ಅಮಾನತು ಪರಿಶೀಲಿಸಿ: ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಆಗ್ರಹ

ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ತಮ್ಮ ಆಪ್ತರನ್ನು ಅಮಾನತುಗೊಳಿಸಿರುವ ಕೆಪಿಸಿಸಿ ಕ್ರಮಕ್ಕೆ ಬೇಸರ ವ್ಯಕ್ತಪಡಿಸಿರುವ ಕೋಲಾರ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ, ಆದೇಶವನ್ನು ಪುನರ್ ಪರಿಶೀಲಿಸುವಂತೆ ಪಕ್ಷದ ಅಧ್ಯಕ್ಷ ದಿನೇಶ್ ಗುಂಡೂರಾವ್ ಗೆ ಮನವಿ ಮಾಡಿದ್ದಾರೆ.
ಕೆ.ಎಚ್.ಮುನಿಯಪ್ಪ
ಕೆ.ಎಚ್.ಮುನಿಯಪ್ಪ
Updated on

ಬೆಂಗಳೂರು: ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ತಮ್ಮ ಆಪ್ತರನ್ನು ಅಮಾನತುಗೊಳಿಸಿರುವ ಕೆಪಿಸಿಸಿ ಕ್ರಮಕ್ಕೆ ಬೇಸರ ವ್ಯಕ್ತಪಡಿಸಿರುವ ಕೋಲಾರ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ, ಆದೇಶವನ್ನು ಪುನರ್ ಪರಿಶೀಲಿಸುವಂತೆ ಪಕ್ಷದ ಅಧ್ಯಕ್ಷ ದಿನೇಶ್ ಗುಂಡೂರಾವ್ ಗೆ ಮನವಿ ಮಾಡಿದ್ದಾರೆ.

ನಗರದ ನಿವಾಸದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಜರುಗಿಸಿ ಎಂದು ಹೇಳಲಾಗಿತ್ತು‌. ಮಾಜಿ ಉಪಾಧ್ಯಕ್ಷ  ಖಲೀಲ್ ಎನ್ನುವವರು ಮಾತ್ರ ಅಧ್ಯಕ್ಷರು ಹಾಗೂ ರಾಜ್ಯ ಉಸ್ತುವಾರಿ ಬದಲಾವಣೆಯ ಬಗ್ಗೆ ವಿಷಯ ಪ್ರಸ್ತಾಪ‌ ಮಾಡಿದ್ದರು. ಉಳಿದೆಲ್ಲರೂ ಪಕ್ಷದ ಶಿಸ್ತಿನ ಸಿಪಾಯಿಗಳು. ಆದರೂ ಅವರೆಲ್ಲರನ್ನು ಅಮಾನತು ಮಾಡಲಾಗಿದೆ. ಪಕ್ಷವೇ ಎಲ್ಲದಕ್ಕಿಂತ ದೊಡ್ಡದು ಎಂಬುದು ತಮಗೂ ಗೊತ್ತಿದೆ. ಹೀಗಾಗಿ ಪಕ್ಷದ ವಿರುದ್ಧ ಮಾತನಾಡಿದವರ ವಿರುದ್ಧ ಮಾತ್ರ ಕ್ರಮ ಕೈಗೊಳ್ಳಬೇಕು ಎಂದು ದಿನೇಶ್ ಗುಂಡೂರಾವ್ ಅವರಿಗೆ ಮನವಿ ಮಾಡಲಾಗಿದೆ. ನೊಟೀಸ್ ನೀಡದೇ ಏಕಾಏಕಿ ಅಮಾನತು ಮಾಡಿರುವುದು ಸರಿಯಲ್ಲ. ಹೀಗಾಗಿ ಅಮಾನತು ಆದೇಶವನ್ನು ಪುನರ್ ಪರಿಶೀಲಿಸಬೇಕು ಎಂದು ಆಗ್ರಹಿಸಿದರು.

ಪಕ್ಷದಲ್ಲಿ ಹಿರಿಯರ ಕಡೆಗಣನೆ ವಿಚಾರಕ್ಕೆ ಸಂಬಂಧಿಸಿದಂತೆ ಎಐಸಿಸಿ ನಾಯಕಿ ಸೋನಿಯಾ ಗಾಂಧಿ, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಯಾವ ರೀತಿಯ ಸೂಚನೆ ನೀಡಿದ್ದಾರೆಂಬುದು ತಮಗೆ ಗೊತ್ತಿಲ್ಲ. ಉಪಚುನಾವಣೆಯಲ್ಲಿ ಎಲ್ಲರ ಜೊತೆಗೆ ಸೇರಿ ಕೆಲಸ ಮಾಡುವುದು ಸಿದ್ದರಾಮಯ್ಯಗೆ ಬಿಟ್ಟಿದ್ದು. ಸೋನಿಯಾ ಗಾಂಧಿಯವರ ಸಲಹೆಗೆ ಬೆಲೆ ಕೊಟ್ಟು ಸಿದ್ದರಾಮಯ್ಯಗೆ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಬೆಂಬಲಿಸುವುದಾಗಿ ಮುನಿಯಪ್ಪ ಸ್ಪಷ್ಟಪಡಿಸಿದರು.

ಚುನಾವಣೆಯಲ್ಲಿ ಇವಿಎಂ ಬಳಸುವುದು ಬೇಡ‌. ಬ್ಯಾಲೇಟ್ ಪೇಪರ್ ಬಳಕೆಗೆ ಆದೇಶಿಸಬೇಕೆಂದು ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಗುಲಾಂ ನಬಿ ಅಜಾದ್ ಸೇರಿದಂತೆ ಇತರೆ 17 ಪ್ರಾದೇಶಿಕ ಒಟ್ಟಾಗಿ ರಾಷ್ಟ್ರಪತಿಗಳಿಗೆ ಮನವಿ ಮಾಡಿವೆ. ಎಲ್ಲರೂ ಒಟ್ಟಾಗಿ ಇವಿಎಂ ವಿರುದ್ಧ ಹೋರಾಟ ಮಾಡಿದ್ದೇವೆ. ಪ್ರಪಂಚದ ದೊಡ್ಡ ದೊಡ್ಟ ರಾಷ್ಟ್ರಗಳು ಬ್ಯಾಲೆಟ್ ಅನ್ನು ಬಳಸುತ್ತಿವೆ. ಆದರೆ ನಮ್ಮ ದೇಶದಲ್ಲಿ ಇವಿಎಂ ಬಳಸಲಾಗುತ್ತಿದೆ‌. ಕೇಂದ್ರ ಸರ್ಕಾರದ  ನಡೆ ಸಂಶಯಾಸ್ಪದವಾಗಿದೆ. ಪ್ರಜಾಪ್ರಭುತ್ವ ದಲ್ಲಿ ವಿರೋಧ ಪಕ್ಷಗಳಿಗೆ ಗೌರವ ಕೊಡಬೇಕು. ಇವಿಎಂ ದುರುಪಯೋಗ ಬಗ್ಗೆ ಜನರಲ್ಲಿಯೂ ಅನುಮಾನವಿದೆ‌. ಆದರೂ ಚುನಾವಣಾ ಆಯೋಗ ಇವಿಎಂ ಬದಲಾಯಿಸುತ್ತಿಲ್ಲ. ಇವಿಎಂನಿಂದ ಕೇದ್ರ ಸರ್ಕಾರ ದುರುಪಯೋಗಪಡಿಸಿಕೊಳ್ಳುತ್ತಿದೆ. ಹೀಗಾಗಿ ಕೇಂದ್ರದ ನಾಯಕರು ಬ್ಯಾಲೆಟ್ ಪೇಪರ್ ಬಳಕೆಗೆ ಅವಕಾಶ ಕೊಡುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ವಿ.ಡಿ. ಸಾವರ್ಕರ್ ಗೆ ಭಾರತ ರತ್ನ ನೀಡುವ ವಿಚಾರವನ್ನು ರಾಜಕೀಯವಾಗಿ ಬಳಸಿಕೊಳ್ಳುವುದು ಒಳ್ಳೆಯದಲ್ಲ .ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತ ರತ್ನ ನೀಡಬೇಕು. ಲಕ್ಷಾಂತರ ಜನರಿಗೆ ಶಿಕ್ಷಣ ,ಅನ್ನ ದಾಸೋಹ ಮಾಡಿ ಸಮಾಜ ಸೇವೆ ಮಾಡಿದ್ದಾರೆ‌. ಭಾರತ ರತ್ನಕ್ಕೆ ಶಿವಕುಮಾರ್ ಸ್ವಾಮೀಜಿ ಅರ್ಹ. ಈ ಬಗ್ಗೆ ಯಡಿಯೂರಪ್ಪ ಕೇಂದ್ರ ಸರ್ಕಾರದ ಮನವೊಲಿಸಬೇಕು‌. ಸಾವರ್ಕರ್ ಗೆ ಭಾರತ ರತ್ನ ಕೊಡುವಂತಹ ಕೆಟ್ಟ ಕೆಲಸ ಬೇರೆ ಇಲ್ಲ .ಇದು ಮಹಾತ್ಮಾ ಗಾಂಧಿ ಅವರಿಗೆ ದ್ರೋಹ ಮಾಡಿದಂತೆ ಎಂದರು‌.

ಕೇಂದ್ರ ಮಾಜಿ ಗೃಹಸಚಿವ  ಚಿದಂಬರಂ ಅವರನ್ನು ಬಂಧಿಸಬೇಕೆಂಬುದು ಅಮಿತ್ ಶಾ ಗುರಿ ಆಗಿತ್ತು. ರಾಜ್ಯದಲ್ಲಿ ಡಿ.ಕೆ. ಶಿವಕುಮಾರ್ ಬಲಿಷ್ಠವಾಗಿ ಪಕ್ಷವನ್ನು ಕಟ್ಟುವ ಕೆಲಸ ಮಾಡುತ್ತಿದ್ದರು.ಡೈನಾಮಿಕ್ ನಾಯಕ ಬೆಳೆಯುತ್ತಿದ್ದಾರೆ ಎಂದು ಅವರನ್ನು ಬಂಧಿಸಿದ್ದಾರೆ.

ಡಾ.ಜಿ.ಪರಮೇಶ್ವರ್ ಸಂಪೂರ್ಣವಾಗಿ ರಾಜಕೀಯದಲ್ಲಿದ್ದವರು. ಸಿದ್ದಾರ್ಥ ಶಿಕ್ಷಣ ಸಂಸ್ಥೆಯನ್ನು ಪರಮೇಶ್ವರ್ ತಂದೆ 50 ವರ್ಷದಿಂದ ಕಟ್ಟಿ ಬೆಳಸಿದ್ದಾರೆ. ಈ ಸಂಸ್ಥೆ‌ಯನ್ನು ಪರಮೇಶ್ವರ್ ಅವರ ಸಹೋದರ ನೋಡಿಕೊಳ್ಳುತ್ತಿದ್ದರು. ಅವರು ತೀರಿಹೋದ ಮೇಲೆ ಪರಮೇಶ್ವರ್ ಅದನ್ನು ನೋಡಿಕೊಳ್ಳುತ್ತಿದ್ದಾರೆ. ಹೀಗಾಗಿ ಸಿದ್ದಾರ್ಥ್ ಶಿಕ್ಷಣ ಸಂಸ್ಥೆ ಮೇಲೆ‌ ಐಟಿ ದಾಳಿ ನಡೆಸಿ ರಾಜಕೀಯಕ್ಕೆ ಟ್ಯಾಗ್ ಆನ್ ಮಾಡಿದ್ದಾರೆ. ಈ ದಾಳಿಗಳೆಲ್ಲವು ರಾಜಕೀಯ ಪ್ರೇರಿತ ದಾಳಿಗಳಾಗಿವೆ. ಇದನ್ನು ಕೂಡಲೇ ನಿಲ್ಲಿಸದಿದ್ದರೆ ಜನರು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರ ನಡೆಸಿದೆ. ಆದರೆ ಬಿಜೆಪಿಯವರ ರೀತಿಯಲ್ಲಿ ದ್ವೇಷದ ರಾಜಕೀಯ ಮಾಡಲಿಲ್ಲ ಎಂದು ಕೆ.ಹೆಚ್.ಮುನಿಯಪ್ಪ ಹೇಳಿದರು
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com