ವಿಶ್ವಸಂತ ವಿಶ್ವೇಶ ತೀರ್ಥ ಸ್ವಾಮೀಜಿ 

ವಿಶ್ವೇಶ ತೀರ್ಥ ಶ್ರೀಪಾದಂಗಳವರು. ಈ ಹೆಸರು ಕೇಳಿದೊಡನೇ, ಹಲವಾರು ಆಯಾಮದ, ವ್ಯಕ್ತಿತ್ವ ಕಣ್ಣಮುಂದೆ ಸರಿದು ಹೋಗುತ್ತೆ. ಅವರು ಕರ್ನಾಟಕ ಕಂಡ ಸಂತ ಶ್ರೇಷ್ಠರಲ್ಲಿ ಒಬ್ಬರು. ಹಲವು ಸ್ಥಾಪಿತ ಸೂತ್ರಗಳನ್ನು ಮೀರಿ ಕಲ್ಮಶವಿಲ್ಲದ ನಗುವಿನೊಂದಿಗೆ ಎಲ್ಲರನ್ನೂ...
ವಿಶ್ವೇಶ ತೀರ್ಥ ಸ್ವಾಮೀಜಿ
ವಿಶ್ವೇಶ ತೀರ್ಥ ಸ್ವಾಮೀಜಿ

ವಿಶ್ವೇಶ ತೀರ್ಥ ಶ್ರೀಪಾದಂಗಳವರು. ಈ ಹೆಸರು ಕೇಳಿದೊಡನೇ, ಹಲವಾರು ಆಯಾಮದ, ವ್ಯಕ್ತಿತ್ವ ಕಣ್ಣಮುಂದೆ ಸರಿದು ಹೋಗುತ್ತೆ. ಅವರು ಕರ್ನಾಟಕ ಕಂಡ ಸಂತ ಶ್ರೇಷ್ಠರಲ್ಲಿ ಒಬ್ಬರು. ಹಲವು ಸ್ಥಾಪಿತ ಸೂತ್ರಗಳನ್ನು ಮೀರಿ ಕಲ್ಮಶವಿಲ್ಲದ ನಗುವಿನೊಂದಿಗೆ ಎಲ್ಲರನ್ನೂ ಜೊತೆಗೆಯಾಗಿ ಕೊಂಡೊಯ್ಯಬಲ್ಲ ಧಾರ್ಮಿಕ ನಾಯಕರಾಗಿದ್ದವರು. ಧರ್ಮ ರಕ್ಷಣೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟು, 

ಮಾದರಿಯಾದ ಯತಿಗಳುರು ವಾದಿರಾಜರ ನಂತರ ಉಡುಪಿ ಮಠದಲ್ಲಿ 5 ನೆಯ ಬಾರಿ ಪರ್ಯಾಯ ಅಲಂಕರಿಸಿದ ಖ್ಯಾತಿ ವಿಶ್ವೇಶ ತೀರ್ಥ ಸ್ವಾಮಿಗಳದ್ದು. ಸುಬ್ರಹ್ಮಣ್ಯ ಸಮೀಪದ ರಾಮಕುಂಜದ ಮೀಯಾರು ನಿವಾಸಿಗಳಾಗಿದ್ದ ಎಂ. ನಾರಾಯಣಾಚಾರ್ಯ ಹಾಗೂ ಕಮಲಮ್ಮ ದಂಪತಿಗಳ ಎರಡನೇ ಪುತ್ರರಾಗಿ 1931 ರ ಎಪ್ರಿಲ್ 27 ರಂದು ಜನಿಸಿದ ಶ್ರೀಗಳ ಪೂರ್ವಾಶ್ರಮದ ಹೆಸರು ವೆಂಕಟರಮಣ.

ರಾಮಕುಂಜೇಶ್ವರ ಎಂಬ ಗ್ರಾಮದ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವೆಂಕಟರಮಣರಿಗೆ ಏಳನೆಯ ವಯಸ್ಸಿನಲ್ಲಿ ಬ್ರಹ್ಮೋಪದೇಶವಾಯಿತು. ಆಟವಾಡುವ ವಯಸ್ಸು. ತಂದೆ – ತಾಯಿ ಮಗನನ್ನು ಉಡುಪಿಗೆ ಕರೆ ತಂದರು. ಆಗ ಪೇಜಾವರ ಮಠದ ಪರ್ಯಾಯವೇ ನಡೆದಿತ್ತು. ವೆಂಕಟರಮಣ ಮಠದ ಸ್ವಾಮೀಜಿ ಕೃಷ್ಣ ಪೂಜೆ ಮಾಡುವುದನ್ನು ಆಸಕ್ತಿಯಿಂದ ಗಮನಿಸಿದ. ಏನೋ ಒಂದು ಅಂತರಂಗದ ಸೆಳೆತ...

ತಂದೆ–ತಾಯಿ ವೆಂಕಟರಮಣನನ್ನು ಪೇಜಾವರದ ಅಂದಿನ ಸ್ವಾಮಿಗಳ ಭೇಟಿಗೆ ಕರೆದುಕೊಂಡು ಹೋದರು. ವೆಂಕಟರಮಣ ಭಕ್ತಿಯಿಂದ ಸ್ವಾಮಿಗಳಿಗೆ ನಮಸ್ಕರಿಸಿದ. ಪುಟ್ಟ ಹುಡುಗನ ಮುಗ್ಧ ಮುಖದಲ್ಲಿ ಭಕ್ತಿ ಭಾವ ತುಂಬಿತ್ತು, ಚುರುಕುತನಕ್ಕೂ ಕೊರತೆಯೇನು ಇರಲಿಲ್ಲ.... ಇವೆಲ್ಲಾ ಸದ್ಗುಣಗಳನ್ನು ಗಮನಿಸಿದ ಸ್ವಾಮಿಗಳಿಗೆ ಏನನ್ನಿಸಿತೋ! ಈ ವಟುವನ್ನು ನೋಡಿ ’ನೀನು ನನ್ನಂತೆ ಸ್ವಾಮಿಯಾಗುತ್ತೀಯಾ?’ ಎಂದು ಕೇಳಿದ್ದರು. 

ವೆಂಕಟರಮಣನಿಂದ ಬಂದ ಉತ್ತರ ಒಂದೇ “ಹ್ಞೂ, ಆಗುತ್ತೇನೆ...”

ಪರ್ಯಾಯದ ಅವಧಿ ಮುಕ್ತಾಯಗೊಂಡ ಬೆನ್ನಲ್ಲೇ ವ್ಯಾಸತೀರ್ಥರ ತಪೋಭೂಮಿಯಾದ ಹಂಪೆಯನ್ನು ತಲುಪಿದ ಆಗಿನ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಮಾನ್ಯ ತೀರ್ಥರ ನಿರ್ಧಾರ ಗಟ್ಟಿಗೊಂಡಿತು. ವಿಳಂಬ ಮಾಡದೆ ವೆಂಕಟರಮಣನನ್ನು ಕರೆಸಿಕೊಂಡರು. ಹಿರಿಯರ ಜತೆ ಹಂಪೆಗೆ ತೆರಳಿದ ಆಗಷ್ಟೇ ಉಪನೀತನಾಗಿದ್ದ ವಟು ವೆಂಕಟರಮಣರಿಗೆ 1938ರ ಡಿಸೆಂಬರ್ 3 ರಂದು ಹಂಪಿಯ ಚಕ್ರತೀರ್ಥದಲ್ಲಿ ಸನ್ಯಾಸ ದೀಕ್ಷೆ ನೀಡಿ ವಿಶ್ವೇಶ ತೀರ್ಥರೆಂದು ನಾಮಾಂಕಿತವನ್ನಿತ್ತರು. ವಿಶ್ವೇಶ ತೀರ್ಥರಿಗೆ ಆಗಿನ್ನೂ 8 ವರ್ಷ!. ಅಲ್ಲಿಂದ ಮುಂದೆ  ನಡೆದಿದ್ದೆಲ್ಲವೂ ಇತಿಹಾಸವೇ...

ವಿದ್ಯಾಮಾನ್ಯರು ವಿದ್ವತ್ ಸಭೆಯೊಂದನ್ನು ನಡೆಸುತ್ತಿದ್ದರು. ಬಾಲ ಯತಿಯಾಗಿದ್ದ ಪೇಜಾವರ ಶ್ರೀಗಳನ್ನು ಒಮ್ಮೆ ಸಭೆಯ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ನಾಡಿನೆಲ್ಲೆಡೆಯಿಂದ ಆಗಮಿಸಿದ್ದ ಹಿರಿಯ ವಿದ್ವಾಂಸರ ಹಾಜರಿದ್ದ ಸಭೆಯಲ್ಲಿ, ಬಾಲಯತಿಗಳಾಗಿದ್ದ ವಿಶ್ವೇಶ ತೀರ್ಥರು, ಶಾರ್ದೂಲ ವಿಕ್ರೀಡಿತದಲ್ಲಿ ರಚಿಸಿದ ಪದ್ಯ ಇಡೀ ಸಭೆಯನ್ನು ಬೆರಗುಗೊಳಿಸಿತು. ನಂತರ ಗುರು ವಿದ್ಯಾಮಾನ್ಯರಲ್ಲಿ ಅಧ್ಯಯನ ಆರಂಭಿಸಿದ ಶ್ರೀಗಳು, 8 ವರ್ಷಗಳ ಕಾಲ ಸತತವಾಗಿ ಧಾರ್ಮಿಕ ಗ್ರಂಥಗಳ ಅಧ್ಯಯನ ನಡೆಸಿದರು. 1951 ರಲ್ಲಿ ಆಗಮತ್ರಯ ವಿದ್ವಾಂಸರ ಸಮ್ಮೇಳನದಲ್ಲಿ 20 ವರ್ಷದ ತರುಣ ಯತಿಗಳಾಗಿದ್ದ ವಿಶ್ವೇಶ ತೀರ್ಥರ ಪಾಂಡಿತ್ಯ ಕಂಡು ತಲೆದೂಗಿದ್ದ ಜಯಚಾಮರಾಜೇಂದ್ರ ಒಡೆಯರು ಶ್ರೀಗಳನ್ನು ಅರಮನೆಗೆ ಕರೆಸಿ, ಅವರಿಂದ ಪೂಜೆ ಮಾಡಿಸಿದ್ದರು.

ಸಕಲರನ್ನೂ ಆಕರ್ಷಿಸುವ ವಿದ್ವತ್ತು, ಸೌಜನ್ಯ, ದೀನ ದಲಿತರ ಏಳ್ಗೆಗೆ ಕಾಳಜಿಗಳು ಶ್ರೀಗಳ ವ್ಯಕ್ತಿತ್ವಕ್ಕೆ ಮುಕುಟಪ್ರಾಯ. ಮಾನವತೆಯೇ ದೇಹಧರಿಸಿದಂತಿದ್ದ ಪೇಜಾವರ ಶ್ರೀಗಳನ್ನು ಕಂಡು ಆಕರ್ಷಿತರಾಗದವರಾರು? ಅಂತಹ ಯತಿಗಳ ಸಾಧನೆಯ ಹಾದಿಯ ನೋಟ ಇಲ್ಲಿದೆ. 

*1967 ರಲ್ಲಿ ಬಿಹಾರದ ಬರಗಾಲದ ಸಂದರ್ಭದಲ್ಲಿ ನೊಂದ ಜನರ ಸಹಾಯಕ್ಕಾಗಿ ಪಾದಯಾತ್ರೆ ನಡೆಸಿ, ಗಯಾ ಜಿಲ್ಲೆಯ ಹಳ್ಳಿಗಳಲ್ಲಿ ಸಂತ್ರಸ್ತರಿಗೆ ಔಷಧೋಪಚಾರ
*1978ರಲ್ಲಿ ಆಂಧ್ರದ ಹಂಸಲದಿವಿ ಗ್ರಾಮ ಸಮುದ್ರ ಪಾಲಾದಾಗ, ಒಂದು ಗ್ರಾವವನ್ನು ದತ್ತು ಪಡೆದು, 150 ಮನೆಗಳ ನಿರ್ಮಾಣ ಹಾಗೂ 1955ರಲ್ಲಿ ಗೋವಿಂದಪುರ ಗ್ರಾಮ ಭೂಕಂಪಕ್ಕೆ ತುತ್ತಾದಾಗ ಸಂತ್ರಸ್ತರಿಗೆ 60 ಮನೆಗಳ ನಿರ್ಮಾಣ
*1984ರಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಬದರಿಕ್ಷೇತ್ರದಲ್ಲಿ ಅನಂತ ಮಠದ ಸ್ಥಾಪನೆ
*1986ರಲ್ಲಿ ಮಧ್ವಾಚಾರ್ಯರ 750ನೇ ಜಯಂತಿಯನ್ನು ಪಾಜಕದಲ್ಲಿ ವೈಭವವಾಗಿ ನಡೆಸಿ, ನಂತರ ದೇಶದಾದ್ಯಂತ ಭಕ್ತಿರಥ ಯಾತ್ರ
*1990ರಲ್ಲಿ ಮಧ್ವಾಚಾರ್ಯರ ಜನ್ಮಭೂಮಿ ಪಾಜಕದಲ್ಲಿ ವಾಸುದೇವ ಗುರುಕುಲ ಸ್ಥಾಪನೆ
*ತಿರುಪತಿಯಲ್ಲಿ ಉಡುಪಿ ಮಠ, ಹರಿದ್ವಾರದಲ್ಲಿ ಮಧ್ವಮಂದಿರ, ವಿದ್ಯಾಪೀಠದ ಕೃಷ್ಣಮಂದಿರ ಸ್ಥಾಪನೆ
*1966 ನವೆಂಬರ್ 19ರಂದು ಗೋಹತ್ಯಾನಿಷೇಧಕ್ಕಾಗಿ ಎರಡು ದಿನ ಉಪವಾಸ.
*1994ರ ಸೆಪ್ಟಂಬರ್ 26ರಂದು ಆಂಧ್ರದ ರುದ್ರಾರಂ (ಹೈದರಾಬಾದ್) ಕಸಾಯಿ ಖಾನೆಯ ವಿರುದ್ಧ ಪಶುರಕ್ಷಾಯಜ್ಞ ಚಳುವಳಿಗಾಗಿ ಉಪವಾಸ, 12ಕಿ.ಮೀ. ನಡಿಗೆ
*1962ರಲ್ಲಿ ಬೆಂಗಳೂರಿನಲ್ಲಿ ಶ್ರೀಕೃಷ್ಣಸೇವಾಶ್ರಮ ಆಸ್ಪತ್ರೆ. ಈಗ ಇದು ಜಯನಗರದಲ್ಲಿ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಉಡುಪಿಯಲ್ಲಿ ಶ್ರೀಕೃಷ್ಣಸೇವಾಧಾಮ ಅನಾಥ ಮಕ್ಕಳ ಕೇಂದ್ರ. 1968ರ ಜೂನ್ 18ರಂದು ಉಡುಪಿಯಲ್ಲಿ ಶ್ರೀಕೃಷ್ಣಚಿಕಿತ್ಸಾಲಯ 
*ಬೆಂಗಳೂರಿನಲ್ಲಿ ಅರುಣಚೇತನ ಅಂಗವಿಕಲ ಮಕ್ಕಳ ಶಾಲೆ

ಪೇಜಾವರ ಶ್ರೀಗಳ ದಿಟ್ಟ ಹೆಜ್ಜೆಗಳು...
1. 1970ರಲ್ಲಿ ಬೆಂಗಳೂರಿನ ಮಲ್ಲೇಶ್ವರಂ ಈಜುಕೊಳ ಬಡಾವಣೆಯ ಹಿಂದುಳಿದವರ ವಸತಿ ನಿವಾಸಕ್ಕೆ ಭೇಟಿ.
2. ಬಳ್ಳಾರಿ ಜಿಲ್ಲೆಯ ಸಂಗನಕಲ್ಲಿನಲ್ಲಿ ಸವರ್ಣೀಯರಿಂದ ದಲಿತರ ಮೇಲೆ ಧಾಳಿ ಯಾದಾಗ ನಿರಾಶ್ರಿತರಾದವರಿಗೆ ಆಶ್ರಯದಾನ.
3. ತುರ್ತುಪರಿಸ್ಥಿತಿಯಲ್ಲಿ ಪ್ರತಿಭಟನೆ. 
4. 1981 ರಲ್ಲಿ ತಮಿಳುನಾಡಿನ ಮೀನಾಕ್ಷಿಪುರಂನಲ್ಲಿ ದಲಿತರು ಬಲಾತ್ಕಾರವಾಗಿ ಅಮಿಷಕ್ಕೊಳಗಾಗಿ ಮತಾಂತರಗೊಂಡಾಗ ಅಲ್ಲಿಗೆ ಭೇಟಿ ನೀಡಿ ಪರಿಹಾರೋಪಾಯ.
5. ಪಂಜಾಬಿನಲ್ಲಿ ಶಾಂತಿಯಾತ್ರೆ- ಲೂಯಾನ, ತರನ್ ಶರನ್, ಅಮೃತಸರ ಗಳಲ್ಲಿ ಅನೇಕ ಸಿಖ್ ನಾಯಕರೊಂದಿಗೆ ಮಾತುಕತೆ.
6. 1984 ರಲ್ಲಿ ಶ್ರೀಕೃಷ್ಣಮಠದ ಸಭಾಭವನದಲ್ಲಿ ಈದ್‌ಮಿಲನ್ ಸೌಹಾರ್ದ ಕೂಟ- ಮುಸ್ಲಿಂ ಸಮ್ಮೇಳನ. ಮುಸ್ಲಿಂ ನಾಯಕರಾದ ಆಲಿಯಾನ್ ಮೌಲಾನಾ ಮಹಿದುದ್ದೀನ್ ಖಾನ್ ಮೊದಲಾದವರೊಂದಿಗೆ ಸೌಹಾರ್ದ ಸಮಾಲೋಚನೆ.
7. ಉತ್ತರ ಭಾರತದ ಉಮಾಭಾರತಿಗೆ ಸನ್ಯಾಸ ದೀಕ್ಷೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com