ಚಾಮರಾಜನಗರ: ಶಿಕ್ಷಣ ಸಚಿವ ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎನ್. ಸುರೇಶ್ ಕುಮಾರ್ ಸೋಮವಾರ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ಗೋಪಿನಾಥಂ ಶಾಲೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಗಡಿಭಾಗದ ಊರಾದ ಗೋಪಿನಾಥಂನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1-4 ತಮಿಳು ಮಾಧ್ಯಮ 5-8 ಕನ್ನಡ ಮಾಧ್ಯಮ ಶಾಲೆಯಿದ್ದು ಶಿಕ್ಷಣ ಇಲಾಖೆ ಸಚಿವರ ವಾಸ್ತವ್ಯಕ್ಕೆ ಭರ್ಜರಿ ತಯಾರಿ ಮಾಡಿಕೊಂಡಿದೆ. ಶಾಲೆಯ ಸುತ್ತಮುತ್ತಲಿನ ಗಿಡಗಂಟಿ ಕತ್ತರಿಸಿ, ಸುಣ್ಣಬಣ್ಣ ಮಾಡಿಸಿ ಶೌಚಾಲಯ ನಿರ್ವಹಣೆ, ಕುಡಿಯುವ ನೀರು ಮತ್ತು ಸ್ನಾನಕ್ಕಾಗಿ ಎರಡು ಪ್ರತ್ಯೇಕ ನೀರಿನ ಟ್ಯಾಂಕ್ಗಳ ವ್ಯವಸ್ಥೆ ಮಾಡಲಾಗಿದೆ
ಎಸ್ . ಸುರೇಶ್ ಕುಮಾರ್ ಶಿಕ್ಷಣ ಸಚಿವರಾದ ಬಳಿಕ ಎರಡನೇಯ ಶಾಲಾ ವಾಸ್ತವ್ಯ ಇದಾಗಿದ್ದು ಕಾಡಂಚಿನ ಗ್ರಾಮಸ್ಥರ ಅಹವಾಲು ಆಲಿಸುವ ಜೊತೆಗೆ ಶಾಲಾ ಮಕ್ಕಳೊಂದಿಗೆ ಸೋಮವಾರ ರಾತ್ರಿ ಸಂವಾದ ನಡೆಸಲಿದ್ದಾರೆ.
ಮಂಗಳವಾರ ಬೆಳಗ್ಗೆ ಗೋಪಿನಾಥಂನಲ್ಲಿನ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಬಳಿಕ ಪುದೂರು, ಪಾಲಾರ್, ವಡಕೆಹಳ್ಳ, ಬಿದರಹಳ್ಳಿ ಸರ್ಕಾರಿ ಶಾಲೆಗೆ ಭೇಟಿ ನೀಡುವರು. ಜೊತೆಗೆ, ಸುಳ್ವಾಡಿ ವಿಷ ಪ್ರಸಾದ ದುರಂತದ ಸಂತ್ರಸ್ತರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸುವರು.
ವರದಿ: ಗೂಳಿಪುರ ನಂದೀಶ ಎ೦
Advertisement