗೆ ಸ್ಥಳೀಯ ನಿವಾಸಿಗಳು ಹೇಳಿದ್ದಾರೆ. ದುಷ್ಕರ್ಮಿಗಳು ಕಲ್ಲಿನಿಂದ ತಲೆ ಜಜ್ಜಿದ್ದಾರೆ. ನಂತರ ಮೃತದೇಹವನ್ನು ನಂಜುಂಡಪ್ಪ ಲೇಔಟ್ ನಲ್ಲಿ ಎಸೆಯಲಾಗಿದೆ.
ರಕ್ತದ ಮಡುವಿನಲ್ಲಿ ಬಿದಿದ್ದ ಮೃತದೇಹವನ್ನು ಇಂದು ಬೆಳಗ್ಗೆ ನೋಡಿದ ದೇವಾಲಯದ ಆರ್ಚಕರೊಬ್ಬರು ಅತ್ತಿಬೆಲೆ ಪೊಲೀಸರಿಗೆ ದೂರು ನೀಡಿದ್ದಾರೆ. ಹಳೆ ದ್ವೇಷದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿರಬಹುದೆಂಬ ಶಂಕೆ ಇದೆ ಎಂದು ಪೊಲೀಸರು ಹೇಳಿದರು.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಬಗ್ಗೆ ತಮಿಳುನಾಡು ಪೊಲೀಸರಿಗೆ ತಿಳಿಸಲಾಗಿದೆ. ಕೊಲೆ ನಡೆದ ಸುತ್ತಮುತ್ತ ಸಿಸಿಟಿವಿ ಕ್ಯಾಮರಾಗಳು ಕಂಡುಬಂದಿಲ್ಲ, ವಿಚಾರಣೆ ಮುಂದುವರೆದಿದೆ ಎಂದು ಅವರು ತಿಳಿಸಿದ್ದಾರೆ.
Advertisement