ಎಸ್ ಎಸ್ ಎಲ್ ಸಿ ಪರೀಕ್ಷೆ ಯಶಸ್ವಿ: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕೃತಜ್ಞತೆ

ಸವಾಲುಗಳ ನಡುವೆ ಯಶಸ್ವಿಯಾಗಿ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ನಡೆಯಲು ಕಾರಣರಾದ ಎಲ್ಲರಿಗೂ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ
Updated on

ಬೆಂಗಳೂರು: ಸವಾಲುಗಳ ನಡುವೆ ಯಶಸ್ವಿಯಾಗಿ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ನಡೆಯಲು ಕಾರಣರಾದ ಎಲ್ಲರಿಗೂ 
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

ಕೊರೋನಾ ಸವಾಲುಗಳ ನಡುವೆ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಅಡ್ಡಿಯಾಗಬಾರದು ಎಂದು ರಾಜ್ಯ ಸರ್ಕಾರ ಟೊಂಕಕಟ್ಟಿ 
ನಿಂತು, ಈ ವರ್ಷದ ಜೂನ್ 25 ರಿಂದ ಜುಲೈ 3 ರವರೆಗೆ, ಅತ್ಯಂತ ಯಶಸ್ವಿಯಾಗಿ ನಡೆಸಿದ ಎಸ್.ಎಸ್.ಎಲ್.ಸಿ ಪರೀಕ್ಷೆಗಳ
 ಫಲಿತಾಂಶ ನಿನ್ನೆ ಪ್ರಕಟವಾಗಿದೆ.

 ಶೇಕಡಾ 71.80 ರಷ್ಟು ಮಕ್ಕಳು ತೇರ್ಗಡೆಯಾಗಿದ್ದಾರೆ. ಆತಂಕಗಳನ್ನು ಮೀರಿ ಪರೀಕ್ಷೆ ಬರೆದ ಎಲ್ಲ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ 
ನನ್ನ ಶುಭ ಕಾಮನೆಗಳು.ತಮ್ಮ ಮುಂದಿನ ವಿದ್ಯಾಭ್ಯಾಸವು ಸುಗಮವಾಗಿ ನಡೆಯಲಿ.ತಮಗೆ ಉಜ್ವಲ ಭವಿಷ್ಯ ಲಭಿಸಲಿ ಎಂದು
 ಮುಖ್ಯಮಂತ್ರಿ ಶುಭ ಹಾರೈಸಿದ್ದಾರೆ.

ಫಲಿತಾಂಶದಲ್ಲಿ ಹಿನ್ನಡೆ ಕಂಡ ಮಕ್ಕಳು ಧೈರ್ಯ ದೃತಿಗೆಡದೆ ಮತ್ತಷ್ಟು ಪರಿಶ್ರಮ, ಆತ್ಮವಿಶ್ವಾಸದಿಂದ ಸಿದ್ದತೆ ನಡೆಸಿ, 
ಪೂರಕ ಪರೀಕ್ಷೆಗಳನ್ನು ಎದುರಿಸಿ ಉತ್ತೀರ್ಣರಾಗಲಿ. ಪರೀಕ್ಷೆಗೆ ಹಾಜರಾದ ಎಲ್ಲಾ ಮಕ್ಕಳ ಪೋಷಕರಿಗೆ, ಪರೀಕ್ಷೆಯನ್ನು 
ಯಶಸ್ವಿಯಾಗಿ ನಡೆಸಲು ಸಹಕರಿಸಿದ ಶಿಕ್ಷಕ ವೃಂದಕ್ಕೆ ನಾನು ಅಭಾರಿ ಎಂದು ತಿಳಿಸಿದ್ದಾರೆ.

ಹಿಂದೆಂದೂ ಕಾಣದ, ಕೇಳರಿಯದಂತಹ ಕೊರೋನಾ ಸವಾಲಿನ ಪರಿಸ್ಥಿತಿಗಳಲ್ಲಿ ಪರೀಕ್ಷೆ ಬರೆಯಲು ಮಕ್ಕಳನ್ನು ಸಿದ್ದಗೊಳಿಸಿದ
 ತಮ್ಮಲ್ಲರ ಕೊಡುಗೆಗೆ ಹಾಗೂ ರಾಜ್ಯ ಸರ್ಕಾರದ ಮೇಲಿನ ತಮ್ಮ ವಿಶ್ವಾಸಕ್ಕೆ ನಾನು ಋಣಿ. ಪ್ರಮುಖವಾಗಿ, ಸುರಕ್ಷಿತವಾಗಿ 
ಮತ್ತು ಯಶಸ್ವಿಯಾಗಿ ಪರೀಕ್ಷೆಗಳು ನಡೆಯಲು ಕಾರಣಕರ್ತರಾದ ಪ್ರಾಥಮಿಕ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್, ವಿಶೇಷವಾಗಿ 
ಸಾರಿಗೆ ಖಾತೆ ಹೊತ್ತ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರೂ ಒಳಗೊಂಡಂತೆ ಎಲ್ಲಾ ಸಚಿವರಿಗೆ, ಅಧಿಕಾರಿ ಮತ್ತು ಸಿಬ್ಬಂದಿಗೆ 
ನನ್ನ ಅಭಿನಂದನೆ ಸಲ್ಲಿಸುತ್ತೇನೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಅವಿರತ ಪ್ರಯತ್ನ ನಡೆಸಿ,ಇಡೀ ದೇಶ ಕರ್ನಾಟಕದತ್ತ ನೋಡುವಂತೆ ಮಾಡಿದೆ. ಕೊರೋನಾ
 ಸಾಂಕ್ರಾಮಿಕ ಇಡೀ ಜಗತ್ತನ್ನೇ ಬಾಧಿಸುತ್ತಿದ್ದು, ವಿಶ್ವದ ಬಹುತೇಕ ದೇಶಗಳು ಇದರಿಂದ ಬಾಧೆಗೆ ಒಳಗಾಗಿವೆ. ಭಾರತವೂ
 ಕೂಡ ಕಳೆದ ಕೆಲವು ತಿಂಗಳುಗಳಿಂದ ಕೊರೋನಾ ವಿರುದ್ಧ ಸಮರವನ್ನು ಸಾರಿದ್ದು, ದೇಶದ ನಾಗರಿಕರ ಸಹಕಾರಗಳಿಂದ,  ವೈರಾಣು ನಿಯಂತ್ರಿಸಲು ನಿರ್ಣಾಯಕ ಹೋರಾಟ ನಡೆಸುತ್ತಿದೆ. ರಾಜ್ಯ ಸರ್ಕಾರವೂ ಕೂಡ ಎಲ್ಲಾ ರೀತಿಯಲ್ಲಿ ಸಾಂಕ್ರಾಮಿಕ 
ನಿಯಂತ್ರಣಕ್ಕೆ ಪ್ರಯತ್ನ ನಡೆಸುತ್ತಲೇ ಇದೆ. ಇದಕ್ಕೆ ಸಾರ್ವಜನಿಕರ ಸಹಕಾರ ಕೋರುತ್ತಾ, ಎಸ್.ಎಸ್.ಎಲ್.ಸಿ ಪರೀಕ್ಷೆಗಳನ್ನು
 ಜನ ಮೆಚ್ಚುವಂತೆ ಯಶಸ್ವಿಯಾಗಿ ನಡೆಸಿದ ಇಡೀ ಆಡಳಿತ ಯಂತ್ರಕ್ಕೆ ಮತ್ತೊಮ್ಮೆ ನನ್ನ ಅಭಿನಂದನೆಗಳು ಎಂದು
 ಮುಖ್ಯಮಂತ್ರಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com