ಕುಡಿದ ಮತ್ತಿನಲ್ಲಿ ಪತ್ನಿ ಕೊಲೆ: ಚಾರ್ಜರ್ ವಿಷಯವಾಗಿ ಸ್ನೇಹಿತನ ಹತ್ಯೆ; ನಗರದಲ್ಲಿ ನಾಲ್ಕು ಮರ್ಡರ್
ಬೆಂಗಳೂರು: ವಿಭಿನ್ನ ಪ್ರಕರಣಗಳಲ್ಲಿ ಸೋಮವಾರ ನಾಲ್ಕು ಮಂದಿ ಕೊಲೆಗಿರುವ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ.
ನಗರದ ಯಲಹಂಕ ನ್ಯೂ ಟೌನ್ ನಲ್ಲಿ ಗಂಡ ಪತ್ನಿಗೆ ಇರಿದು ಕೊಂದಿದ್ದಾನೆ, ನಂದಿನಿ ಕೊಲೆಯಾದ ದುರ್ದೈವಿ, ಆಕೆಯ ಪತಿ ಜಾನ್ಸನ್ ದಿನಗೂಲಿ ನೌಕರನಾಗಿದ್ದು, ಭಾನುವಾರ ರಾತ್ರಿ ಕುಡಿದು ಬಂದಿದ್ದಾನೆ. ನಂತರ ದಂಪತಿ ನಡುವೆ ಜಗಳವಾಗಿದೆ, ಜಗಳ ಅತಿರೇಕಕ್ಕೋಗಿ ಕತ್ತರಿಯಿಂದ ಆಕೆಯ ಕುತ್ತಿಗೆಗಗೆ ಚುಚ್ಚಿದ್ದಾನೆ. ಸ್ಥಳದಲ್ಲೇ ಆಕೆ ಸಾವನ್ನಪ್ಪಿದ್ದಾಳೆ. ಆಕೆಯ ಕೂಗು ಕೇಳಿಸಿಕೊಂಡ ನೆರೆ ಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ, ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಚನ್ನಸಂದ್ರದ ಮನೆಯಲ್ಲಿ ಜಯಮ್ಮ ಎಂಬುವರು ಕೊಲೆಯಾಗಿದ್ದಾರೆ. ಜಯಮ್ಮ ಪತಿ ಅಪ್ಪಯ್ಯ, ಕರೆಂಟ್ ಬಿಲ್ ಪಾವತಿಸಲು ಹೋಗಿದ್ದರು, ಬಿಲ್ ಪಾವತಿಸಿ ಮನೆಗೆ ವಾಪಸ್ ಬರುವ ವೇಳೆ ಪತ್ನಿ ಶವ ಬೆಡ್ ಮೇಲಿತ್ತು, ಜೊತೆಗೆ ಮನೆಯಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದವು.
ಭಿಕ್ಷಾಟನೆ ವಿಚಾರವಾಗಿ ಬೆಂಗಳೂರು ಹೊರವಲಯ ಎಲೆಕ್ಟ್ರಾನಿಕ್ ಸಿಟಿ ಸಮೀಪದ ನೈಸ್ ರಸ್ತೆಯಲ್ಲಿ ಕಳೆದ ಶುಕ್ರವಾರ ಕೊಲೆಯಾಗಿತ್ತು. ರಾಮನಗರ ಮೂಲದ ರಾಜೇಂದ್ರ ಪ್ರಕರಣದ ಆರೋಪಿಗಳನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ನಿತ್ಯಾ ಮತ್ತು ದೇವಿ ಭಾವನಾ ಎಂಬುವರನ್ನು ಬಂಧಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ದಿನಗೂಲಿ ನೌಕರನೊಬ್ಬ ತನ್ನ ಸ್ನೇಹಿತನಿಂದಲೇ ಕೊಲೆಯಾಗಿದ್ದಾನೆ. ತಲಘಟ್ಟಪುರದ ಮಣಿ ಎಂಬಾತ ತನ್ನ ಫೋನ್ ಚಾರ್ಜ್ ಗೆ ಹಾಕಿದ್ದ, ಆದರೆ ಹುಸೇನ್ ಎಂಬಾತ ಮಣಿ ಫೋನ್ ಚಾರ್ಜರ್ ತೆಗೆದು ತನ್ನ ಮೊಬೈಲ್ ಗೆ ಹಾಕಿಕೊಂಡಿದ್ದ, ಈ ಸಂಬಂಧ ಇಬ್ಬರ ನಡುವೆ ಜಗಳ ಉಂಟಾಗಿದೆ. ನಂತರ ಹುಸೇನ್ ಮರದ ತುಂಡಿನಿಂದ ಮಣಿ ತಲೆಗೆ ಹೊಡೆದಿದ್ದಾನೆ, ಆದಾದ ನಂತರ ಆತನ ತಲೆಯನ್ನು ಕಲ್ಲಿನಿಂದ ಜಜ್ಜಿದ್ದಾನೆ. ಪೊಲೀಸರು ಆತನನ್ನು ಬಂಧಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ