ಫುಟ್ಬಾಲ್ ಚರ್ಚೆ ಮಧ್ಯೆ ಕಬಡ್ಡಿ ಪ್ರಸ್ತಾಪ: ನಗೆಗಡಲಲ್ಲಿ ತೇಲಿದ ಪರಿಷತ್ ಕಲಾಪ

ವಿಧಾನ ಪರಿಷತ್ ಕಲಾಪದಲ್ಲಿ ಇಂದು ಫುಟ್ ಬಾಲ್ ಕ್ರೀಡೆ ಸಂಬಂಧ ನಡೆದ ಗಂಭೀರ ಚರ್ಚೆಯ ನಡುವೆ ಕಬಡ್ಡಿ ನುಸುಳುವ ಮೂಲಕ ಇಡೀ ಸದನವನ್ನು ನಗೆಗಡಲಲ್ಲಿ ತೇಲುವಂತೆ ಮಾಡಿತು.
ಫುಟ್ಬಾಲ್ ಚರ್ಚೆ ಮಧ್ಯೆ ಕಬಡ್ಡಿ ಪ್ರಸ್ತಾಪ: ನಗೆಗಡಲಲ್ಲಿ ತೇಲಿದ ಪರಿಷತ್ ಕಲಾಪ
ಫುಟ್ಬಾಲ್ ಚರ್ಚೆ ಮಧ್ಯೆ ಕಬಡ್ಡಿ ಪ್ರಸ್ತಾಪ: ನಗೆಗಡಲಲ್ಲಿ ತೇಲಿದ ಪರಿಷತ್ ಕಲಾಪ

ಬೆಂಗಳೂರು: ವಿಧಾನ ಪರಿಷತ್ ಕಲಾಪದಲ್ಲಿ ಇಂದು ಫುಟ್ ಬಾಲ್ ಕ್ರೀಡೆ ಸಂಬಂಧ ನಡೆದ ಗಂಭೀರ ಚರ್ಚೆಯ ನಡುವೆ ಕಬಡ್ಡಿ ನುಸುಳುವ ಮೂಲಕ ಇಡೀ ಸದನವನ್ನು ನಗೆಗಡಲಲ್ಲಿ ತೇಲುವಂತೆ ಮಾಡಿತು.

ಕಾಂಗ್ರೆಸ್ ಸದಸ್ಯ ಕೆ. ಗೋವಿಂದರಾಜು ಅವರು ಪಿಫಾ ಅಸೋಸಿಯೇಷನ್ ಸದಸ್ಯತ್ವ ಪಡೆದಿರುವ ಸಂಬಂಧ ಪಕ್ಷಭೇದ ಮರೆತು ಎಲ್ಲ ಸದಸ್ಯರು ಅಭಿನಂದನೆ ಸಲ್ಲಿಸಿದರು. ಕರ್ನಾಟಕ ಒಲಂಪಿಕ್ ಅಸೋಸಿಯೇಶನ್ ಗೆ ಅಧ್ಯಕ್ಷ ಹಾಗೂ ಏಷ್ಯಾ ಮಟ್ಟದಲ್ಲಿ ಅಧ್ಯಕ್ಷರಾಗಿದ್ದಾರೆ. ಇವರಿಗೆ ಸದನದಲ್ಲಿ ಎಲ್ಲಾ ಪಕ್ಷದ ಸದಸ್ಯರು ಅಭಿನಂದನೆ ಸಲ್ಲಿಸಿದರು. 


ಪರಿಷತ್ ಕಲಾಪದಲ್ಲಿ ಕಬಡ್ಡಿ ಪ್ರಸ್ತಾಪ
ಸಾಲುಸಾಲಾಗಿ ಸದಸ್ಯರೆಲ್ಲ ಅಭಿನಂದನೆ ಸಲ್ಲಿಸುತ್ತಾ ಸಂದರ್ಭ ಜೆಡಿಎಸ್ ಹಿರಿಯ ಸದಸ್ಯರಾದ ಬಸವರಾಜ ಹೊರಟ್ಟಿ, ಫುಟ್ಬಾಲ್ ಜೊತೆ ರಾಜ್ಯದಲ್ಲಿ ಕಬಡ್ಡಿ ಕೂಡಾ ಜನಪ್ರಿಯತೆ ಪಡೆಯಬೇಕು. ಇದು ಕೂಡ ಸಾಕಷ್ಟು ಜನಪ್ರಿಯ ಕ್ರೀಡೆ ಎಂದು ವಿಚಾರ ಪ್ರಸ್ತಾಪಿಸಿದರು. ಸದನಕ್ಕೆ ಅದಾಗ ತಾನೇ ಆಗಮಿಸಿದ್ದ ಕಾಂಗ್ರೆಸ್ ಸದಸ್ಯ ಸಿ.ಎಂ. ಇಬ್ರಾಹಿಂ ಎದ್ದು ನಿಂತು ತಮ್ಮ ಎಂದಿನ ಹಾಸ್ಯ ಶೈಲಿಯಲ್ಲಿ ಆಟದ ವಿಚಾರದಲ್ಲಿ ಬಿಜೆಪಿಯವರು ಕಬಡ್ಡಿಯಲ್ಲಿ ಫೇಮಸ್ಸು, 17 ಜನರನ್ನು ಏಳೆದುಕೊಂಡು ಹೋಗಿದ್ದಾರೆ ಎಂದು ವ್ಯಂಗ್ಯವಾಗಿ ಹೇಳಿದರು.ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಆರ್. ಅಶೋಕ್, ನಮ್ಮ ಕಬಡ್ಡಿ ಈಗ ಆರಂಭವಾಗಿದೆ. ನಮ್ಮದು ಪ್ರೋ ಕಬಡ್ಡಿ, ಭಾರಿ ಫಾಸ್ಟು ಎಂದರು.


ಇದಕ್ಕೆ ಮಧ್ಯೆ ಪ್ರವೇಶಿಸಿದ ಐವಾನ್ ಡಿಸೋಜಾ ಕಬಡ್ಡಿ ರಾಜಕಾರಣಿಗಳ ಪ್ರೀತಿಯ ಆಟ ಎಂದರು.ಅಲ್ಲಿಗೆ ಈ ವಿಚಾರವನ್ನು ಮುಗಿಸಿ ಮುಂದೆ ತೆರಳುವ ಸಂದರ್ಭ ಸದನಕ್ಕೆ ಪ್ರವೇಶ ಮಾಡಿದ ಕ್ರೀಡಾ ಸಚಿವ ಕೆ.ಎಸ್. ಈಶ್ವರಪ್ಪ ತಾವು ಕೂಡ ಗೋವಿಂದರಾಜು ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿ ಮಾತು ಆರಂಭಿಸಿದರು. ಗೋವಿಂದರಾಜು ಉತ್ತಮ ಕ್ರೀಡಾಪಟು. ಅವರ ಸಲಹೆ ಪಡೆದು ನಾವು ಕ್ರೀಡಾ ಪ್ರಗತಿಗೆ ಮುಂದುವರಿಯುತ್ತೇವೆ. ಹಿಂದೆ ಇವರ ಸರ್ಕಾರ ಇದ್ದಾಗ ಅವರನ್ನು ಕ್ರೀಡಾ ಸಚಿವರನ್ನಾಗಿ ಮಾಡಿ ಎಂದು ಸಲಹೆ ನೀಡಿದ್ದೆ,  ಯಾಕೆ ಆಗಿಲ್ವೋ ಗೊತ್ತಾಗಿಲ್ಲ ಎಂದರು. ಅದಕ್ಕೆ ಮರಿತಿಬ್ಬೇಗೌಡರು ನೀವು ಆಗಲೇ 17 ಮಂದಿಯನ್ನು ಕರೆದುಕೊಂಡು ಹೋಗಿದ್ದೀರಿ ಇವರನ್ನು 18 ನೇಯವರನ್ನಾಗಿ ಕರೆದುಕೊಂಡು ಹೋಗಿ ಸಚಿವರನ್ನು ಮಾಡಿ ಎಂದು ಸಲಹೆ ಇತ್ತರು. 

ಆಗ ಈಶ್ವರಪ್ಪ ಪ್ರತಿಕ್ರಿಯಿಸಿ, ಅದಕ್ಕೇನು ಅವರೂ ಬರಲಿ, ಅಲ್ಲದೇ ಮುಸ್ಲಿಂ ಕೋಟಾದಲ್ಲಿ ಸಿ.ಎಂ. ಇಬ್ರಾಹಿಂ ಕೂಡ ಬಂದು ಸಚಿವರಾಗಲಿ ಎಂದು ಸಲಹೆ ಇತ್ತರು. ಕೊಂಚ ಗದ್ದಲ ಸದನದಲ್ಲಿ ಆಯಿತು.ತಕ್ಷಣ ಎಚ್ಚರಗೊಂಡ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರು ವಿಷಯವನ್ನು ಬೇರೆಡೆಗೆ ಪರಿವರ್ತಿಸಿದರು. ಪುಟ್ಬಾಲ್ ಹಾಗೂ ಕಬಡ್ಡಿ ವಿಚಾರ ಸದನದಲ್ಲಿ ಮರೆಯಾಗಿ ಕುರಿತ ವಿಚಾರ ಆರಂಭವಾಯಿತು.ಕಬ್ಬು ಬೆಳೆಗಾರರ ಸಮಸ್ಯೆಗೆ ಸ್ಪಂದಿಸಿ ಸದನದ ಆರಂಭದಲ್ಲಿ ವಿಚಾರ ಪ್ರಸ್ತಾಪಿಸಿ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ, ಕಬ್ಬು ಬೆಳೆಗಾರರಿಗೆ ನಷ್ಟವಾಗುತ್ತಿದೆ. ಆ ರೈತರ ಬೆಂಬಲಕ್ಕೆ ಬರಬೇಕು ಎಂದು ಮನವಿ ಮಾಡಿದರು. 

ಅದಕ್ಕೆ ಉತ್ತರಿಸಿದ ಸಚಿವ ಆರ್. ಅಶೋಕ್, ಅನ್ಯ ರಾಜ್ಯದಿಂದ ಇದಕ್ಕೆ ಸೌಲಭ್ಯಗಳ ಹಂಚಿಕೆ ಆಗಬೇಕು ಎಂದಾಗ, ಆದಷ್ಟು ಬೇಗ ಈ ಕಾರ್ಯವಾಗಲಿ. ನೆರೆಯಿಂದ ಸಂಕಷ್ಟಕ್ಕೀಡಾಗಿರುವ ರೈತರಿಗೆ ಇರುವ ಕಬ್ಬನ್ನು ಕಟಾವು ಮಾಡಿ, ಕಾರ್ಖಾನೆಗೆ ಕೊಂಡೊಯ್ಯಲು ಅವಕಾಶ ಮಾಡಿಕೊಡಿ ಎಂದು ಮರಿತಿಬ್ಬೇಗೌಡರು ಎಂದು ಮನವಿ ಮಾಡಿದರು. 

ಇದೇ ಸಂದರ್ಭ ಗೌಡರು ರಾಜ್ಯದಲ್ಲಿ ಗಂಗಾ ಜಲ್ಯಾಣ ಯೋಜನೆಯಡಿ ಕೊರೆಸಲಾದ ಅನೇಕ ಕೊಳವೆಬಾವಿಗಳಿಗೆ ಇದುವರೆಗೂ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದರು. ರಾಜ್ಯ ಒಕ್ಕಲಿಗ ಸಂಘದಲ್ಲಿ ನಡೆದಿರುವ ಅಧಿಕಾರ ದುರುಪಯೋಗ, ಕಾನೂನು ಬಾಹಿರ ಕೆಲಸ ಮತ್ತು ಅವ್ಯವಹಾರಗಳ ಬಗ್ಗೆ ಗೃಹ ಹಾಗೂ ಸಹಕಾರ ಸಚಿವರು ಗಮನ ಸೆಳೆಯಬೇಕೆಂದು ಗಮನ ಸೆಳೆಯುವ ಸೂಚನೆ ಅಡಿ ಪ್ರಸ್ತಾಪಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com