ಬೆಂಗಳೂರು: ರಾಜ್ಯದಲ್ಲಿ ನೆರೆಯಿಂದಾದ ಹಾನಿ ಬಗ್ಗೆ ಸತ್ಯಶೋಧನೆ ನಡೆಸಬೇಕು, ಸತ್ಯ ಶೋಧನೆಗೆ ಜಂಟಿಸದನ ಸಮಿತಿ ರಚನೆ ಮಾಡಬೇಕು ಎಂದು ಮಾಜಿ ಸಂಸದ ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಹೇಳಿಕೆ "ಕುಣಿಯಲಾರದವಳು ನೆಲ ಡೊಂಕು ಅಂದಳಂತೆ" ಎಂಬ ಗಾದೆ ಮಾತಿನಂತಿದೆ. ಪ್ರತಿಪಕ್ಷವಾಗಿ ಕಾಂಗ್ರೆಸ್ ನೆರೆಪೀಡಿತ ಎಲ್ಲಾ ಕ್ಷೇತ್ರಗಳಿಗೆ ಭೇಟಿ ವರದಿ ಮಾಡಿದೆ. ಆದರೆ ರಾಜ್ಯ ಸರ್ಕಾರ ವರದಿ ಸತ್ಯಕ್ಕೆ ದೂರವಾಗಿದೆ ಎಂದರು.
ರಾಜ್ಯ ಸರ್ಕಾರ ಮೊದಲು, 38 ಸಾವಿರ ಕೋಟಿ ಎಂದು ಹೇಳಿತ್ತು, ಕೇಂದ್ರ ಸರ್ಕಾರ ಮುಖ್ಯಮಂತ್ರಿ ಯಡಿಯೂರಪ್ಪ ಕಳಿಸಿದ್ದ ನೆರೆನಷ್ಟ ವರದಿಯನ್ನು ಹಿಂದೆ ಕಳಿಸಿದಾಗ ಮತ್ತೆ 35 ಸಾವಿರ ಕೋಟಿ ಹಾನಿ ವರದಿ ಕಳುಹಿಸಿದ್ದಾರೆ. ಕೇಂದ್ರದ ಅಧ್ಯಯನ ತಂಡ ಇದುವರೆಗೂ ಕೇಂದ್ರಕ್ಕೆ ವರದಿಯನ್ನೇ ನೀಡಿಲ್ಲ. ಹೀಗಾಗಿ ನೆರೆ ನಷ್ಟ ಬಗ್ಗೆ ಸರ್ಕಾರ ಸತ್ಯ ಶೋಧನೆ ನಡೆಸಬೇಕು. ಒಂದುವೇಳೆ ಸರ್ಕಾರ ಜನರ ನೋವಿಗೆ ಸ್ಪಂದಿಸದಿದ್ದರೆ ಹೋರಾಟ ಮಾಡುವುದಾಗಿ ವಿ.ಎಸ್. ಉಗ್ರಪ್ಪ ಎಚ್ಚರಿಸಿದರು.
Advertisement