ಮಂಗಳೂರು: ಮಲೆನಾಡಿನ 15 ಸ್ಥಳಗಳನ್ನು ಮತ್ಸ್ಯಧಾಮ ಎಂದು ಘೋಷಿಸುವಂತೆ ಕರ್ನಾಟಕ ಜೀವ ವೈವಿಧ್ಯ ಮಂಡಳಿ ಶಿಫಾರಸು ಮಾಡಿದೆ.
ಮೀನುಗಾರಿಕಾ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು ಭೇಟಿಯಾದ ಮಂಡಳಿ ಅಧ್ಯಕ್ಷ ಅನಂತ್ ಹೆಗ್ಡೆ ಆಸೀಸರ, ಅಪರೂಪದ ಮೀನುಗಳ ಸಂತತಿಯನ್ನು ಹೊಂದಿರುವ ನದಿಯ ತಟದ ಭಾಗಗಳನ್ನು ಮತ್ಸ್ಯಧಾಮ ಎಂದು ಘೋಷಿಸುವ ಮೂಲಕ ಮೀನುಗಳ ಸಂರಕ್ಷಣೆ ಮತ್ತು ಸಂತಾನೋತ್ಪತ್ತಿಗೆ ನೆರವಾಗಬೇಕು ಎಂದು ಮನವಿ ಮಾಡಿದರು.
ಈ ಪೈಕಿ ದಕ್ಷಿಣ ಕನ್ನಡದಲ್ಲಿ ಎಂಟು, ಮಂಡ್ಯದಲ್ಲಿ ಎರಡು, ಕೊಡುಗು ಜಿಲ್ಲೆಯಲ್ಲಿ ಎರಡು, ಉಡುಪಿ, ಉತ್ತರ ಕನ್ನಡ ಮತ್ತು ಕಲಬುರಗಿಯಲ್ಲಿ ತಲಾ ಒಂದು ಪ್ರದೇಶಗಳನ್ನು ಗುರುತಿಸಲಾಗಿದೆ.
ಸರ್ಕಾರ ಶೃಂಗೇರಿ, ತೋಡಿಕಾನ, ಶಿವನ ಸಮುದ್ರ, ಹರಿಹರಪುರ, ತಿಂಗಲೆ, ರಾಮನಾಥ ಪುರ ಸೇರಿದಂತೆ 11 ಸ್ಥಳಗಳನ್ನು 2009 ರಲ್ಲಿ ಮತ್ಸ್ಯಾಧಾಮಗಳೆಂದು ಘೋಷಿಸಿತ್ತು. ಮಹಸೀರ್, ಹರಗಿ, ಗರ್, ಬೆರಿಲ್, ಸೆತ್ನಾಯಿ ಬರ್ಬ್, ಗಾಜಿನ ಮೀನು, ಕಿಲ್ಲಿ ಮೀನು ಮತ್ತು ಇತರ ಅಪರೂಪದ ಮೀನಿನ ಸಂತತಿಗಳು ಅಲ್ಲಿವೆ ಎಂದು ಅನಂತ್ ಹೆಗ್ಡೆ ಆಸೀಸರ ತಿಳಿಸಿದರು.
Advertisement