ಕಪಾಳಕ್ಕೆ ಹೊಡೆದ ನಂದನಹಳ್ಳಿ ರವಿ ನನ್ನ ಪುತ್ರನಿದ್ದಂತೆ: ಸಿದ್ದರಾಮಯ್ಯ 

ನಂದನ ಹಳ್ಳಿ ರವಿ ನಾನು ಬೆಳಿಸಿದ ಯುವ ನಾಯಕ, ಆತ ನನ್ನ ಪುತ್ರನಿದ್ದಂತೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಹೇಳಿದ್ದಾರೆ. 
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: ನಂದನ ಹಳ್ಳಿ ರವಿ ನಾನು ಬೆಳಿಸಿದ ಯುವ ನಾಯಕ, ಆತ ನನ್ನ ಪುತ್ರನಿದ್ದಂತೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಹೇಳಿದ್ದಾರೆ. 

ವಿಮಾನ ನಿಲ್ದಾಣದಲ್ಲಿ ನಂದನ ಹಳ್ಳಿ ರವಿ ಅವರ ಕಪಾಳಕ್ಕೆ ಸಿದ್ದರಾಮಯ್ಯ ಅವರು ಹೊಡೆದಿದ್ದರು. ಕಪಾಳಮೋಕ್ಷ ಮಾಡಿದ್ದ ಈ ವಿಡಿಯೋ ಭಾರೀ ಸುದ್ದಿಗೆ ಗ್ರಾಸವಾಗಿತ್ತು. 

ಈ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ನಂದನ ಹಳ್ಳಿ ರವಿ ಅವರು ನೀಡಿರುವ ಹೇಳಿಕೆಯ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ವಿಡಿಯೋ ಕುರಿತು ಸ್ಪಷ್ಟನೆ ನೀಡಿದ್ದಾರೆ. 

ನನಗೆ ಪುತ್ರ ಸಮಾನನಾದ ನಂದನಹಳ್ಳಿ ರವಿ ನಾನು ಬೆಳೆಸಿದ ಯುವನಾಯಕ. ಇಂತಹ ನೂರಾರು ಯುವಕರು ನನ್ನ ಜೊತೆಗೆ ಇರುತ್ತಾರೆ. ಅವರ ಜೊತೆ ಪ್ರೀತಿ-ಕೋಪದ ಸಂಬಂಧ ನನ್ನದು. ಅವರಿಗೆ ಹುಸಿಕೋಪದಿಂದ ಕೆನ್ನೆಗೆ ಹೊಡೆದಿದ್ದೆ. ಅದಕ್ಕೆ ವಿಪರೀತಾರ್ಥ ಕಲ್ಪಿಸುವ ಅಗತ್ಯವಿಲ್ಲ ರವಿಯೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾನೆಂದು ತಿಳಿಸಿದ್ದಾರೆ. 

ನಿನ್ನೆ ಬೆಳಿಗ್ಗೆ ಮೈಸೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಸಿದ್ದರಾಮಯ್ಯ ಅವರು ಮಾತು ಮುಗಿಸಿ ಹೊಗುತ್ತಿದ್ದ ಸಂದರ್ಭದಲ್ಲಿ, ನಂದನಹಳ್ಳಿ ರವಿ ಅವರು ಯಾರಿಗೋ ಕರೆ ಮಾಡಿ ಫೋನ್ ನ್ನು ಸಿದ್ದರಾಮಯ್ಯ ಅವರ ಕೈಗಿಟ್ಟಿದ್ದರು. ಇದರಿಂದ ಕೋಪಗೊಂಡ ಸಿದ್ದರಾಮಯ್ಯ ಅವರು, ರವಿಯವರ ಕೆನ್ನೆಗೆ ಹೊಡೆದಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವುದೂ ಅಲ್ಲದೆ, ಮಾಧ್ಯಮಗಳಲ್ಲಿ ಹಲವು ಚರ್ಚೆಗಳಿಗೆ ಗ್ರಾಸವಾಗಿತ್ತು. ರಾಷ್ಟ್ರೀಯ ಸುದ್ದಿಮಾಧ್ಯಮಗಳಲ್ಲೂ ಈ ವಿಡಿಯೋ ಪ್ರಸಾರಗೊಂಡಿತ್ತು. 

ಪ್ರಕರಣ ಕುರಿತಂತೆ ಖಾಸಗಿ ಮಾಧ್ಯಮದೊಂದಿಗೆ ಮಾತನಾಡಿರುವ ನಂದನಹಳ್ಳಿ ರವಿಯವರು, ಸಿದ್ದರಾಮಯ್ಯ ಅವರು ನನಗೆ ತಂದೆ ಸಮಾನ. ನನ್ನ ಗುರುಗಳು, ಹಿರಿಯರು ಅವರ ಮಾರ್ಗದರ್ಶನದಿಂದ ನಾನು ಉತ್ತಮವಾಗಿ ಜೀವನ ನಡೆಸುತ್ತಿದ್ದೇನೆ. ಅವರ ಆಶೀರ್ವಾದವಿದೆ. ಅವರು ಹೊಡೆದರೂ ನನಗೆ ಬೇಜಾರಾಗುವುದಿಲ್ಲ. ಬೇರೆ ರೀತಿಯಲ್ಲಿ ಅರ್ಥ ಮಾಡಿಕೊಳ್ಳಬಾರದು. ಸಿದ್ದರಾಮಯ್ಯ ಜೊತೆಗೆ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳಿಲ್ಲ. ಅವರು ಸಾಕಿದ ಮಗನಾಗಿದ್ದೇನೆ ಹೊರತು ಮತ್ತಾವುದೇ ಸಮಸ್ಯೆ ಇಲ್ಲ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com