ಬೆಂಗಳೂರು: ಹಲವು ಸುತ್ತಿನ ಸಮಾಲೋಚನೆ ಮೂಲಕ ಮೂಡಿಗೆರೆ ಹ್ಯಾಂಡ್ ಪೋಸ್ಟ್ ನಿಂದ ನೆಲ್ಲಿಯಡಿ ಜಂಕ್ಷನ್ ವರೆಗೂ ಚಿತ್ರದುರ್ಗ- ಮಂಗಳೂರು ರಾಷ್ಟ್ರೀಯ ಹೆದ್ದಾರಿ 173 ಅಂತರ ಕಾರಿಡಾರ್ ವಿಸ್ತೃತ ಯೋಜನಾ ವರದಿಯನ್ನು ಸಿದ್ಧಗೊಳಿಸಲಾಗಿದೆ.
ಸುಮಾರು 2, 500 ಕೋಟಿ ರೂ. ಮೊತ್ತದ ಈ ಯೋಜನೆಯಿಂದ ದೇಶದ ಪ್ರಮುಖ ನಗರಗಳನ್ನು ಸಂಪರ್ಕಕಕ್ಕೆ ಅನುಕೂಲವಾಗಲಿದ್ದು, ಕೇಂದ್ರ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಮುಂದಿನ ತಿಂಗಳು ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
230 ಕಿ. ಮೀ. ದೂರದ ಚಿತ್ರದುರ್ಗ ಕಾರಿಡಾರ್ ಒಟ್ಟಾರೆ 60.13 ಹೆಕ್ಟರ್ ಅರಣ್ಯ ಪ್ರದೇಶದಲ್ಲಿ ಸಾಗಲಿದ್ದು, ಅರಣ್ಯ ತೆರವಿಗಾಗಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಎದುರು ನೋಡುತ್ತಿದೆ. ಪ್ರಸ್ತಾವಿತ ರಸ್ತೆ 22 ಕಿಲೋ ಮೀಟರ್ ಘಾಟ್ ಸೆಕ್ಷನ್ ನಲ್ಲಿ ಸಾಗಲಿದ್ದು, ಕಂದಾಯ ಭೂಮಿ ಹಾಗೂ ಅರಣ್ಯ ಪ್ರದೇಶ ಸ್ವಾಧೀನ ಕಾರ್ಯ ಕೈಗೊಳ್ಳಬೇಕಾಗುತ್ತದೆ ಎಂದು ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರು ಹೇಳಿದ್ದಾರೆ.
ಕೊಪ್ಪಳ ಸೇರಿದಂತೆ ನಾಲ್ಕು ಜಿಲ್ಲೆಗಳಲ್ಲಿ ಸಂರಕ್ಷಿತ ಪ್ರದೇಶ, ಅಭಯಾರಣ್ಯಗಳು, ಮೀಸಲು ಅರಣ್ಯಗಳು ಮತ್ತು ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ವಲಯದಲ್ಲಿ ಪ್ರಸ್ತಾವಿತ ರಸ್ತೆ ಸಾಗಲಿದೆ. ಕುದುರೆಮುಖ, ಭದ್ರಾ, ಮತ್ತು ಜೋಗಿಮಠ ಮೂರು ಸಂರಕ್ಷಿತ ಪ್ರದೇಶಗಳು ಪ್ರಸ್ತಾವಿತ ಕಾರಿಡಾರ್ ಯೋಜನಾ ವ್ಯಾಪ್ತಿಯಲ್ಲಿದ್ದು, ರಾಷ್ಟ್ರೀಯ ವನ್ಯಜೀವಿ ಮಂಡಳಿ ಸ್ಥಾಯಿ ಸಮಿತಿಯಿಂದ ಎನ್ ಓಸಿ ಪಡೆಯಲಾಗುವುದು ಎಂದು ಅವರು ತಿಳಿಸಿದ್ದಾರೆ.
ಈ ರಸ್ತೆಯಲ್ಲಿ ಬರುವ ಪ್ರಮುಖ ಆನೆ ಕಾರಿಡಾರ್ ಬಗ್ಗೆ ಸ್ಥಳೀಯ ನಿವಾಸಿಗಳು ಹಾಗೂ ಅರಣ್ಯ ಇಲಾಖೆ ಜೊತೆ ಚರ್ಚೆ ಅಗತ್ಯವಾಗಿದೆ ಎಂದು ಅವರು ಹೇಳಿದ್ದಾರೆ.
Advertisement