ಮೈಸೂರು: ಕಳೆದ ಹಲವು ದಿನಗಳಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಕಾಫಿ ಡೇ ಸಂಸ್ಥಾಪಕ ವಿಜಿ ಸಿದ್ದಾರ್ಥ್ ಅವರ ತಂದೆ ಗಂಗಯ್ಯ ಹೆಗ್ಡೆ(96) ಅವರು ಭಾನುವಾರ ನಿಧನರಾಗಿದ್ದಾರೆ.
ಇಂದು ಮಧ್ಯಾಹ್ನ 3 ಗಂಟೆಗೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಗಂಗಯ್ಯ ಹೆಗ್ಡೆ ಕೊನೆಯುಸಿರೆಳೆದಿದ್ದಾರೆ. ಅವರ ಪಾರ್ಥೀವ ಶರೀರದ ಅಂತ್ಯಸಂಸ್ಕಾರ ಚಿಕ್ಕಮಗಳೂರಿನಲ್ಲಿ ನಡೆಯಲಿದೆ.
ಇತ್ತೀಚೆಗೆ ಆತ್ಮಹತ್ಯೆಗೆ ಶರಣಾದ ಅವರ ಪುತ್ರ, ಉದ್ಯಮಿ ಸಿದ್ದಾರ್ಥ್ ಸಮಾದಿ ಪಕ್ಕದಲ್ಲೇ ಗಂಗಯ್ಯ ಅವರ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
ಜುಲೈ 29ರಂದು ಗಂಗಯ್ಯ ಅವರ ಪುತ್ರ, ಕಾಫಿ ಡೇ ಸಂಸ್ಥಾಪಕ, ಬಹುಕೋಟಿ ಉದ್ಯಮಿ ಸಿದ್ದಾರ್ಥ್ ಉಳ್ಳಾಲ ಸಮೀಪದ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೂ ಮುನ್ನ ಆಸ್ಪತ್ರೆಯಲ್ಲಿ ಕೋಮಾ ಸ್ಥಿತಿಯಲ್ಲಿದ್ದ ತನ್ನ ತಂದೆಯನ್ನು ಭೇಟಿಯಾಗಿದ್ದರು. ಆದರೆ, ಪ್ರಜಾಹೀನ ಸ್ಥಿತಿಯಲ್ಲಿದ್ದ ತಂದೆಗೆ ಮಾತ್ರ ಕೊನೆ ಕ್ಷಣದವರೆಗೆ ಮಗನ ಆತ್ಮಹತ್ಯೆ ವಿಚಾರ ತಿಳಿದಿರಲಿಲ್ಲ.
Advertisement