ಗಂಗಾವತಿ: ಮೋದಿಗೂ ಮುನ್ನವೇ ಕ್ಯಾಂಡಲ್ ಮೂಲಕ ಕೊರೋನಾ ಬಗ್ಗೆ ಜಾಗೃತಿ

ದುಷ್ಟಶಕ್ತಿಗಳ ವಿರುದ್ಧ ಹೋರಾಡಬಲ್ಲ ದಿವ್ಯ ಜ್ಯೋತಿಯಾದ ಬೆಳಕಿಗೆ ಇರುವ ಶಕ್ತಿಯನ್ನು ನಮ್ಮ ಪ್ರಾಚೀನರು ಸಾವಿರಾರು ವರ್ಷಗಳ ಹಿಂದೆಯೇ ಕಂಡುಕೊಂಡಿದ್ದರು.
ಕ್ಯಾಂಡಲ್ ಮಾರ್ಚ್
ಕ್ಯಾಂಡಲ್ ಮಾರ್ಚ್
Updated on

ಗಂಗಾವತಿ: ದುಷ್ಟಶಕ್ತಿಗಳ ವಿರುದ್ಧ ಹೋರಾಡಬಲ್ಲ ದಿವ್ಯ ಜ್ಯೋತಿಯಾದ ಬೆಳಕಿಗೆ ಇರುವ ಶಕ್ತಿಯನ್ನು ನಮ್ಮ ಪ್ರಾಚೀನರು ಸಾವಿರಾರು ವರ್ಷಗಳ ಹಿಂದೆಯೇ ಕಂಡುಕೊಂಡಿದ್ದರು. ಅದನ್ನೀಗ ಪ್ರಧಾನಿ ಮೋದಿ ಕೊರೋನಾದಂತ ಭಯಾನಕ ವೈರಸ್ ವಿರುದ್ಧ ಹೋರಾಡಲು ಅಸ್ತ್ರವನ್ನಾಗಿಸಿಕೊಳ್ಳುತ್ತಿದ್ದಾರೆ.

ಏಪ್ರಿಲ್ 5ರ ರಾತ್ರಿ ಒಂಭತ್ತು ಗಂಟೆಗೆ ಎಲ್ಲಾ ವಿದ್ಯುತ್ ಲೈಟ್ಸ್ ಸ್ಥಗಿತಗೊಳಿಸಿ ಕೇವಲ ಕ್ಯಾಂಡಲ್ ಹಚ್ಚೋಣ, ದೀಪಗಳನ್ನು ಬೆಳಗೋಣ, ಈ ಮೂಲಕ ಕೊರೋನಾದ ವಿರುದ್ಧ ಸಂಘಟಿತ ಹೋರಾಟ ಮಾಡೋಣ ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ. 

ಆದರೆ ಇಲ್ಲಿನ ತಾಲ್ಲೂಕು ಪಂಚಾಯಿತಿ ಸಿಬ್ಬಂದಿ ಮಾತ್ರ ಮೋದಿ ಕರೆ ನೀಡುವುದಕ್ಕಿಂತಲೂ ಮೊದಲೆ ಅಂದರೆ ಬುಧವಾರ ರಾತ್ರಿಯೇ ಕಚೇರಿಯ ಆವರಣದಲ್ಲಿ ನೂರಾರು ಕ್ಯಾಂಡಿಲ್ಗಳನ್ನು ಒಟ್ಟಿಗೆ ಉರಿಸುವ ಮೂಲಕ ಕೊರೋನಾದ ವಿರುದ್ಧ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದಾರೆ.

ತಾಲ್ಲೂಕು ಪಂಚಾಯಿತಿಯ ಕ್ರಿಯಾಶೀಲ ಕಾರ್ಯನಿವಾರ್ಹಕ ಅಧಿಕಾರಿ ಡಾ. ಡಿ. ಮೋಹನ್ ನೇತೃತ್ವದಲ್ಲಿ ತಾಲ್ಲೂಕು ಪಂಚಾಯತ್ ಸಿಬ್ಬಂದಿ, ಕಚೇರಿ ಆವರಣದಲ್ಲಿ ಕ್ಯಾಂಡಲ್ ಬೆಳಗಿಸುವ ಮೂಲಕ ಕೊರೋನಾದ ವಿರುದ್ಧದ ಜಾಗೃತಿಗೆ ಮುಂದಾಗಿದೆ. 

ಕೊಪ್ಪಳ ಜಿಲ್ಲೆಯನ್ನು ಕೊರೋನಾ ಮುಕ್ತವಾಗಿಸೋಣ, ಕೊರೋನಾದ ವಿರುದ್ಧ ಹೋರಾಡಲು ಮನೆಯಲ್ಲಿಯೇ ಸುರಕ್ಷಿತವಾಗಿದ್ದು, ಸಂಘಟಿತ ಹೋರಾಟ ಮಾಡೋಣ ಎಂಬ ವಾಕ್ಯಗಳನ್ನು ಕ್ಯಾಂಡಲ್ ಬೆಳಗಿಸುವ ಮೂಲಕ ಜನರ ಗಮನ ಸೆಳೆಯಲಾಗಿದೆ. 

ಇದಕ್ಕೂ ಮೊದಲು ಅಂದರೆ ಜನವರಿ ತಿಂಗಳಲ್ಲಿ ನಡೆದ ಐತಿಹಾಸಿಕ ಆನೆಗೊಂದಿ ಉತ್ಸವದ ಸಂದರ್ಭದಲ್ಲೂ ಜನರಲ್ಲಿ ಉತ್ಸವದ ಬಗ್ಗೆ ಪ್ರೇರೇಪಿಸಲು ತಾಲ್ಲೂಕು ಪಂಚಾಯತಿಯ ಸಿಬ್ಬಂದಿ ಕ್ಯಾಂಡಲ್ ಬೆಳಕಿನ ಮೊರೆ ಹೋಗಿದ್ದನ್ನಿಲ್ಲಿ ಸ್ಮರಿಸಬಹುದು. 

-ಶ್ರೀನಿವಾಸ್ ಎಂ.ಜೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com