ಕೋವಿಡ್ ಎಫೆಕ್ಟ್: ಆದಾಯ ಗುರಿಯನ್ನು ಕಡಿತಗೊಳಿಸಿದ ಸಾರಿಗೆ ಇಲಾಖೆ
ಬೆಂಗಳೂರು: ಸಾರಿಗೆ ಇಲಾಖೆ ಪರಿಷ್ಕೃತ ಆದಾಯ ಗುರಿಯ ಕರಡನ್ನು ಸರ್ಕಾರಕ್ಕೆ ಸಲ್ಲಿಸಿದ್ದು,ಆದಾಯ ಗುರಿಯನ್ನು 6,617 ಕೋಟಿ ರೂಪಾಯಿಯಿಂದ 4.900 ರೂ.ಗೆ ಕಡಿತಗೊಳಿಸಲಾಗಿದೆ ಈ ಕರಡನ್ನು ರಾಜ್ಯಸರ್ಕಾರ ಸ್ವೀಕರಿಸಿದೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.
ಅಬಕಾರಿ, ಕರ್ಮಷಿಯಲ್ ಟ್ಯಾಕ್ಸ್, ನೋಂದಣಿ ಮತ್ತು ಮುದ್ರಾಂಕ, ಸಾರಿಗೆ ಇಲಾಖೆಗಳು ಸರ್ಕಾರಕ್ಕೆ ಹೆಚ್ಚಿನ ಆದಾಯ ತಂದುಕೊಡುವ ಮೂಲಗಳಾಗಿವೆ. ರಸ್ತೆ ತೆರಿಗೆ, ಹೊಸ ವಾಹನ ನೋಂದಣಿ ಶುಲ್ಕ, ಅನುಮತಿ ಶುಲ್ಕ, ಪಾವತಿಸಲಾಗದ ತೆರಿಗೆ ಮತ್ತು ದಂಡಗಳು, ಚಾಲನಾ ಪರವಾನಗಿ ಶುಲ್ಕ, ಚೆಕ್ ಪೋಸ್ಟ್ ಗಳಲ್ಲಿ ಪರಿಶೀಲನಾ ಶುಲ್ಕದಿಂದ ಸರ್ಕಾರ ಆದಾಯ ಗಳಿಸುತ್ತಿದೆ.
ಆದಾಗ್ಯೂ, ಎರಡು ತಿಂಗಳ ಲಾಕ್ ಡೌನ್ ನಿಂದಾಗಿ ಸಾರಿಗೆ ಇಲಾಖೆಯ ಆದಾಯಕ್ಕೆ ಸಾಕಷ್ಟು ಹೊಡೆತ ಬಿದಿದ್ದೆ.ಕೋವಿಡ್-19 ಪರಿಸ್ಥಿತಿಯ ಕಾರಣದಿಂದ ಜನರು ಸಾರ್ವಜನಿಕ ಸಾರಿಗೆ ಬಳಕೆಯನ್ನು ಕಡಿಮೆ ಮಾಡಿದ್ದು, ಸುರಕ್ಷತೆಗಾಗಿ ಖಾಸಗಿ ವಾಹನಗಳನ್ನು ಬಳಸುತ್ತಿದ್ದಾರೆ. ಮುಂದಿನ ಕೆಲ ತಿಂಗಳುಗಳಲ್ಲಿ ವಾಹನಗಳ ಮಾರಾಟ ಪರಿಸ್ಥಿತಿ ಸುಧಾರಿಸಬಹುದೆಂಬ ಭರವಸೆ ಹೊಂದಿರುವುದಾಗಿ ಸಾರಿಗೆ ಆಯುಕ್ತ ಎನ್. ಶಿವಕುಮಾರ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.
ತಿಂಗಳಿಗೆ 1.3 ಲಕ್ಷ ವಾಹನಗಳ ಮಾರಾಟ ಗುರಿ ಹೊಂದಲಾಗಿದ್ದು, ಜೂನ್ ನಲ್ಲಿ 92 ಸಾವಿರ ವಾಹನಗಳ ಮಾರಾಟವಾಗಿದೆ. ಜುಲೈನಲ್ಲಿ 72 ಸಾವಿರ ವಾಹನಗಳು ಮಾರಾಟವಾಗಿವೆ. ಆಗಸ್ಟ್ ನಲ್ಲಿ ತಮ್ಮ ಗುರಿಯನ್ನು ಸಾಧಿಸಬೇಕಾಗುತ್ತದೆ ಎಂದು ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಹೇಮಂತ್ ಕುಮಾರ್ ತಿಳಿಸಿದ್ದಾರೆ.
ಏಪ್ರಿಲ್ ಮತ್ತು ಮೇ ನಲ್ಲಿ ಸರಕು ಮತ್ತು ಪ್ರಯಾಣಿಕರ ವಾಹನಗಳಿಗೆ 350 ಕೋಟಿ ಮೊತ್ತದಷ್ಟು ತೆರಿಗೆ ವಿನಾಯಿತಿ ನೀಡಲಾಗಿದೆ. ಸೆಪ್ಟೆಂಬರ್ ವರೆಗೂ ವಿನಾಯಿತಿ ಮುಂದುವರೆಸಬೇಕೆಂಬ ಬೇಡಿಕೆಯಿದೆ. ಪಾವತಿಯನ್ನು ಮಾತ್ರ ಈಗ ಮುಂದೂಡಬಹುದು ಎಂದು ಇಲಾಖೆ ಹೇಳಿದೆ.