ಹಾಸನ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕೆರೆಗೆ ಬಿದ್ದ ಪರಿಣಾಮ ವೃದ್ದ ಮಹಿಳೆ ಸಾವನ್ನಪ್ಪಿದ್ದು ತಾಯಿ, ಮಗ ಅದೃಷ್ಟವಶಾತ್ ಪಾರಾಗಿರುವ ಘಟನೆ ಹಾಸನದಲ್ಲಿ ನಡೆದಿದೆ.
ಹಾಸನದ ಬೇಲೂರು ಸಮೀಪದ ವಿಷ್ಣು ಸಮುದ್ರ ಕೆರೆಯಲ್ಲಿ ಕಾರು ಅಪಘಾತಕ್ಕೀಡಾಗಿ ಬಸುಬ್ಬಿ (55) ಎನ್ನುವವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಒಂದೇ ಕುಟುಂಬಕ್ಕೆ ಸೇರಿದ ಮೂವರು ಅರೇಹಳ್ಳಿಯಿಂದ ಹುಬ್ಬಳ್ಳಿಗೆ ಆಲ್ಟೋ ಕಾರ್ ನಲ್ಲಿ ತೆರಳುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ವಿಭಜಕಕ್ಕೆ ಗುದ್ದಿ ಕೆರೆಗೆ ಬಿದ್ದಿದೆ.
ಘಟನೆಯಲ್ಲಿ ಇನ್ನೋರ್ವ ಮಹಿಳೆ ಝರೀನಾ (ತಾಯಿ) ಹಾಗೂ ಮಗ ಇಂತಿಯಾಜ್ ಅದೃಷ್ಟವಶಾತ್ ಪಾರಾಗಿದ್ದಾರೆ. ಕಾರು ಕೆರೆಗೆ ಬಿದ್ದದ್ದು ನೋಡಿದ್ದ ಸ್ಥಳೀಯರು ತಕ್ಷಣ ಕಾರ್ಯಪ್ರವೃತ್ತರಾಗಿ ತಾಯಿ-ಮಗನನ್ನು ರಕ್ಷಿಸುವಲ್ಲಿ ಸಪಲರಾಗಿದ್ದಾರೆ.
ಗಾಯಾಳುಗಳಿಗೆ ಬೇಲೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬೇಲೂರು ಪೋಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಕಾರನ್ನು ಕೆರೆಯಿಂದ ತೆಗೆದಿದ್ದು ತನಿಖೆ ಕೈಗೊಂಡಿದ್ದಾರೆ.