ಜಿಂದಾಲ್ ಸ್ಟೀಲ್ ಕಂಪನಿಗೆ 3667 ಎಕರೆ ಭೂಮಿ ಕ್ರಯಕ್ಕೆ ನೀಡಲು ಸಚಿವ ಸಂಪುಟ ಒಪ್ಪಿಗೆ

ಒಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ಕುರೇಕುಪ್ಪ ಜಿಂದಾಲ್ ಎಸ್‍ಡಬ್ಲ್ಯೂ ಸ್ಟೀಲ್ ಲಿಮಿಟೆಡ್ ಸಂಸ್ಥೆಗೆ 2000.58 ಎಕರೆ ಹಾಗೂ ಯರಬನಹಳ್ಳಿ ಗ್ರಾಮದ...
ವಿಧಾನಸೌಧ
ವಿಧಾನಸೌಧ
ಬೆಂಗಳೂರು: ಒಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ಕುರೇಕುಪ್ಪ ಜಿಂದಾಲ್ ಎಸ್‍ಡಬ್ಲ್ಯೂ ಸ್ಟೀಲ್  ಲಿಮಿಟೆಡ್ ಸಂಸ್ಥೆಗೆ 2000.58 ಎಕರೆ ಹಾಗೂ ಯರಬನಹಳ್ಳಿ ಗ್ರಾಮದ 1666.73 ಎಕರೆ ಸೇರಿ 3667 ಎಕರೆ ಜಮೀನನ್ನು ಗುತ್ತಿಗೆಯಿಂದ ಕ್ರಯಕ್ಕೆ ನೀಡಲು ಸಚಿವ ಸಂಪುಟ ಅನುಮೋದನೆ ನೀಡಿದೆ.
ಈ ಹಿಂದೆ ಜಮೀನನ್ನು 10 ವರ್ಷಗಳ ಅವಧಿಗೆ ಲೀಸ್ ಗೆ ನೀಡಲಾಗಿತ್ತು. ಕರಾರು ಒಪ್ಪಂದಂತೆ ಜಮೀನನ್ನು ಈಗ ಕ್ರಯಕ್ಕೆ ನೀಡಲು ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ಸಚಿವ ಸಂಪುಟ ಸಭೆಯ ಬಳಿಕ ವಿಧಾನ ಸೌಧದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏಷ್ಯಾದಲ್ಲಿ ಅತ್ಯಂತ ದೊಡ್ಡ ಸ್ಟೀಲ್ ಘಟಕವನ್ನು ಜಿಂದಾಲ್ ಸಂಸ್ಥೆ ಬಳ್ಳಾರಿಯ ಸಂಡೂರಿನಲ್ಲಿ ನಡೆಸುತ್ತಿದೆ. ಈ ಸಂಸ್ಥೆಗೆ ಕಾನೂನು ಪ್ರಕಾರ 10 ವರ್ಷಗಳ ನಂತರ ಗುತ್ತಿಗೆಯನ್ನು ಕ್ರಯವಾಗಿ ಮಾಡಿಕೊಡುವ ಒಡಂಬಡಿಕೆಯನ್ನು ಹಿಂದಿನ ಸರ್ಕಾರ ಮಾಡಿಕೊಂಡಿತ್ತು. ಅದೂ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರದ 2006-07 ಅವಧಿಯಲ್ಲಿ ಎಂಬುದು ಗಮನಾರ್ಹ ಸಂಗತಿ. 
ಪ್ರತಿ ಎಕರೆಗೆ 90 ಸಾವಿರೂ ದರವನ್ನು ಅಂದಿನ ಬಿಜೆಪಿ ಸರ್ಕಾರ ನಿಗದಿ ಮಾಡಿತ್ತು. ಅದರಂತೆ ಸರ್ಕಾರಕ್ಕೆ 18 ಕೋಟಿ ರೂ ಹಣವನ್ನು ಜಿಂದಾಲ್ ಸಂಸ್ಥೆ ಪಾವತಿಸಿದೆ. ಇದರಲ್ಲಿ ಅಕ್ರಮ ನಡೆದಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಆರೋಪಿಸಿದರೆ ಅವರ ಸರ್ಕಾರದ ಅವಧಿಯಲ್ಲೇ ಇದು ನಡೆದಿರಬೇಕು ಎಂದು ಕೃಷ್ಣ ಬೈರೇಗೌಡ ತಿರುಗೇಟು ನೀಡಿದರು. 
1998ನೇ ಸಾಲಿನಲ್ಲಿ ಕರ್ನಾಟಕ ಲೋಕಸೇವಾ ಆಯೋಗದಿಂದ ನೇಮಕಗೊಂಡ ಕೆಎಎಸ್ ಅಧಿಕಾರಿಗಳ ಪರಿಷ್ಕೃತ  ಆಯ್ಕೆ ಪಟ್ಟಿಯಿಂದ ಹಲವು ಅಧಿಕಾರಿಗಳಿಗೆ ಸೇವಾಭದ್ರತೆ ಸಿಗದೇ ಇರುವ ಕಾರಣದಿಂದ ಅವರಿಗೆ  ಸೇವಾಭದ್ರತೆ ಒದಗಿಸಲು ಸರ್ಕಾರ 'ಕರ್ನಾಟಕ ಸಿವಿಲ್ ಸೇವೆಗಳ ನೇಮಕಾತಿ ವಿಧೇಯಕವನ್ನು ಜಾರಿಗೆ ತರಲು Karnataka  Civil Services (Protection of Service of Persons appionted in pursuance  to final selection list Pulished by Selection authority) Ordinance  2019” ಅನ್ನು ಜಾರಿಗೆ ತರಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಉಚ್ಛ ನ್ಯಾಯಾಲಯದ ಆದೇಶದನ್ವಯ ಕ್ರಮಕೈಗೊಂಡರೆ 28 ಅಧಿಕಾರಿಗಳನ್ನು ಹುದ್ದೆಯಿಂದ ತೆಗೆದುಹಾಕಬೇಕಾಗುತ್ತದೆ. ಅಲ್ಲದೆ 115 ಅಧಿಕಾರಿಗಳನ್ನು ಸೇವಾ ಸ್ಥಳ ಬದಲಾವಣೆ, ವರ್ಗಾವಣೆಗೆ ಒಳಗಾಗಬೇಕಾಗುತ್ತದೆ. ಇವರಿಗೆ ಸೇವಾಭದ್ರತೆ ಒದಗಿಸಲು ಈ ವಿಧೇಯಕವನ್ನು ತರಲು ಉದ್ದೇಶಿಸಿದೆ ಎಂದು ಅವರು ತಿಳಿಸಿದರು. 
ಬರ ಪೀಡಿತ ಜಿಲ್ಲೆಗಳಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಮೋಡ ಬಿತ್ತನೆಗೆ ತೀರ್ಮಾನಿಸಲಾಗಿದ್ದು, 2019 ಮತ್ತು 2020 ರಲ್ಲಿ ಮೋಡಬಿತ್ತನೆ ಕಾರ್ಯಾಚರಣೆ ಕೈಗೊಳ್ಳಲು 2 ವಿಮಾನ ಹಾಗೂ 3 ರೇಡಾರ್ ಗಳನ್ನು ಅಳವಡಿಸಿಕೊಳ್ಳಲು 93 ಕೋಟಿ. ರೂಗಳನ್ನು ವೆಚ್ಚ ಮಾಡಲು ಸಚಿವ ಸಂಪುಟ ಸಭೆ  ಅನುಮೋದನೆ ನೀಡಿದೆ ಎಂದರು.
ಈ ಸಂಬಂಧ ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡು  ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಕೇಂದ್ರ ಸರ್ಕಾರ ಕಡತಕ್ಕೆ ಅನುಮೋದನೆ ನೀಡಲು ಕನಿಷ್ಟ 45 ದಿನಗಳ ಕಾಲಾವಕಾಶ ಅಗತ್ಯವಿದೆ, ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಟೆಂಡರ್ ಕರೆಯಲಾಗಿದೆ. 2017ರಲ್ಲಿ ಮೋಡ ಬಿತ್ತನೆಯಿಂದಾಗಿ ರಾಜ್ಯದಲ್ಲಿ ಶೇ 27 ರಷ್ಟು ಮಳೆ ಪ್ರಮಾಣ ಹೆಚ್ಚಳವಾಗಿದೆ ಎಂದು ತಜ್ಞರು ವರದಿ ನೀಡಿದ್ದಾರೆ ಎಂದು ಮೋಡ ಬಿತ್ತನೆಯನ್ನು ಸಮರ್ಥಿಸಿಕೊಂಡರು.
ಸಚಿವ ಸಂಪುಟದಲ್ಲಿ ಕೈಗೊಂಡ ಇತರೆ ತೀರ್ಮಾನಗಳು
• ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಖಾಲಿ ಇರುವ 358  ಗ್ರಾಮ  ಪಂಚಾಯತ್ ಕಾರ್ಯದರ್ಶಿ, ಗ್ರೇಡ್ -II ಹುದ್ದೆಗಳನ್ನು ತುಂಬಲು ಹಾಗೂ 95 ದ್ವಿತೀಯ  ದರ್ಜೆ ಸಹಾಯಕರ ಹುದ್ದೆಗಳನ್ನು ತುಂಬಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
• ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ 1000 ಹಾಸಿಗೆ ಸಾಮರ್ಥ್ಯದ ಹೆಚ್ಚುವರಿ  ವಾರ್ಡ್ ನಿರ್ಮಾಣಕ್ಕಾಗಿ 59 ಕೋಟಿ ರೂ.ಗಳ  ಕಾಮಗಾರಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಿದೆ.
• ಹಾಸನ  ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಚಾಕೇನಹಳ್ಳಿ ಕೆರೆಗೆ ಹೇಮಾವತಿಯಿಂದ 140  ಎಂ.ಸಿ.ಎಫ್.ಟಿ ನೀರನ್ನು ಎತ್ತಿ ಕುಡಿಯುವ ನೀರಿಗಾಗಿ ಏತ ನೀರಾವರಿ ನಾಲೆ ನಿರ್ಮಾಣ  ಕಾಮಗಾರಿಗೆ 54 ಕೋಟಿ ರೂ.ಗಳನ್ನು ಒದಗಿಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.
• ವಿಜಯಪುರ ನಗರದಲ್ಲಿ ಬಿಎಲ್ ಡಿಇ ಸಂಸ್ಥೆಯ ವಿವಿಎಸ್ ಆಯುರ್ವೇದ ಮಹಾವಿದ್ಯಾಲಯಕ್ಕೆ ಗುತ್ತಿಗೆ ನೀಡಿರುವ 12,584 ಚದರ ಯಾರ್ಡ್ ಜಮೀನನ್ನು ಸದರಿ ಸಂಸ್ಥೆಗೆ ಖಾಯಂ ಮಂಜೂರು  ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.
• ರಾಮನಗರ ಜಿಲ್ಲೆಯ  ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಕಟ್ಟಡ ಹಾಗೂ ಮೂಲಸೌಕರ್ಯ ಹಾಗೂ ಅಭಿವೃದ್ಧಿ  ಕಾಮಗಾರಿಗಾಗಿ 61.24 ಕೋಟಿ ರೂ.ಗಳನ್ನು ಮಂಜೂರು ಮಾಡಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
• ರಾಯಚೂರು ವಿಶ್ವವಿದ್ಯಾನಿಲಯದ ಸ್ಥಾಪನೆಗಾಗಿ 6.99 ಕೋಟಿ ರೂ.ಗಳನ್ನು ಒದಗಿಸಲು ಅನುಮೋದನೆ ನೀಡಲಾಗಿದೆ. ಕಲಬುರಗಿ ಹಾಗೂ ರಾಯಚೂರು ಎರಡು ವಿವಿಗಳನ್ನು ಪ್ರತ್ಯೇಕಿಸಲಾಗಿತ್ತು. ಈ ಹಿನ್ನಲೆಯಲ್ಲಿ ನೂತನ ವಿವಿ ಕಾಮಗಾರಿ ಹಾಗೂ ಕಾರ್ಯಾರಂಭಕ್ಕೆ  ಅನುಮೋದನೆ ನೀಡಲಾಗಿದೆ.
• ಕಾರ್ಕಳ ಪಟ್ಟಣದ ಹಾಲಿ ಒಳಚರಂಡಿ ಅಭಿವೃದ್ಧಿ ಯೋಜನೆಗಾಗಿ 13 ಕೋಟಿ ರೂ.ಗಳನ್ನು ಒದಗಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
• ಜವಹರಲಾಲ್ ನೆಹರೂ ರಾಷ್ಟ್ರೀಯ ನಗರ ನವೀಕರಣ ಅಭಿಯಾನ ಯೋಜನೆಯಡಿ ಮೈಸೂರು ನಗರಕ್ಕೆ  ನಿರಂತರ   ನೀರು ಸರಬರಾಜು ಮಾಡುವ ಯೋಜನೆಗೆ ಕೇಂದ್ರ ಸರ್ಕಾರದ ಅನುದಾನ ಪಾಲು 85.60 ಕೋಟಿ  ರೂ.ಗಳನ್ನು ರಾಜ್ಯ ಸರ್ಕಾರದಿಂದಲೇ ಒದಗಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಈಗಾಗಲೇ ರಾಜ್ಯ ಸರ್ಕಾರ ತನ್ನಪಾಲಿನ 85.60 ಕೋಟಿ ರೂ ಅನುದಾನ ಬಿಡುಗಡೆ ಮಾಡಿದೆ.
• ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿ ಹಾಸ್ಟೆಲ್ ಕಟ್ಟಡ ನಿರ್ಮಾಣ ಮಾಡಲು  22.89 ಕೋಟಿ ರೂ.ಗಳನ್ನು ಒದಗಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
• ಕೃಷ್ಣರಾಜಸಾಗರ ಅಣೆಕಟ್ಟೆಯ ಎಡಭಾಗದ ವಿಶ್ವೇಶ್ವರಯ್ಯ ನಾಲೆಯ ಮುಖ್ಯ ನಾಲೆ ಮತ್ತು ಶಾಖಾ  ನಾಲೆಗಳನ್ನು ಶಿಥಿಲವಾಗಿರುವುದರಿಂದ ಅವುಗಳ  ನವೀಕರಣ ,ಆಧುನಿಕರಣ ಕಾಮಗಾರಿಗಾಗಿ 522.37 ಕೋಟಿ  ರೂ.ಗಳ ಕಾಮಗಾರಿ ಕೈಗೊಳ್ಳಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
• ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ, ತೇರಗಾಂವ, ಕಾವಲವಾಡ ಮತ್ತು 91 ಗ್ರಾಮಗಳಿಗೆ  ಬಹುಗ್ರಾಮ ಯೋಜನೆಯಡಿ ಕುಡಿಯುವ ನೀರಿನ ಯೋಜನೆಯನ್ನು ಕೈಗೊಳ್ಳಲು 119 ಕೋಟಿ ರೂ.ಗಳಿಗೆ  ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
• ಹಾಸನ ಜಿಲ್ಲೆಯ ಹೊಳೆನರಸೀಪುರ  ತಾಲ್ಲೂಕಿನ ಚಾಕೇನಹಳ್ಳಿ ಮತ್ತು 23 ಗ್ರಾಮಗಳ ಹಾಗೂ ಕೋಡಿಹಳ್ಳಿ ಹಾಗೂ ಇತರೆ 13  ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಕಾಮಗಾರಿ ಕೈಗೊಳ್ಳಲು 17.94 ಕೋಟಿ  ರೂ.ಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
• ಹಾಸನದಲ್ಲಿ ನೋ  ಫ್ರಿಲ್ ಗ್ರೀನ್‍ಫೀಲ್ಡ್ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಮೆ|| ರೈಟ್ಸ್ ಸಂಸ್ಥೆಗೆ ತಾಂತ್ರಿಕ ಸಹಾಯ ಮತ್ತು ಮೂರನೇ ವ್ಯಕ್ತಿಯ ಪರಿವೀಕ್ಷಣಾ ಸೇವೆ ಪಡೆಯಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಸಮಗ್ರ ಯೋಜನಾ ವರದಿಯನ್ನು ತಯಾರಿಸಿ ಸರ್ಕಾರಕ್ಕೆ ಸಂಸ್ಥೆಯು ಸಲ್ಲಿಸಲಿದೆ.
• ಮೈಸೂರಿನಲ್ಲಿ ಶ್ರೀ ಜಯದೇವ ಹೃದ್ರೋಗ ವಿಜ್ಞಾನ  ಮತ್ತು ಸಂಶೋಧನಾ ಸಂಸ್ಥೆಯ ಶಾಖೆಯ ಕಟ್ಟಡ ನಿರ್ಮಾಣ ಕಾಮಗಾರಿಗೆ ಹೆಚ್ಚುವರಿಯಾಗಿ  ಉಂಟಾಗಿರುವ ಮಾರ್ಪಾಡು ಕಾಮಗಾರಿಗಳಿಗೆ ಸೇರಿದಂತೆ 168.59 ಕೋಟಿ ರೂ.ಗಳ ಪರಿಷ್ಕೃತ ಮೊತ್ತಕ್ಕೆ ಸಚಿವ ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿದೆ.
• ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ನೋಟಾ (NOTA) ಅಳವಡಿಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿತು.
• ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ವಸತಿ ಶಿಕ್ಷಣ ಸಂಸ್ಥೆಗಳ 15 ಪರಿಶಿಷ್ಟ ಜಾತಿ ಮತ್ತು  ಪಂಗಡದ ವಿವಿಧ ವಸತಿ ಶಾಲೆಗಳ ಕಟ್ಟಡದ ನಿರ್ಮಾಣಕ್ಕೆ 377.15 ಕೋಟಿ ರೂ.ಗಳಿಗೆ ಕಾಮಗಾರಿ  ಕೈಗೊಳ್ಳಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
• ಮದ್ದೂರು ಪಟ್ಟಣಕ್ಕೆ 2ನೇ ಹಂತದ ಒಳಚರಂಡಿ ಕಲ್ಪಿಸಲು 50.15 ಕೋಟಿ ರೂ.ಗಳ ಯೋಜನೆಗೆ ಸಚಿವ ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿದೆ.
• ಹೇಮಾವತಿ ನದಿ ಮೂಲದಿಂದ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿಗೆ ಸಮಗ್ರ ಕುಡಿಯುವ  ನೀರು ಒದಗಿಸುವ ಯೋಜನೆಗಾಗಿ 62.45 ಕೋಟಿ ರೂ.ಗಳ ಕಾಮಗಾರಿಗೆ ಸಚಿವ ಸಂಪುಟ ಸಭೆ  ಆಡಳಿತಾತ್ಮಕ ಅನುಮೋದನೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com