ಬೆಂಗಳೂರು: ಸಿಲಿಕಾನ್ ಸಿಟಿಯನ್ನು ಬೆಚ್ಚಿ ಬೀಳಿಸಿದ್ದ ಡೆಲ್ ಬಿಪಿಒ ಉದ್ಯೋಗಿ ಪಾಯಲ್ ಸುರೇಖಾ ಹತ್ಯೆ ಪ್ರಕರಣದಲ್ಲಿ ಆಕೆಯ ಪತಿಯ ಸ್ನೇಹಿತ ಜೇಮ್ಸ್ ಕುಮಾರ್ ರಾಯ್ ಅಪರಾಧಿ ಎಂದು ಸಿಬಿಐ ವಿಶೇಷ ನ್ಯಾಯಾಲಯ ಘೋಷಣೆ ಮಾಡಿದೆ. ಅಪರಾಧಿಗೆ ಶಿಕ್ಷೆ ಪ್ರಮಾಣವನ್ನು ನಾಳೆ ಪ್ರಕಟಿಸುವುದಾಗಿ ಹೇಳೀದೆ.
2010ರ ಡಿಸೆಂಬರ್ 17ರಂದು ಜೆಪಿ ನಗರದ ಏಳನೇ ಹಂತದಲ್ಲಿನ ಲಕ್ಷ್ಮಿ ಲೇಔಟ್ ನಲ್ಲಿ ಪಾಯಲ್ ಅವರ ಹತ್ಯೆ ಆಗಿತ್ತು. ಹಾಡಹಗಲೇ ನಡೆದ ಈ ಕೃತ್ಯದಿಂದ ಬೆಂಗಳೂರು ನಗರ ಬೆಚ್ಚಿ ಬಿದ್ದಿತ್ತು.
ಘಟನೆ ವಿವರ
ಡೆಲ್ ಬಿಪಿಒ ಕಂಪನಿ ಉದ್ಯೋಗಿಯಾಗಿದ್ದ ಪಾಯಲ್ ಸುರೇಖಾ ಜೆಪಿ ನಗರದಲ್ಲಿನ ತಮ್ಮ ಅಪಾರ್ಟ್ ಮೆಂಟ್ ನಲ್ಲಿ ಭೀಕರವಾಗಿ ಹತ್ಯೆಯಾಗಿದ್ದರು. ಕೈಗಳನ್ನು ಕಟ್ಟಿ ಕುತ್ತಿಗೆ ಸೀಳಿದ್ದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು. ಫಾಯಲ್ ಪತಿ ಅನಂತ್ ನಡೆಸುತ್ತಿದ್ದ ಜಿಮ್ ಪ್ರಮುಖ ಪಾಲುದಾರನಾಗಿದ್ದ ಜೇಮ್ಸ್ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ.
ಕೊಲೆಮಾಡಿ ಒಡಿಶಾಗೆ ಪರಾರಿಯಾಗಿದ್ದ ಜೇಮ್ಸ್ ನನ್ನು ನಗರದ ಪೋಲೀಸರು ಪತ್ತೆ ಮಾಡಿದ್ದರು. ಅಲ್ಲಿನ ಪೋಲೀಸರಿಗೆ ಂಆಹಿತಿ ನೀಡಿದ್ದಲ್ಲದೆ ಆಗ ಒಡಿಶಾದಲ್ಲಿದ್ದ ಆಗಿನ ಇನ್ಸ್ಪೆಕ್ಟರ್ ಉಮೇಶ್ ಜೇಮ್ಸ್ನನ್ನು ಬಂಧಿಸಿದ್ದರು. ಆದರೆ ತನ್ನ ಮೇಲಿನ ಆರೋಪ ಸುಳ್ಳು ಎಂದ ಜೇಮ್ಸ್ ಪ್ರಕರಣವನ್ನು ಸುಪ್ರೀಂ ಕೋರ್ಟ್ ವರೆಗೆ ತೆಗೆದುಕೊಂಡು ಹೋಗಿದ್ದ. ಕಡೆಗೂ ಸುಪ್ರೀಂ ಕೋರ್ಟ್ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿ ಆದೇಶಿಸಿತು.
ಆ ನಂತರ ತನಿಖೆ ನಡೆಸಿದ ಸಿಬಿಐ ಜೇಮ್ಸ್ ವಿರುದ್ಧ ವಿಶೇಷ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಅದರ ಬಳಿಕ ವಾದ ವಿವಾದಗಳು ನಡೆದು ಸಾಕ್ಷಿಗಳೆಲ್ಲಾ ಜೇಮ್ಸ್ ವಿರುದ್ಧವಿದ್ದ ಕಾರಣ ನ್ಯಾಯಾಲಯ ಜೇಮ್ಸ್ ನನ್ನು ಅಪರಾಧಿ ಎಂದು ಘೋಷಿಸಿದೆ.
Advertisement