ಬೆಂಗಳೂರು: ಕೋಲಾರ ಜಿಲ್ಲೆ ಕೆ ಜಿ ಎಫ್ ನ ಕ್ಯಾಸಂಬಳ್ಳಿ ಹೋಬಳಿಯ ಮರಡಘಟ್ಟ ಗ್ರಾಮದ ಕೆರೆಯಲ್ಲಿ ಗಣೇಶ ಮೂರ್ತಿ ವಿಸರ್ಜನೆ ವೇಳೆ ನೀರಲ್ಲಿ ಮುಳುಗಿ ಸಾವನ್ನಪ್ಪಿದ ಆರು ಮಕ್ಕಳ ಕುಟುಂಬದವರಿಗೆ ತಲಾ ಎರಡು ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆದೇಶಿಸಿದ್ದಾರೆ.
ಮಕ್ಕಳು ಗಣಪತಿ ವಿಸರ್ಜನೆ ವೇಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು ಅತ್ಯಂತ ದುರದೃಷ್ಟಕರ ಎಂದಿರುವ ಯಡಿಯೂರಪ್ಪ, ಕೂಡಲೇ ಮಕ್ಕಳ ಕುಟುಂಬದವರಿಗೆ ಪರಿಹಾರ ನೀಡುವಂತೆ ಕೋಲಾರ ಜಿಲ್ಲಾಧಿಕಾರಿಗಳಿಗೆ ಆದೇಶಿಸಿದ್ದಾರೆ.
ಕೋಲಾರ ಜಿಲ್ಲೆ ಕೆ.ಜಿ.ಎಫ್ ನ ಕ್ಯಾಸಂಬಳ್ಳಿ ಹೋಬಳಿಯ ಮರಡಘಟ್ಟ ಗ್ರಾಮದ ಕೆರೆಯಲ್ಲಿ ಮುಳುಗಿ 6 ಮಕ್ಕಳು ಸಾವನ್ನಪ್ಪಿರುವುದು ತೀವ್ರ ನೋವು ತಂದಿದೆ. ಸಾವನ್ನಪ್ಪಿದ ಆರು ಮಕ್ಕಳ ಕುಟುಂಬದವರಿಗೆ ತಲಾ ಎರಡು ಲಕ್ಷ ರೂಪಾಯಿ ಪರಿಹಾರ ನೀಡಲಾಗಿದೆ. ಮಕ್ಕಳನ್ನು ಕಳೆದುಕೊಂಡ ಪೋಷಕರಿಗೆ ಭಗವಂತ ದುಃಖ ಸಹಿಸುವ ಶಕ್ತಿ ಕರುಣಿಸಲಿ ಎಂದು ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.
ಮೃತಪಟ್ಟ ಮಕ್ಕಳನ್ನು ವೈಷ್ಣವಿ, ತೇಜು, ವೀಣಾ, ರೋಹಿತ್, ರಕ್ಷಿತ್ ಹಾಗೂ ಧನುಷ್ ಎಂದು ಗುರುತಿಸಲಾಗಿದ್ದು, ಇವರೆಲ್ಲ 12 ರಿಂದ 14 ವರ್ಷದೊಳಗಿನರಾಗಿದ್ದಾರೆ.
Advertisement