ವೃದ್ಧ ದಂಪತಿ ಕೊಲೆ ಮಾಡಿ ಮನೆ ದರೋಡೆ, ಬೆಚ್ಚಿಬಿದ್ದ ಬೆಂಗಳೂರು

ವೃದ್ದ ದಂಪತಿಯನ್ನು ಬರ್ಬರವಾಗಿ ಕೊಲೆ ಮಾಡಿ, ಮನೆ ದರೋಡೆ ಮಾಡಿರುವ ಘಟನೆ ಬುಧವಾರ ರಾತ್ರಿ ಬೆಂಗಳೂರಿನ ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ವೃದ್ದ ದಂಪತಿ
ವೃದ್ದ ದಂಪತಿ
Updated on

ಬೆಂಗಳೂರು: ವೃದ್ದ ದಂಪತಿಯನ್ನು ಬರ್ಬರವಾಗಿ ಕೊಲೆ ಮಾಡಿ, ಮನೆ ದರೋಡೆ ಮಾಡಿರುವ ಘಟನೆ ಬುಧವಾರ ರಾತ್ರಿ ಬೆಂಗಳೂರಿನ ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕೊಲೆಯಾದ ವೃದ್ಧ ದಂಪತಿಯನ್ನು ಗರುಡಾಚಾರ್ ಪಾಳ್ಯದ ಆರ್‍ಎಚ್‍ಬಿ ಕಾಲೋನಿಯ ನಿವಾಸಿ ಚಂದ್ರೇಗೌಡ(63), ಅವರ ಪತ್ನಿ ಲಕ್ಷ್ಮಮ್ಮ(55) ಎಂದು ಗುರುತಿಸಲಾಗಿದೆ.

ವೃದ್ದ ದಂಪತಿ ಕೊಲೆಗೆ ಸದ್ಯಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಆದರೆ ಹಣ, ಆಭರಣಕ್ಕಾಗಿ ದರೋಡೆಕೋರರು ಈ ಕೃತ್ಯ ಎಸಗಿರುವ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಲಕ್ಷ್ಮಮ್ಮ ಮತ್ತು ಚಂದ್ರೇಗೌಡ ದಂಪತಿ ಮೂಲತಃ ಮಂಡ್ಯ ಜಿಲ್ಲೆ ಕೆಆರ್ ಪೇಟೆ ತಾಲೂಕಿನವರಾಗಿದ್ದು, ಮಕ್ಕಳಿಲ್ಲದ ಈ ದಂಪತಿ ಒಂದು ಹೆಣ್ಣು ಮಗುವನ್ನ ದತ್ತು ಪಡೆದಿದ್ದರು. ಆಕೆಗೂ ಮದುವೆ ಮಾಡಿದ್ದಾರೆ. ಗರುಡಾಚಾರ್ ಪಾಳ್ಯದಲ್ಲಿ 17 ವರ್ಷಗಳ ಹಿಂದೆ ಮನೆ ಖರೀದಿಸಿ ವಾಸವಿದ್ದರು.

ಐದಾರು ಮನೆಗಳನ್ನು ಬಾಡಿಗೆಗೆ ನೀಡಿ ಒಂದು ಮನೆಯಲ್ಲಿ ಈ ವೃದ್ದ ದಂಪತಿ ವಾಸವಿದ್ದರು. ದುಷ್ಕರ್ಮಿಗಳು ನಿನ್ನೆ ರಾತ್ರಿ ಇವರ ಮನೆಗೆ ನುಗ್ಗಿ ಹಾಲ್‍ನಲ್ಲಿ ಚಂದ್ರೇಗೌಡ ಅವರನ್ನು ಹಾಗೂ ಬೆಡ್‍ರೂಮ್‍ನಲ್ಲಿ ಲಕ್ಷ್ಮಮ್ಮ ಅವರನ್ನು ಭೀಕರವಾಗಿ ಕೊಲೆ ಮಾಡಿ ಮನೆಯಲ್ಲಿದ್ದ ಬೀರುಗಳ ಬಾಗಿಲು ತೆಗೆದು ಅಲ್ಲಿದ್ದ ಬಟ್ಟೆಗಳನ್ನು ಚೆಲ್ಲಾಡಿ ಕೊನೆಗೆ ಮುಂಬಾಗಿಲ ಚಿಲಕ ಹಾಕಿಕೊಂಡು ಪರಾಗಿಯಾಗಿದ್ದಾರೆ.

ಇಂದು ಬೆಳಗ್ಗೆ ಸ್ಥಳೀಯ ನಿವಾಸಿ ಶಿವರಾಜ್ ಎಂಬುವರು ಇವರ ಮನೆ ಬಳಿ ಬಂದಾಗ ಈ ಜೋಡಿ ಕೊಲೆ ಬೆಳಕಿಗೆ ಬಂದಿದೆ.

ಈ ಬಗ್ಗೆ ಮಹದೇವಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹಂತಕರ ಪತ್ತೆಗಾಗಿ ಮೂರು ತಂಡಗಳನ್ನು ರಚಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com