

ಮಂಗಳೂರು: ಕೊರೋನಾ ಹೆಸರು ಹೇಳಿದರೆ ಸಾಕು ವಿಶ್ವವೇ ಗಡಗಡ ನಡುಗುತ್ತಿರುವಾಗ ಇದರ ವಿರುದ್ಧ ಹೋರಾಟ ಮಾಡುತ್ತಿರುವಾಗ ಮಂಗಳೂರಿನಲ್ಲಿ 10 ತಿಂಗಳ ಹಸುಗೂಸು ಡೆಡ್ಲಿ ಕೊರೋನಾವನ್ನೇ ಗೆದ್ದು ವೈದ್ಯಲೋಕದ ಅಚ್ಚರಿಗೂ ಕಾರಣವಾಗಿದೆ.
ಹೌದು ಸತ್ಯ...!! ಕೊರೋನಾ ಸೋಂಕು ತಗುಲಿದ್ದ 10 ತಿಂಗಳ ಕಂದಮ್ಮ ಇದೀಗ ಪೂರ್ಣ ಗುಣಮುಖವಾಗಿ ಮನೆಯಂಗಳದಲ್ಲಿ ನಗು ಚೆಲ್ಲಿದೆ. ಗ್ರಾಮದಲ್ಲಿ ಸೂತಕದ ಕಳೆ ತೊಳೆದು ಹಬ್ಬದ ಹೊಸ ಸಂಭ್ರಮಕ್ಕೆ ಹೊಸ ಭಾಷ್ಪ ಬರೆದಿದೆ.
ಮಗುವಿನ ತಾಯಿ ಮತ್ತು ಅಜ್ಜಿಯ ವರದಿಗಳು ಸಹ ಬಂದಿದ್ದು ಅವರೂ ಸಹ ಕೊರೋನಾ ಮುಕ್ತವಾಗಿದ್ದಾರೆ. ದಕ್ಷಿಣ ಕನ್ನಡದಲ್ಲಿ, ಇದುವರೆಗೆ 12 ಕೊರೋನಾ ಪ್ರಕರಣಗಳು ದಾಖಲಾಗಿದ್ದು ಅವರಲ್ಲಿ ಆರು ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಕಳೆದ ಒಂದು ವಾರದಲ್ಲಿ ಹೊಸ ಪ್ರಕರಣಗಳಿಲ್ಲದ ಕಾರಣ ದಕ್ಷಿಣ ಕನ್ನಡದ ಜನರಿಗೆ ಇದು ಸಮಾಧಾನಕರವಾಗಿದೆ.
10 ತಿಂಗಳ ಮಗು ಕೋವಿಡ್ ಸೋಂಕಿನಿಂದ ಕೂಡಿದ್ದು ಇಡೀ ರಾಜ್ಯದಲ್ಲೇ ಒಂದು ವಿಶಿಷ್ಟ ಪ್ರಕರಣವಾಗಿದ್ದು, ಇದು ವೈದ್ಯರಿಗೆ ಸವಾಲಾಗಿತ್ತು. ಮಗುವಿಗೆ ಪ್ರತ್ಯೇಕವಾಗಿ ಚಿಕಿತ್ಸೆ ನೀಡುವುದು ವೈದ್ಯರಿಗೆ ಸವಾಲಿನ ಕೆಲಸವಾಗಿತ್ತು. ವೆನ್ಲಾಕ್ ಆಸ್ಪತ್ರೆ ಗುಣಮಟ್ಟದ ಚಿಕಿತ್ಸೆಯನ್ನು ನೀಡಿತು, ಇದು ಮಗುವಿನ ಯಶಸ್ವಿ ಚೇತರಿಕೆಗೆ ಕಾರಣವಾಯಿತು.
ಇದಲ್ಲದೆ ಕೊರೋನಾವೈರಸ್ ಸೋಂಕಿತ ಮಗುವಿದ್ದ ಗ್ರಾಮದಲ್ಲಿ ಯಾವುದೇ ಗ್ರಾಮಸ್ಥರಿಗೆ ಸೋಂಕು ಹರಡಿಲ್ಲ. . ಮಗುವಿಗೆ ಸೋಂಕಿದೆ ಎಂದು ಗೊತ್ತಾದ ಬಳಿಕ ಇಡೀ ಸಜಿಪಮಡು ಗ್ರಾಮದೊಳಗೆ ಯಾರೊಬ್ಬರೂ ಬರದಂತೆ ಅಥವಾ ಹೊರಹೋಗದಂತೆ ಜಿಲ್ಲಾಡಳಿತ ಅನುಮತಿಸಿರಲಿಲ್ಲ. ಇದಕ್ಕೆ ಗ್ರಾಮಸ್ಥರು ಸಹಕಾರ ಕೊಟ್ಟಿದ್ದರು.
ಉಡುಪಿಯ ಪ್ರಥಮ ಕೊರೋನಾ ಸೋಂಕಿತ ಡಿಸ್ಚಾರ್ಜ್
ಉಡುಪಿ: ಉಡುಪಿ ಜಿಲ್ಲೆಯ ಮೊಟ್ಟ ಮೊದಲ ಕೊರೋನಾವೈರಸ್ ಸೋಂಕಿತ ವ್ಯಕ್ತಿಮಣಿಪಾಲದ ೩೪ರ ಯುವಕ ಸೋಂಕಿನಿಂದ ಸಂಪೂರ್ಣ ಗುಣಮುಖನಾಗಿದ್ದು ಆತನ ಗಂಟಲ ದ್ರವದ ಮಾದರಿ ನೆಗೆಟಿವ್ ಎಂದು ಬಂದ ಹಿನ್ನೆಲೆ ಶನಿವಾರ ರಾತ್ರಿ ನಗರದ ಟಿಎಂಎ ಪೈ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾನೆ.
ಮುಂದಿನ ಹದಿನಾಲ್ಕು ದಿನಗಳ ಕಾಲ ಹೋಂ ಕ್ವಾರಂಟೈನ್ ನಲ್ಲಿರುವಂತೆ ಆತನಿಗೆ ಸೂಚಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ ಚಂದ್ರ ಸೂಡ ಹೇಳಿದ್ದಾರೆ.
Advertisement