ಬೀದಿದೀಪಗಳ ಖರೀದಿಯಲ್ಲಿ ಅವ್ಯವಹಾರ; 3 ಪಿಡಿಒಗಳಿಗೆ 61,796 ರೂ ದಂಡ ವಿಧಿಸಿದ ಸಿಇಓ!

ಬೀದಿ ದೀಪಗಳ ಖರೀದಿಯಲ್ಲಿ ನಡೆದಿದ್ದ ಅವ್ಯವಹಾರ ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮಂಡ್ಯತಾಲೂಕಿನ ಬೂದನೂರು ಗ್ರಾಮ ಪಂಚಾಯಿತಿಯಲ್ಲಿ ಕರ್ತವ್ಯದಲ್ಲಿದ್ದ ಮೂವರು ಪಿಡಿಒಗಳಿಗೆ 61,796 ರೂ ಗಳ ದಂಡವನ್ನು ವಿಧಿಸಲಾಗಿದೆ
ಬೂದನೂರು ಗ್ರಾಮ ಪಂಚಾಯಿತಿ
ಬೂದನೂರು ಗ್ರಾಮ ಪಂಚಾಯಿತಿ
Updated on

ಮಂಡ್ಯ: ಬೀದಿ ದೀಪಗಳ ಖರೀದಿಯಲ್ಲಿ ನಡೆದಿದ್ದ ಅವ್ಯವಹಾರ ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮಂಡ್ಯ ತಾಲೂಕಿನ ಬೂದನೂರು ಗ್ರಾಮ ಪಂಚಾಯಿತಿಯಲ್ಲಿ ಕರ್ತವ್ಯದಲ್ಲಿದ್ದ ಮೂವರು ಪಿಡಿಒಗಳಿಗೆ 61,796 ರೂ ಗಳ ದಂಡವನ್ನು ವಿಧಿಸಿ ಜಿಪಂ ಸಿಇಓ ಕೆ.ಯಾಲಕ್ಕಿಗೌಡ ಆದೇಶಹೊರಡಿಸಿದ್ದಾರೆ.

ಬೂದನೂರು ಗ್ರಾ.ಪಂ.ನಲ್ಲಿ ಪಿಡಿಒಗಳಾಗಿ ಕಾರ್ಯನಿರ್ವಹಿಸಿದ್ದವೇಳೆ ಅಕ್ರಮವೆಸಗಿದ್ದ ಹಾಲಿ ದುದ್ದ ಗ್ರಾ.ಪಂ. ಪಿಡಿಒ ಕೆ.ಸೌಭಾಗ್ಯಲಕ್ಷ್ಮೀ , ಹಲ್ಲೇಗೆರೆ ಪಿಡಿಒ ಎ.ಎಚ್.ಕಲಾ, ಈಗ ನಿವೃತ್ತಿಯಾಗಿರುವ ಕೆ.ಎಂ.ಶಿವಣ್ಣ ಅವರಿಗೆ ದಂಡವಿಧಿಸಿ,ಬಡ್ಡಿ ಸಮೇತ ಅಕ್ರಮವೆಸಗಿದ್ದ ಹಣವನ್ನು ಪಾವತಿಸುವಂತೆ ಆದೇಶ ಹೊರಡಿಸಲಾಗಿದೆ.

ವಾರದಹಿಂದೆಯಷ್ಟೇ ಬೆಂಗಳೂರಿಗೆ ವರ್ಗಾವಣೆಯಾಗಿರುವ ಈಹಿಂದಿನ ಮಂಡ್ಯಜಿಪಂ ಸಿಇಒ ಕೆ.ಯಾಲಕ್ಕಿಗೌಡ ಅವರು ವರ್ಗಾವಣೆಗೂ ಮುನ್ನ ಜು.23ರಂದು ಈ ಆದೇಶ ಹೊರಡಿಸಿದ್ದಾರೆ. ಅದರಂತೆ ಬೂದನೂರು ಗ್ರಾ.ಪಂ.ನಲ್ಲಿ ಪಿಡಿಒಗಳಾಗಿ ಕಾರ್ಯ ನಿರ್ವಹಿಸಿದ್ದ ಹಾಲಿ ದುದ್ದ ಗ್ರಾ.ಪಂ. ಪಿಡಿಒ ಕೆ.ಸೌಭಾಗ್ಯಲಕ್ಷ್ಮೀ , ಹಲ್ಲೇಗೆರೆ ಪಿಡಿಒ ಎ.ಎಚ್.ಕಲಾ, ಈಗ ನಿವೃತ್ತಿಯಾಗಿರುವ ಕೆ.ಎಂ.ಶಿವಣ್ಣ ಅವರು ಅಕ್ರಮವೆಸಗಿ ಹೆಚ್ಚುವರಿಯಾಗಿ ಪಾವತಿಸಿದ್ದ ಹಣವನ್ನು ಇದೀಗ ಸ್ವಂತವಾಗಿ ಪಾವತಿಸಬೇಕಿದೆ.

ಹಿನ್ನೆಲೆ: ಬೂದನೂರು ಗ್ರಾಪಂ ಕಚೇರಿಯಲ್ಲಿ 2016-17ನೇ ಸಾಲಿನಲ್ಲಿ ಈ ಮೂವರು ಬೀದಿದೀಪಗಳಿಗೆ ಸಿಎಫ್ ಎಲ್ ಬಲ್ಪ್ ಖರೀದಿಸುವಾಗ ಹೆಚ್ಚುವರಿಯಾಗಿ 50.138ರೂ. ಪಾವತಿಸಿದ್ದಾರೆಂದು ನಿಕಟಪೂರ್ವ ಗ್ರಾ.ಪಂ. ಸದಸ್ಯ ಬಿ.ಕೆ.ಸತೀಶ್ ಅವರು ಜಮಾಬಂಧಿ ಕಾರ್ಯಕ್ರಮದಲ್ಲಿ ದೂರಿದ್ದರು. ಜತೆಗೆ, ಜಿ.ಪಂ. ಸಿಇಒ ಅವರಿಗೂ ದೂರು ನೀಡಿದ್ದರು. ಅಲ್ಲದೆ, ಸತೀಶ್ ಅವರ ದೂರಿನ ಮೇರೆಗೆ ಜಮಾಬಂಧಿ ಅಕಾರಿಯಾಗಿದ್ದ ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ವಿವೇಕಾನಂದ ಅವರು ಜಿಪಂ ಸಿಇಒ ಅವರಿಗೆ ಹೆಚ್ಚಿನ ತನಿಖೆಗೆ ಪತ್ರ ಬರೆದಿದ್ದರು.

ಈ ಹಿನ್ನಲೆಯಲ್ಲಿ ಹಲವು ವಿಚಾರಣೆ ಬಳಿಕ ಜಂಟಿ ಇಲಾಖಾ ವಿಚಾರಣೆ ನಡೆಸಿ ಹೆಚ್ಚುವರಿಯಾಗಿ ಪಾವತಿಯಾಗಿದ್ದ 50,138 ರೂ. ಗಳಿಗೆ ಶೇ.8ರ ದರದಲ್ಲಿ 11,658 ರೂ. ಬಡ್ಡಿ ಸೇರಿದಂತೆ 61,796ರೂ.ಗಳನ್ನು ಮೂವರು ಪಿಡಿಒಗಳು ಪಾವತಿಸುವಂತೆ ಆದೇಶಿಸಿದ್ದಾರೆ. ಸೌಭಾಗ್ಯಲಕ್ಷ್ಮಿ ಅವರು 39,385ರೂ. ಕಲಾ ಅವರು 4,190ರೂ. ಪಾವತಿಸಬೇಕಿದೆ. ಆದರೆ ಶಿವಣ್ಣ ಅವರು ಸಿಸಿಎ ನಿಯಮಗಳನ್ವಯ ವಿಚಾರಣೆಗೆ ಸರಕಾರದಿಂದ ಅನುಮತಿ ಪಡೆದು ಬೂದನೂರು ಗ್ರಾ.ಪಂ.ಗೆ 18, 221 ರೂ. ಪಾವತಿಸಿದ್ದು, ಉಳಿಕೆ 4851ರೂ.ಗಳನ್ನು ಪಾವತಿಸಬೇಕಿದೆ.

ಸಾರ್ವಜನಿಕರ ತೆರಿಗೆ ಹಣ ಉಳಿಸಲು ನಾನು ಮಾಡಿದ ಹೋರಾಟಕ್ಕೆ ಗೆಲುವು ಸಿಕ್ಕಿರುವುದು ಸಂತಸ ತಂದಿದೆ. ಕೇವಲ ಒಂದು ವರ್ಷದ ಅವ್ಯವಹಾರವನ್ನು ತನಿಖೆಗೆ ಒಳಪಡಿಸಿದ್ದು, ಕಳೆದ ೧೦ ವರ್ಷಗಳ ಖರೀದಿ ಬಗ್ಗೆ ತನಿಖೆ ನಡೆಸಬೇಕು. ಜಿಲ್ಲೆಯ ಇತರ ಗ್ರಾ.ಪಂ.ಗಳಲ್ಲೂ ಖರೀದಿ ಅಕ್ರಮಗಳಿಗೆ ಕಡಿವಾಣ ಹಾಕಬೇಕು ಎಂದು ಬೂದನೂರಿನ ದೂರುದಾರ ಬಿ.ಕೆ.ಸತೀಶ್ ಹೇಳಿದ್ದಾರೆ.

ವರದಿ: ನಾಗಯ್ಯ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com