ಸತತ ಮಳೆಯಿಂದಾಗಿ ಬ್ರಹ್ಮಗಿರಿ ಬೆಟ್ಟದಲ್ಲಿ ಬಿರುಕು, ತಪ್ಪಲಿನ ಗ್ರಾಮಸ್ಥರಲ್ಲಿ ತೀವ್ರ ಆತಂಕ
ಕೊಡಗು: ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಸತತ ಮಳೆ ಭಾರಿ ಅವಾಂತರ ಸೃಷ್ಟಿ ಮಾಡಿದ್ದು, ಪರಿಣಾಮ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದಲ್ಲಿ ಬೃಹತ್ ಬಿರುಕು ಕಾಣಿಸಿಕೊಂಡಿದೆ.
ಈ ಹಿಂದೆ ಕೇರಳದಲ್ಲಿನ ಬೆಟ್ಟಗುಡ್ಡಗಳು ಮಳೆಯಿಂದಾಗಿ ಕುಸಿದು ಭಾರಿ ಅವಾಂತರ ಸೃಷ್ಟಿ ಮಾಡಿದ್ದವು. ಇದೀಗ ಇಂತಹುದೇ ಬೃಹತ್ ಭೂ ಕುಸಿತ ಭೀತಿ ಕರ್ನಾಟಕವನ್ನೂ ಕಾಡುತ್ತಿದ್ದು, ಕೊಡವರ ಕುಲ ದೈವ ಕಾವೇರಿಯ ತವರು ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದಲ್ಲಿ ಬೃಹತ್ ಬಿರುಕು ಕಾಣಿಸಿಕೊಂಡಿದೆ. ಇಲ್ಲಿ ಕಳೆದ ಕೆಲ ದಿನಗಳಿಂದ ಮಳೆ ತಗ್ಗಿದ್ದು, ಮಳೆ ನಿಂತು ತಿಳಿ ಬಿಸಿಲಿನ ವಾತಾವರಣವಿದ್ದರೂ ವಿವಿಧ ಪ್ರದೇಶಗಳಲ್ಲಿ ಭೂಮಿ ಬಾಯಿ ತೆರೆದು ಆತಂಕ ಸೃಷ್ಟಿಸಿದೆ.
ಪ್ರಮುಖವಾಗಿ ಭಾಗಮಂಡಲದ ಕೋರಂಗಾಲ ಹಾಗೂ ವಿರಾಜಪೇಟೆಯ ತೋರ ಗ್ರಾಮದಲ್ಲಿ ಗುಡ್ಡ ಕುಸಿದು ಸಾವು ನೋವುಗಳು ಸಂಭವಿಸಿದ ಬೆನ್ನಲ್ಲೇ ವಿರಾಜಪೇಟೆಯ ಮಲೆತಿರುಕೆ ಬೆಟ್ಟ, ನೆಹರೂ ನಗರ ಹಾಗೂ ಭಾಗಮಂಡಲದ ಬ್ರಹ್ಮಗಿರಿ ಬೆಟ್ಟದಲ್ಲಿ ಕೆಲವು ದಿನಗಳ ಹಿಂದೆ ಬಿರುಕು ಕಾಣಿಸಿಕೊಂಡು ಸ್ಥಳೀಯರಲ್ಲಿ ಆಂತಕ ಸೃಷ್ಟಿ ಮಾಡಿದೆ. ಪವಿತ್ರ ಕ್ಷೇತ್ರ ತಲಕಾವೇರಿಯ ಜಲಮೂಲದ ನೆಲೆಯಾಗಿರುವ ಬ್ರಹ್ಮಗಿರಿ ಬೆಟ್ಟದಲ್ಲೂ ಬೃಹತ್ ಬಿರುಕು ಕಾಣಿಸಿಕೊಂಡಿದ್ದು, ಬೆಟ್ಟದ ತುತ್ತತುದಿಯಿಂದ ಬೆಟ್ಟದ ಬುಡದವರೆಗೂ ಬಿರುಕು ವ್ಯಾಪಿಸಿದೆ. ಹೀಗಾಗಿ ಬೆಟ್ಟಕ್ಕೆ ಭಾರತೀಯ ಸವೇಕ್ಷಣಾ ಇಲಾಖೆಯ ಇಬ್ಬರು ವಿಜ್ಞಾನಿಗಳು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.
ಈ ಬಾರಿಯ ಮಳೆಯ ಆರ್ಭಟಕ್ಕೆ ಬ್ರಹ್ಮಗಿರಿ ಬೆಟ್ಟದ ಬಹುತೇಕ ಕಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಸವೇಕ್ಷಣಾ ಇಲಾಖೆಯ ವಿಜ್ಞಾನಿಗಳಾದ ಸುನಂದನ್ ಬಾಸು ಹಾಗೂ ಕಪಿಲ್ ಸಿಂಗ್ ಖುದ್ದು ಭೇಟಿ ನೀಡಿದ್ದು, ಅಧ್ಯಯನ ವರದಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.
Advertisement