ಮೈಸೂರು: ಮೈಸೂರಿನಲ್ಲಿ ಅ. 8ರಿಂದ ನಡೆಯಲಿರುವ ಐತಿಹಾಸಿಕ ದಸರಾ ಉತ್ಸವದ ಜಂಬೂ ಸವಾರಿಯಲ್ಲಿ ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳನ್ನು ಪ್ರದರ್ಶಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೆರವಣಿಗೆಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ಸಾಧನೆಗಳು, ಮೈಸೂರು ರಾಜಮನೆತನದ ಕೊಡುಗೆಗಳು, ದಿವಂಗತ ಡಾ.ಶಿವಕುಮಾರ ಸ್ವಾಮೀಜಿ ಹಾಗೂ ಸುತ್ತೂರು ಸ್ವಾಮಿಗಳ ಸಾಧನೆಗಳ ಪ್ರಾತ್ಯಕ್ಷಿಕೆಗಳನ್ನು ಪ್ರದರ್ಶಿಸಲಾಗುವುದು ಎಂದು ಮಾಹಿತಿ ನೀಡಿದರು.
ಅ.1ರಂದು ಮೈಸೂರು ದಸರಾ ಕ್ರೀಡಾಕೂಟ ಹಾಗೂ ಯುವ ದಸರಾವನ್ನು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಪಿ.ವಿ.ಸಿಂಧು ಉದ್ಘಾಟಿಸುವ ನಿರೀಕ್ಷೆಯಿದೆ ಎಂದರು. ಇದಕ್ಕೂ ಮುನ್ನ ಸಚಿವರು, ಸಂಪ್ರದಾಯದಂತೆ ಅರಮನೆಯ ಲಾಯದ ಬಳಿ ಮಾವುತರು ಹಾಗೂ ಕವಾಡಿಗ ಕುಟುಂಬ ಸದಸ್ಯರ ಜೊತೆಗೆ ಉಪಹಾರ ಸೇವಿಸಿ, ಅವರಿಗೆ ಸಮವಸ್ತ್ರ, ಛತ್ರಿ, ರೈನ್ ಕೋಟ್ , ನೀರಿನ ಬಾಟಲ್ ಗಳು , ಟಾರ್ಚ್ ಮತ್ತು ಶೂಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಉಪಸ್ಥಿತರಿದ್ದರು.
Advertisement